ಭೂಮಿ ಮರುಭೂಮಿ ಆಗುತ್ತಿದೆ: ಯತಿರಾಜ್
Team Udayavani, Sep 9, 2019, 3:00 AM IST
ಮೈಸೂರು: ಇಡೀ ಜಗತ್ತಿನಲ್ಲಿ ಭೂಮಿಯ ಶೇ.75 ರಷ್ಟು ಮರುಭೂಮಿಯಾಗುತ್ತಿದೆ ಎಂದು ತುಮಕೂರು ವಿಜ್ಞಾನ ಕೇಂದ್ರದ ವಿಜ್ಞಾನಿ ಸಿ.ಯತಿರಾಜ್ ಆತಂಕ ವ್ಯಕ್ತಪಡಿಸಿದರು. ಅಭಿರುಚಿ ಪ್ರಕಾಶನ ಭಾನುವಾರ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ “ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಕ್ಕಿ-ಪುಕ್ಕ’ ಕಾರ್ಯಕ್ರಮದಲ್ಲಿ “ಜಗದ ಜ್ವರ’ದ ವಿಶೇಷ ಉಪನ್ಯಾಸ ನೀಡಿದರು.
ಬರ-ಇಂದು ಭೂಮಿ ಹಂತ ಹಂತವಾಗಿ ಮರುಭೂಮಿಯಾಗುತ್ತಿದೆ. ಪ್ರಪಂಚದ ಭೂಮಿಯ ಶೇ.75 ರಷ್ಟು ಮರುಭೂಮಿಯಾಗುತ್ತಿದೆ. ಇದರಲ್ಲಿ ಭಾರತದ ಶೇ.30 ಸೇರಿದೆ. 9.4 ಮಿಲಿಯನ್ ಎಕರೆ ಭೂ ಪ್ರದೇಶ ಮರುಭೂಮೀಕರಣಗೊಳ್ಳುತ್ತಿದೆ. ಇದಕ್ಕೆ ಜಾಗತಿಕ ತಾಪಮಾನವೇ ಕಾರಣ. ಜಗವೇ ಜ್ವರದಿಂದ ನರಳುತ್ತಿದೆ. ಇದರಿಂದಾಗಿಯೇ ಬರ ಮತ್ತು ಪ್ರವಾಹ ಒಟ್ಟಿಗೆ ಸಂಭವಿಸುತ್ತಿದೆ ಎಂದರು.
ಜಾಗತಿಕ ತಾಪಮಾನ ಹೆಚ್ಚಳ: ಪ್ರಪಂಚದ ಅತಿ ದೊಡ್ಡ ಮಳೆ ಕಾಡು ಅಮೆಜಾನ್ ಕಾಡುಗಳಿಗೆ ಬೆಂಕಿ ಬಿದ್ದಿರುವುದು ಮಾನವ ಪ್ರೇರಿತ. ಬ್ರೆಜಿಲ್ನ ಅಧ್ಯಕ್ಷರು ತಮ್ಮ ದೇಶವನ್ನು ಆರ್ಥಿಕತೆ ಹೆಚ್ಚು ಗಮನ ನೀಡುತ್ತಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈಗ ಭೂಮಿ ಸಂರಕ್ಷಣೆ ಹೊಣೆ ಯಾರದ್ದು ಎಂಬ ಪ್ರಶ್ನೆಗೆ ಮುನ್ನೆಲೆಗೆ ಬಂದಿದೆ. ತಮಿಳು ನಾಡಿನವರು ಹೆಚ್ಚು ಕಾವೇರಿ ಬಳಕೆ ಮಾಡುತ್ತಾ. ಸಂರಕ್ಷಣೆ ಹಾಗೂ ಸಂರಕ್ಷಣೆ ಅವರದ್ದು, ಎನ್ನುವಂತಿಲ್ಲ. ಎಲ್ಲರೂ ಒಟ್ಟಾಗಿ ಪರಿಸರ ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಆರ್ಥಿಕ ಬಿಕ್ಕಟ್ಟು ಮತ್ತು ರೈತರ ಬಿಕ್ಕಟ್ಟನ್ನು ಪರಿಹರಿಸಬಹುದೆಂದರು.
ನಿವೃತ್ತ ಪ್ರಾಧ್ಯಾಪಕ ಡಾ.ವಿ.ವಿ.ಬೆಳವಾಡಿ ಅವರು “ತೇಜಸ್ವಿ ಮತ್ತು ಕೀಟ ಪ್ರಪಂಚ’, ಡಾ.ಕೆ.ವೈ.ನಾರಾಯಣ “ಕೆ.ಪಿ.ಪೂರ್ಣಚಂದ್ರ ತೇಜಸ್ವಿ: ಲೋಹಿಯಾವಾದಿ ಗಾಂಧಿ ಪ್ರಯೋಗ’ ಕುರಿತು ಉಪನ್ಯಾಸ ನೀಡಿದರು.
ಜುಗಾರಿ ಕ್ರಾಸ್ ಇಂಗ್ಲಿಷ್ ಆವೃತ್ತಿ ಕೃತಿ ಬಿಡುಗಡೆ: ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಹಂಜ್ ಅವರು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸಿರುವ ತೇಜಸ್ವಿ ಅವರ “ಜುಗಾರಿ ಕ್ರಾಸ್’ ಪುಸ್ತಕವನ್ನು ವನ್ಯಜೀವಿ ತಜ್ಞರಾದ ಕೃಪಾಕರ ಮತ್ತು ಸೇನಾನಿ ಬಿಡುಗಡೆಗೊಳಿಸಿದರು.
ಅನುವಾದಕ ರವಿ ಹಂಜ್ ಮಾತನಾಡಿ, ಕೆ.ಪಿ.ಪೂಣಚಂದ್ರ ತೇಜಸ್ವಿ ಅವರ ಕಾದಂಬರಿ ಹಾಗೂ ಬರಹಗಳನ್ನು ವಿಶ್ವವ್ಯಾಪ್ತಿಯಾಗಿ ವ್ಯಾಪಿಸಬೇಕಿದೆ. ತೇಜಸ್ವಿ ಅವರ ಕಾಡು ಪ್ರಿಯರು ಎಂದು ಇತ್ತೀಚಿನ ದಿನಗಳು ಜನರು ಕಾಡುಗಳಲ್ಲಿ ಹೋಂ ಸ್ಟೇಗಳನ್ನು ಮಾಡಿಕೊಳ್ಳುತ್ತಿರುವುದು ದುರಂತ ಎಂದರು.