ಸ್ವಾತಂತ್ರ್ಯಾನಂತರದ ಕಳಂಕದಿಂದ ಭಾರತಕ್ಕೆ ಮುಕ್ತಿ: ಡಿವಿಎಸ್
Team Udayavani, Sep 23, 2019, 3:08 AM IST
ಬೆಂಗಳೂರು: ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದುಪಡಿಸುವ ಮೂಲಕ ಸ್ವಾತಂತ್ರ್ಯಾನಂತರ 70 ವರ್ಷಗಳಿಂದ ತೊಡೆದು ಹಾಕಬೇಕಿದ್ದ ಒಂದು ಕಳಂಕದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಕ್ತಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. “ಒಂದು ದೇಶ- ಒಂದು ಸಂವಿಧಾನ’ ರಾಷ್ಟ್ರೀಯ ಏಕತಾ ಅಭಿಯಾನದಡಿ ಬಿಜೆಪಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 370ನೇ ವಿಧಿ ರದ್ಧತಿ ಬಗ್ಗೆ ಜನ ಜಾಗರಣ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಹಿರಿಯರಿಗೆ ದೇಶದ ಮುಂದಿನ ಜನಾಂಗ ಸ್ವಾಭಿಮಾನಿಗಳಾಗಿ ಇರಬೇಕೆಂಬ ಆಶಯವಿತ್ತು. ದೇಶದ ಅಖಂಡತೆ, ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂಬ ಕಲ್ಪನೆಯಿತ್ತು. ಆದರೆ ದೇಶದಲ್ಲಿ ಕಾಂಗ್ರೆಸ್ ಆಡಳಿತ ಪ್ರಾರಂಭವಾದಾಗ ನಮ್ಮ ಹಿರಿಯ ಆಶೋತ್ತರ ಮರೆಯುವ ಕೆಲಸ ನಡೆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ದೇಶದ ಅಖಂಡತೆ, ಸಾರ್ವಭೌಮತೆಗೆ ದೊಡ್ಡ ಸವಾಲಾಗಿದ್ದ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ಅದಕ್ಕೆ ಪೂರಕವಾಗಿ ನಡೆದುಕೊಂಡರು. ಆ ಮೂಲಕ ಕಾಶ್ಮೀರವನ್ನು ಪ್ರತ್ಯೇಕ ದೇಶವನ್ನಾಗಿ ಇಡುವ ಕೆಲಸ ಮಾಡಿದರು ಎಂದು ಖಂಡಿಸಿದರು. ಪ್ರತ್ಯೇಕ ಧ್ವಜ, ವಿಶೇಷ ಸ್ಥಾನಮಾನ, ಸಂಸತ್ತಿನಲ್ಲಿ ಅನುಮೋದನೆಯಾದ ಕಾನೂನು ಕಾಶ್ಮೀರದ ವಿಧಾನಸಭೆಯಲ್ಲಿ ಅಂಗೀಕಾರವಾದರಷ್ಟೇ ಜಾರಿ. ಆರು ವರ್ಷ ಅವಧಿಯ ವಿಧಾನಸಭೆ ವ್ಯವಸ್ಥೆ ಯನ್ನು ಅಂದು ಕೇಂದ್ರ ಸಚಿವರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿಯವರು ಖಂಡಿಸಿದ್ದರು.
ಸಂವಿಧಾನ ನಿರ್ಮಾತೃ ಡಾ.ಬಿ.ಆರ್. ಅಂಬೇಡ್ಕರ್ ಅವರು ವಿರೋಧಿಸಿದ್ದರು ಎಂದು ಸ್ಮರಿಸಿದರು. ಕಾಶ್ಮೀರಕ್ಕೆ ನೀಡಲಾಗಿದ್ದ ಸ್ಥಾನಮಾನ ರದ್ದುಪಡಿಸುವುದು ಜನಸಂಘ, ಬಿಜೆಪಿಯ ಮೂಲ ಧ್ಯೇಯಗಳಲ್ಲಿ ಒಂದು. ಅದನ್ನು ಜಾರಿಗೊಳಿಸುವುದು ನಮ್ಮ ಜವಾಬ್ದಾರಿ. ಇದೇ ವಿಚಾರ ಕುರಿತು ಚರ್ಚಿಸಲು ಮಣಿಪಾಲ, ಉಡುಪಿಗೆ ಹೋಗಿದ್ದೆ. 500- 600 ಮಂದಿ ಸೇರಿದ್ದರು. ನಮ್ಮ ವಿರೋಧಿಗಳು ಕೂಡ ಸಭೆಯಲ್ಲಿ ಹಾಜರಿದ್ದು, ಅಭಿನಂದಿಸಿದ್ದು ಕಂಡುಬಂತು ಎಂದು ತಿಳಿಸಿದರು.
