ನಿರಾಶ್ರಿತರ ಸಮಸ್ಯೆ ಸಮರ್ಪಕ ವರದಿ ಕೊಡಿ
Team Udayavani, Sep 16, 2019, 11:11 AM IST
ಕುಳಗೇರಿ ಕ್ರಾಸ್: ಪ್ರವಾಹ ಪೀಡಿತ ಬೀರನೂರಿಗೆ ಜಿಲ್ಲಾಧಿಕಾರಿ ಆರ್ .ರಾಮಚಂದ್ರನ್ ಭೇಟಿ ನೀಡಿದ್ದರು.
ಕುಳಗೇರಿ ಕ್ರಾಸ್: ಮಲಪ್ರಭಾ ಪ್ರವಾಹ ಪೀಡಿತ ಬೀರನೂರಿಗೆ ಜಿಲ್ಲಾಧಿಕಾರಿ ಆರ್ .ರಾಮಚಂದ್ರನ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿರಾಶ್ರಿತರ ಸಮಸ್ಯೆ ಹಾಗೂ ಸೌಲಭ್ಯಗಳ ಕುರಿತು ಸಮರ್ಪಕ ವರದಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ರಸ್ತೆ ಪಕ್ಕದ ಮನೆಗಳಿಗೆ ಭೇಟಿ ನೀಡಿ, ಗ್ರಾಮದಲ್ಲಿರುವ ನಿಮ್ಮ ಮನೆಯಲ್ಲೇ ವಾಸ ಮಾಡಿ, ರಸ್ತೆ ಪಕ್ಕ ವಾಸಿಸಬೇಡಿ ಎಂದು ಮನವಿ ಮಾಡಿದರು. ನಮ್ಮ ಮನೆಗಳು ಹಾನಿಯಾಗಿವೆ. ನಮಗೆ ಪರಿಹಾರ ಕೊಡಿಸಿ ಎಂದು ಸಂತ್ರಸ್ತರು ಕೇಳಿದರು.
ಗ್ರಾಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ವಿಚಾರಿಸಿದ ಜಿಲ್ಲಾಧಿಕಾರಿಗಳು ಚಿಕ್ಕಮಕ್ಕಳ ಆರೋಗ್ಯ ಸೇರಿದಂತೆ ಮಹಿಳೆಯರು-ವೃದ್ಧರ ಸಮಸ್ಯೆ ಆಲಿಸಿದರು.
ಜೋಪಡಿ ತೆರವು: ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ರಸ್ತೆಪಕ್ಕ ಹಾಕಿಕೊಂಡ ಪ್ರತಿಯೊಂದು ಜೋಪಡಿಗೆ
ಭೇಟಿ ನೀಡಿದ್ದ ಅಧಿಕಾರಿಗಳು, ಅರ್ಹ ಸಂತ್ರಸ್ತರನ್ನ ಗುರುತಿಸಿ ಅವರಿಗೆ ಶೆಡ್ ವ್ಯವಸ್ಥೆ ಮಾಡಿದರು. ರಸ್ತೆ ಪಕ್ಕ ಇದ್ದ ಸುಮಾರು 12 ಸಂತ್ರಸ್ತರಲ್ಲಿ ಇಬ್ಬರು ಮಾತ್ರ ನಿಜ ಸಂತ್ರಸ್ತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಧಿಕಾರಿಗಳ ತರಾಟೆ: ವಾರದಿಂದ ಮೇಲೆ ಸರ್ವೇ ಮಾಡಿ ಸರಿಯಾದ ವರದಿ ಸಲ್ಲಿಸದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಸರ್ಕಾರದಿಂದ ನಿರ್ಮಿಸಿದ ಶೆಡ್ಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಂದು ಶೆಡ್ಗೆ ತೆರಳಿ ಅಕ್ರಮವಾಗಿ ವಾಸಿಸುತ್ತಿದ್ದ ಕುಟುಂಬಗಳನ್ನು ಹೊರಗೆ ಕಳಿಸುವ ಮೂಲಕ ನಿಜವಾದ ನಿರಾಶ್ರಿತರಿಗೆ ಶೆಡ್ ಕಲ್ಪಿಸಿಕೊಟ್ಟರು. ಈ ಕುರಿತು ಸಮರ್ಪಕ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಸೂಚನೆ ನೀಡಿದರು.
ಬೀರನೂರಲ್ಲಿ ಇರುವ ಹಗೆಗಳನ್ನು ಮುಚ್ಚುವಂತೆ ಆದೇಶಿಸಿದರು. ಗ್ರಾಮದಲ್ಲಿ ಗಲೀಜು ಸ್ವಚ್ಛಗೊಳಿಸಿ ಜನರ ಆರೋಗ್ಯಕ್ಕೆ ತೊಂದರೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದರು. ಸಂತ್ರಸ್ತರ ಸೆಡ್, ಜೋಪಡಿ ವೀಕ್ಷಿಸಿ ನಂತರ ಹಳೇ ಗ್ರಾಮಕ್ಕೂ ತೆರಳಿ ಮನೆ ವೀಕ್ಷಣೆ ಮಾಡಿದರು.
ಮಾನವೀಯತೆ ಮೆರೆದ ಡಿಸಿ: ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಪತ್ರಕರ್ತರೊಬ್ಬರು ಗ್ರಾಮದ ರಸ್ತೆಯ ಕೆಸರಿನಲ್ಲಿ ಜಾರಿ ಬಿದ್ದದ್ದನ್ನು ಕಂಡು ತಾವೆ ಸ್ವತಃ ನೀರು ಹಾಕಿ ಕೆಸರನ್ನ ತೊಳೆಯುವ ಮೂಲಕ ಮಾನವೀಯತೆ ಮೆರೆದರು.
ಬಾಗಲಕೋಟೆ ಎಸಿ ಗಂಗಪ್ಪ, ತಹಶೀಲ್ದಾರ್ ಮಲ್ಲಿಕಾರ್ಜುನ, ಸಿಪಿಐ ರಮೇಶ ಹಾನಾಪುರ, ಪಿಎಸ್ಐ ಪ್ರಕಾಶ ಬಣಕಾರ ಹಾಜರಿದ್ದರು.