ಸಾಲ ಪಡೆಯದ ರೈತನಿಗೆ ನೋಟಿಸ್
Team Udayavani, Aug 28, 2019, 10:58 AM IST
ಬೆಳಗಾವಿ: ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ ಸಾಲ ಪಡೆಯದಿದ್ದರೂ 11 ಲಕ್ಷ ರೂ. ಸಾಲ ಮರು ಪಾವತಿಸುವಂತೆ ರೈತನಿಗೆ ನೋಟಿಸ್ ನೀಡಿದ್ದನ್ನು ಖಂಡಿಸಿ ರೈತ ಸಂಘದ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಮೊಹ್ಮದಇಸ್ಮಾಯಿಲ್ ಮೌಲಾಸಾಬ ದೇವರಾಯ ಎಂಬವರಿಗೆ ಇಂಡಿಯನ್ ಓವರ್ಸೀಸ್ ಬ್ಯಾಂಕ್ನಿಂದ ನೋಟಿಸ್ ನೀಡಲಾಗಿದೆ. ಯಾವುದೇ ಸಾಲ ಪಡೆಯದಿದ್ದರೂ ಬಡ್ಡಿ ಸಮೇತ 11,07,139 ರೂ. ನೀಡುವಂತೆ ಬ್ಯಾಂಕಿನವರು ನೋಟಿಸ್ ಕಳುಹಿಸಿ ರೈತನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
2014-15ನೇ ಸಾಲಿನಲ್ಲಿ ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆಗೆ ರೈತ ಮೊಹ್ಮದಇಸ್ಮಾಯಿಲ್ ಕಬ್ಬು ಸಾಗಾಣಿಕೆ ಮಾಡಲು ವಾಹನದ ದಾಖಲೆ ಹಾಗೂ ಬಾಂಡ್ ನೀಡಿದ್ದರು. ಇದೇ ದಾಖಲಾತಿ ಆಧಾರದ ಮೇಲೆ ಇಂಡಿಯನ್ ಓವರ್ಸೀಸ್ ಬ್ಯಾಂಕಿನವರು ಹಾಗೂ ಕಾರ್ಖಾನೆಯವರು ಸೇರಿ ರೈತನ ಹೆಸರಿನಲ್ಲಿ 2014ರ ಫೆಬ್ರುವರಿ 6ರಂದು ಎಸ್ಬಿ ಖಾತೆ ತೆರೆದಿದ್ದಾರೆ. ಮರುದಿನ 7ರಂದು ರೈತನ ಹೆಸರಿನಲ್ಲಿ ಸಾಲ ಖಾತೆ ತೆಗೆದು 5.36 ಲಕ್ಷ ರೂ. ಮಂಜೂರಾತಿ ನೀಡಿ ಜಮಾ ಮಾಡಿದ್ದಾರೆ. ಈಗ ಬಡ್ಡಿ ಸಮೇತ 11 ಲಕ್ಷ ರೂ. ತುಂಬುವಂತೆ ನೋಟಿಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಶಿವಸಾಗರ ಕಾರ್ಖಾನೆಯವರು ತಮ್ಮ ಸಿಡಿಸಿಸಿಐ ಖಾತೆಗೆ ಈ ಹಣ ವರ್ಗಾಯಿಸಿಕೊಂಡಿದ್ದಾರೆ. ರೈತ ಮೊಹ್ಮದಇಸ್ಮಾಯಿಲ್ ಯಾವುದೇ ಸಾಲ ಪಡೆಯದಿದ್ದರೂ ಬ್ಯಾಂಕ್ ಹಾಗೂ ಕಾರ್ಖಾನೆಯವರು ರೈತನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಸಹಿ ಹಾಕಿ ಮೋಸ ಮಾಡಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ರೈತನಿಗೆ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿದ್ದಾರೆ.