ನುಡಿದಂತೆ ನಡೆದ ಪ್ರಧಾನಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ವಿಧಿಸಲಾಗಿದ್ದ 370 ಹಾಗೂ 35ಎ ವಿಧಿ ರದ್ದುಪಡಿಸುವ ಮಾತು ನೀಡಲಾಗಿತ್ತು. ದೇಶದ ಹಿತಾಸಕ್ತಿಗಾಗಿ ನುಡಿದಂತೆ ನಡೆದ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿಯವರು. ಈ ಬಗ್ಗೆ ಜನರಿಗೆ ತಿಳಿಸಬೇಕು. ಬೆಂಗಳೂರಿನಲ್ಲಿ ವಾರ್ಡ್ ಮಟ್ಟದಲ್ಲಿ, ಅದಕ್ಕಿಂತಲೂ ಕೆಳಗೆ ಶಕ್ತಿಕೇಂದ್ರ ಹಂತದಲ್ಲಿ ಜನಸಾಮಾನ್ಯರಿಗೆ ಈ ಬಗ್ಗೆ ತಿಳಿಸಬೇಕು ಎಂದು ಕರೆ ನೀಡಿದರು.
ಪಿಒಕೆ ಸಮೇತ ದೇಶದೊಳಗೆ ತರುವ ವಿಶ್ವಾಸ: ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್, ಕಾಶ್ಮೀರಕ್ಕೆ ವಿಧಿಸಲಾಗಿದ್ದ 370 ಹಾಗೂ 35ಎ ವಿಧಿಯನ್ನು ರದ್ದುಪಡಿಸಿದ್ದನ್ನು ಯಾರೆಲ್ಲಾ ದೇಶಭಕ್ತರಿದ್ದಾರೋ ಅವರು ಸ್ವಾಗತಿ ಸಿದರೆ ಯಾರೆಲ್ಲಾ ರಾಷ್ಟ್ರ ವಿರೋಧಿಗಳಿದ್ದಾರೋ ಅವರು ವಿರೋಧಿಸಿದ್ದಾರೆ. ರಾಷ್ಟ್ರ ವಿರೋಧಿಗಳಿಗೆ ಒಂದು ಮಾತು ಹೇಳುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷದಲ್ಲಿ ಕಾಶ್ಮೀರ ಮಾತ್ರವಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸಮೇತ ಭಾರತದೊಳಗೆ ತರುವ ವಿಶ್ವಾಸವಿದೆ ಎಂದು ಹೇಳಿದರು.
ಕಾಶ್ಮೀರದ ಬಗ್ಗೆ ಶಂಕರಾಚಾರ್ಯರು ಉಲ್ಲೇಖೀಸಿದ್ದರು. ಶಾರದೆಯ ಪುರವಾಸಿನಿ ಕಾಶ್ಮೀರ. ಶಾರದೆಯ ನಾಡು, ಜ್ಞಾನವಂತರ ನಾಡು, ಪಂಡಿತರ ನಾಡು ಎಂದಿತ್ತು. ಆದರೆ 370ನೇ ವಿಧಿ ಕಾರಣಕ್ಕೆ ಪೆನ್ನಿನ ಮೂಲಕ ಜ್ಞಾನದ ಸಂಕೇತವಾಗಿದ್ದ ಕಾಶ್ಮೀರ ಗನ್ಗೆ ಆಡಳಿತ ಕೊಟ್ಟಿತ್ತು. ಜ್ಞಾನವಂತರು, ಪಂಡಿತರು ರೂಪುಗೊಳ್ಳಬೇಕಿದ್ದ ಕಾಶ್ಮೀರದಲ್ಲಿ ಭಯೋತ್ಪಾದಕರು ರೂಪುಗೊಂಡರು. ಆದರೆ ಈಚೆಗೆ ಬದಲಾವಣೆ ಶುರುವಾಗಿದೆ. ಮತ್ತೂಮ್ಮೆ ಶಾರದೆಯ ನಾಡಾಗಲಿದೆ. ಶಾರದೆ ಕುಣಿದಾಡಿದ ನಾಡಾಗಲಿದೆ. ಐದು ವರ್ಷಗಳಲ್ಲಿ ಪರಿವರ್ತನೆ ಯಾಗಲಿದೆ ಎಂದು ಹೇಳಿದರು.
