ಕುಕ್ಕೆ: ಮುಖ್ಯ ರಸ್ತೆ ಬದಿ ಕೃತಕ ಕೆರೆ!
Team Udayavani, Sep 16, 2019, 5:59 AM IST
ಸುಬ್ರಹ್ಮಣ್ಯ: ಬಿಲದ್ವಾರ ಬಳಿ ರಸ್ತೆ ಬದಿಯ ನೀರಿನಲ್ಲಿ ಮಹಿಳೆಯೊಬ್ಬರು ಸಾಗಿದರು.
ಸುಬ್ರಹ್ಮಣ್ಯ : ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ನಗರದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್ಪ್ಲಾನ್ ಕಾಮಗಾರಿ ಜಾರಿಯಲ್ಲಿದ್ದು, ಪ್ರಸ್ತುತ ಕುಮಾರಧಾರಾ-ಕಾಶಿಕಟ್ಟೆ ನಡುವೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಮುಖ್ಯ ರಸ್ತೆ ಬದಿಯಲ್ಲೇ ಕೃತಕ ಕೆರೆ ನಿರ್ಮಾಣಗೊಂಡಿದೆ.
ಮಳೆಗಾಲದ ಆರಂಭದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಮತ್ತೆ ಆರಂಭಿಸಲಾಗಿದೆ. ಆದರೆ ಮಳೆ ಬಂದಾಗ ನೀರು ಹರಿದು ಹೋಗಲು ಎಲ್ಲೂ ಅವಕಾಶವಿಲ್ಲದಿರುದಿರುವುದು ಕೃತಕ ಕೆರೆ ನಿರ್ಮಾಣವಾಗಲು ಕಾರಣ. ರಸ್ತೆಯ ಇಕ್ಕಲೆಗಳಲ್ಲಿರುವ ಅಂಗಡಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಭಾರೀ ತೊಂದರೆಗೊಳಗಾಗಿದ್ದಾರೆ.
ಮಹಿಳೆಯರು, ಶಾಲಾ ಮಕ್ಕಳು ಅಗೆದಿರಿಸಲಾದ ಮಳೆ ನೀರು ತುಂಬಿದ ಹೊಂಡಗಳಿಗೆ ಜಾರಿ ಬೀಳುವ ಘಟನೆಯೂ ನಡೆಯುತ್ತಿದೆ. ಕಾಮಗಾರಿಗೆ ವೇಗ ನೀಡಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕುಮಾರಧಾರೆ-ಕಾಶಿಕಟ್ಟೆ ನಡುವೆ ಏಕಮುಖ ರಸ್ತೆ ಸ್ವಲ್ಪ ದೂರ ಕಾಂಕ್ರೀಟ್ ಕಾಮಗಾರಿ ಆಗಿದ್ದು ಈ ರಸ್ತೆಯಲ್ಲಿ ಸಾರಿಗೆ ಬಸ್ ಸಹಿತ ಖಾಸಗಿ ಸರಕಾರಿ ವಾಹನಗಳು ಅತೀ ವೇಗದಲ್ಲಿ ಸಂಚರಿಸುತ್ತಿರುವುದರಿಂದಲೂ ಅಪಾಯ ಎದುರಾಗುವ ಸಾಧ್ಯತೆ ಇದೆ.