ಒಳನುಸುಳುವಿಕೆ ಪ್ರಯತ್ನ; ಭಾರತೀಯ ಸೇನೆಗೆ ಹೆದರಿ ಓಡಿದ ಪಾಕ್ ಉಗ್ರರು
Team Udayavani, Oct 6, 2019, 9:35 AM IST
ಶ್ರೀನಗರ: ಭಾರತದ ಗಡಿಯೊಳಗೆ ಒಳನುಸುಳಲು ಪ್ರಯತ್ನ ನಡೆಸಿದ್ದ ಉಗ್ರರನ್ನು ಭಾರತೀಯ ಗಡಿ ರಕ್ಷಣಾ ಪಡೆ ಓಡಿಸಿದೆ. ಗಡಿ ನಿಯಂತ್ರಣ ರೇಖೆಯ ಬಾರಮುಲ್ಲಾ ಸೆಕ್ಟರ್ ಬಳಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.
4 ರಿಂದ 5 ಜನರಿದ್ದ ಗುಂಪೊಂದು ಭಾರತ ಗಡಿಯೊಳಗೆ ನುಸುಳಲು ಪ್ರಯತ್ನ ನಡೆಸಿತ್ತು. ಈ ವೇಳೆ ಗಡಿ ರಕ್ಷಣಾ ಪಡೆಯ ಯೋಧರು ಅವರ ಮೇಲೆ ದಾಳಿ ನಡೆಸಿದ್ದರು. ಉಗ್ರರು ಕೂಡಾ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆದರೆ ಸೇನೆಯ ದಾಳಿಯೆದುರು ನಿಲ್ಲಲಾಗದೆ ಪಾಕ್ ಆಕ್ರಮಿತ ಕಾಶ್ಮೀರದ ಕಡೆ ಪಲಾಯನಗೈದಿದ್ದಾರೆ ಎಂದು ವರದಿಯಾಗಿದೆ.
ಕಳೆದ ಮಂಗಳವಾರ ಕೂಡಾ ಇದೇ ಜಾಗದಲ್ಲಿ ಉಗ್ರರು ಒಳನುಸುಳಲು ಪ್ರಯತ್ನಿಸಿದ್ದು, ಸೇನೆ ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದು, ಇಬ್ಬರು ಉಗ್ರರನ್ನು ಹೊಡೆದುರಿಳಿಸಿದೆ.