ಉಳ್ಳಾಲದಲ್ಲಿ ತಡರಾತ್ರಿ ಗುಂಡು ಹಾರಾಟ: ಯುವಕನಿಗೆ ಗಾಯ
Team Udayavani, Sep 23, 2019, 12:48 AM IST
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲೇರಿಯನಗರದಲ್ಲಿ ರವಿವಾರ ತಡರಾತ್ರಿ 12.30 ವೇಳೆಗೆ ಇನ್ನೋವ ಕಾರಿನಲ್ಲಿ ಆಗಮಿಸಿದ ತಂಡವೊಂದು ಯದ್ವಾತದ್ವ ಗುಂಡು ಹಾರಿಸಿದ್ದು ಯುವಕನೊಬ್ಬ ಗಾಯಗೊಂಡಿದ್ದಾನೆ.
ಸ್ಥಳೀಯ ನಿವಾಸಿ ಇರ್ಷಾದ್ (17) ಗಾಯಗೊಂಡ ವರು. ಕಾರಿನಲ್ಲಿ ಬಂದ ತಂಡದಲ್ಲಿ ಸುಮಾರು 7 ಮಂದಿ ಇದ್ದರು ಎನ್ನಲಾಗಿದೆ. ಮಂಗಳೂರು ಬಂದರು ನಿವಾಸಿ, ರಾಜಕೀಯ ಪಕ್ಷವೊಂದರ ಮುಖಂಡ ಸುಹೇಲ್ ಕಂದಕ ತಂಡದ ನೇತೃತ್ವ ವಹಿಸಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಐದು ಸುತ್ತು ಗುಂಡು ಹಾರಿಸಿದ್ದಾರೆ. ಆಗ ಸ್ಥಳದಲ್ಲಿದ್ದ ಇರ್ಷಾದ್ ತೀವ್ರವಾಗಿ ಗಾಯಗೊಂಡರು.
ಅವರನ್ನು ಸ್ಥಳೀಯರು ತತ್ಕ್ಷಣ ದೇರಳಕಟ್ಟೆಯ ಯೇನಪೊಯ ಆಸ್ಪತ್ರೆಗೆ ಸಾಗಿಸಲಾಗಿದೆ. ಗುಂಡು ಹಾರಾಟ ಶಬ್ದ ಕೇಳಿ ಸ್ಥಳೀಯರು ಆಗಮಿಸಿದಾಗ ಆರೋಪಿಗಳು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದರು ಎನ್ನಲಾಗಿದೆ. ಉದ್ರಿಕ್ತ ಸ್ಥಳೀಯರು ಕಾರನ್ನು ಧ್ವಂಸಗೊಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ವಾಟ್ಸ್ಆ್ಯಪ್ ಸ್ಟೇಟಸ್ ವಿವಾದ ಕಾರಣ?
ವಾಟ್ಸ್ಆ್ಯಪ್ ಸ್ಟೇಟಸ್ ವಿಚಾರದಲ್ಲಿ ರಾಜಕೀಯ ಕಾರ್ಯಕರ್ತರೊಳಗೆ ವಿವಾದವಾಗಿದ್ದು, ಈ ವಿಚಾರದಲ್ಲಿ ಮಾತುಕತೆ ನಡೆಸಲೆಂದು ಸುಹೈಲ್ ಮತ್ತು ತಂಡದವರು ಉಳ್ಳಾಲಕ್ಕೆ ಆಗಮಿಸಿದ್ದರು. ಈ ಸಂದರ್ಭ ಕಿಲೇರಿಯಾ ನಗರ ಕಡಪ್ಪರ ಮೂಲದ ಯುವಕರ ತಂಡ ಸುಹೈಲ್ ಮತ್ತಿತರರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿತು. ಆಗ ಸುಹೈಲ್ ಆತ್ಮರಕ್ಷಣೆ ಗಾಗಿ ಗುಂಡು ಹಾರಿಸಿದರು ಎಂದು ತಿಳಿದು ಬಂದಿದೆ.