ಕಾಶ್ಮೀರಕ್ಕೆ 370ನೇ ವಿಧಿ ಆಚರಣೆಗೆ ಬಂದಾಗ ಕಾಶ್ಮೀರದಲ್ಲಿ 3 ಕುಟುಂಬಗಳಿಗೆ ಸಂತೋಷವಾಯಿತು. ಆದರೆ ದೇಶದ 30 ಕೋಟಿ ಜನ ಕಣ್ಣೀರು ಹಾಕಿದ್ದರು. ಇತ್ತೀಚೆಗೆ ಪ್ರಧಾನಿ ಮೋದಿಯವರು 370ನೇ ವಿಧಿ ರದ್ದುಪಡಿಸಿದಾಗ ಮೂರು ಕುಟುಂಬಗಳು ಕಣ್ಣೀರು ಹಾಕಿದವು. ಆದರೆ ದೇಶದ 120 ಕೋಟಿ ಜನ ಅದಕ್ಕೆ ಬೆಂಗಾವಲಾಗಿ ನಿಂತರು. ದೇಶದ ಜನ ಸಂತೋಷದಲ್ಲಿದ್ದಾರೆ. ಕಾಶ್ಮೀರ ಇಂದು ಸ್ವತಂತ್ರವಾಗಿದೆ. ಐದು ವರ್ಷ ಅವಧಿಯ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿಸಿದರು.
ಉದಯವಾಣಿ ಕಚೇರಿ ಭೇಟಿ ಪ್ರಸ್ತಾಪ: ಉದಯವಾಣಿಯ ಮಣಿಪಾಲ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಉದಯವಾಣಿ ಮಣಿಪಾಲ ಕಚೇರಿಗೆ ತೆರಳಿದ್ದಾಗ ಮಣಿಪಾಲ್ ಗ್ರೂಪ್ನ ಆಡಳಿತ ನಿರ್ದೇಶಕ ಟಿ.ಗೌತಮ್ ಪೈ ಅವರನ್ನು ಭೇಟಿಯಾಗಿದ್ದೆ. ಆಗ ಕೇಂದ್ರ ಸರ್ಕಾರವು ಆರ್ಥಿಕತೆಗೆ ಸಂಬಂಧಪಟ್ಟಂತೆ ಇತ್ತೀಚೆಗೆ ತೆಗೆದುಕೊಂಡ ಕೆಲ ದಿಟ್ಟ ನಿರ್ಧಾರಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮುಂದೆಯೂ ಆರ್ಥಿಕತೆಯನ್ನು ಪ್ರಗತಿಯ ಹಾದಿಗೆ ತರುವ ನಿಟ್ಟಿನಲ್ಲಿ ಇನ್ನು ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದನ್ನು ಸದಾನಂದಗೌಡ ಸ್ಮರಿಸಿದರು.
ಗುಂಡಿ ಒತ್ತುವ ಮೂಲಕ ರದ್ದು: ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದತಿಯಾದ ಬಗೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ನಿರೂಪಿಸಿದ ಬಗೆ ಗಮನ ಸೆಳೆಯಿತು. ನೆರೆದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಜೆ.ಪಿ.ನಡ್ಡಾ, “ನೀವು (ಸಭಿಕರು) ಬೆರಳಿನಿಂದ ಗುಂಡಿ ಒತ್ತುವ ಮೂಲಕ ಕೇಂದ್ರ ಸಚಿವ ಸದಾನಂದಗೌಡ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದಿರಿ. ಲೋಕಸಭೆಯಲ್ಲಿ 303 ಸ್ವಂತ ಬಲವಿರುವ ಬಿಜೆಪಿ ಸಂಸದರು ಸೇರಿ 370ನೇ ವಿಧಿ ರದ್ದುಪಡಿಸಿದ್ದಾರೆ. 70 ವರ್ಷಗಳ ನಂತರ ನಡೆದ ಐತಿಹಾಸಿಕ ನಿರ್ಧಾರದಿಂದ ಅವರಿಗೆ ಎಷ್ಟು ಸಂತಸವಾಗಿರಬಹುದು ಎಂಬುದನ್ನು ಕೇಳಿ ನೋಡಿ. ಅವರಿಗೆ ಆ ಶಕ್ತಿಯನ್ನು ನೀವು (ಸಭಿಕರು) ಬೆರಳಿನಿಂದ ಗುಂಡಿ ಒತ್ತುವ ಮೂಲಕ ನೀಡಿದ್ದೀರಿ ಎಂದು ಬಣ್ಣಿಸಿದರು.