ಹುಬ್ಬಳ್ಳಿ ಬಾಂಬ್ ಸ್ಫೋಟದ ತನಿಖೆ ಮುಂದುವರಿದಿದೆ
Team Udayavani, Oct 23, 2019, 3:03 AM IST
ಬೆಂಗಳೂರು: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಪೊಲೀಸರ ಜತೆಯೂ ಘಟನೆ ಸಂಬಂಧ ಮಾತನಾಡುತ್ತಿದ್ದೇವೆ. ಆದರೆ, ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಬಾಕ್ಸ್ ಎಲ್ಲಿಂದ, ಹೇಗೆ ಬಂತು ಎಂಬುದು ತನಿಖೆಯಾಗುತ್ತಿದೆ. ತನಿಖೆ ಪೂರ್ಣವಾಗುವವರೆಗೆ ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು. ಎನ್ಆರ್ಸಿ ಸಾಧಕ-ಬಾಧಕ ಕುರಿತು ರಾಜ್ಯದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಅದನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎನ್ಆರ್ಸಿ ನಿಯಮ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ನಾವು ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೆರೆ ಕೇಂದ್ರಕ್ಕೂ ಎನ್ಆರ್ಸಿಗೂ ಸಂಬಂಧವಿಲ್ಲ. ಪಾಸ್ಪೋರ್ಟ್, ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದುಕೊಳ್ಳುವವರನ್ನು ಪತ್ತೆ ಮಾಡಿ ಸೆರೆ ಕೇಂದ್ರದಲ್ಲಿರಿಸಿ ದೆಹಲಿಯ ರಾಯಭಾರ ಕಚೇರಿಗೆ ಕಳುಹಿಸುತ್ತೇವೆ. ಅಲ್ಲಿಂದ ಅವರ ದೇಶಕ್ಕೆ ಕಳುಹಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.