ಸುರಕ್ಷತೆಗೆ 8 ಸಮನ್ವಯ ಸಮಿತಿ
Team Udayavani, Oct 24, 2019, 3:09 AM IST
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನಗರದಲ್ಲಿ ತರಹೇವಾರಿ ಪಟಾಕಿಗಳು ಸದ್ದು ಮಾಡಲಾರಂಭಿಸಿವೆ. ಈ ನಡುವೆ ನಗರದ ಜನತೆ ಸುರಕ್ಷಿತವಾಗಿ ಸಂಭ್ರಮದಿಂದ ಹಬ್ಬವನ್ನು ಆಚರಿಸಲು ಪೂರಕವಾಗಿ ನಗರ ಪೊಲೀಸ್ ವಿಭಾಗ ಮತ್ತು ಬಿಬಿಎಂಪಿ ಕಾರ್ಯಪ್ರವೃತ್ತವಾಗಿವೆ.
ತುರ್ತು ಸಂದರ್ಭ ಹಾಗೂ ಅಗ್ನಿ ಅವಘಡ ತಪ್ಪಿಸಲು ಏನೆಲ್ಲ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು, ದುರ್ಘಟನೆ ನಡೆದಾಗ ಯಾವ ರೀತಿಯ ರಕ್ಷಣಾ ಕ್ರಮಗಳನ್ನು ತ್ವರಿತಗತಿಯಲ್ಲಿ ಮಾಡಬೇಕು ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ “ಸಮನ್ವಯ ಸಮಿತಿ’ ರಚನೆ ಮಾಡಲಾಗಿದೆ.
ಬಿಬಿಎಂಪಿಯ ಎಂಟು ವಲಯಗಳಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ, ಸಾರ್ವಜನಿಕ ಆರೋಗ್ಯ ಇಲಾಖೆ, ಬಿಬಿಎಂಪಿ ಆರೋಗ್ಯ ವಿಭಾಗ, ಅಗ್ನಿಶಾಮಕ ಸಿಬ್ಬಂದಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆಯಾ ವಲಯ ಬಿಬಿಎಂಪಿಯ ಸಹಾಯಕ ಎಂಜಿನಿಯರ್ಗಳು ಈ ಸಮಿತಿಯಲ್ಲಿ ಕರ್ತವ್ಯನಿರ್ವಹಿಸಲಿದ್ದಾರೆ. ಸಮಿತಿಯ ಪ್ರತಿ ಸದಸ್ಯರು ಪರಸ್ಪರ ಸಂಪರ್ಕ ಸಂಖ್ಯೆಗಳನ್ನು ಬದಲಿಸಿಕೊಂಡು ಸಾರ್ವಜನಿಕ ಪೂರಕವಾಗಿ ಕೆಲಸ ಮಾಡಲು ಸೂಚಿಸಲಾಗಿದೆ.
ಪ್ರಮುಖವಾಗಿ ಸಮೀಪದ ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆ, ಸಾರ್ವಜನಿಕ ಅಥವಾ ಬಿಬಿಎಂಪಿ ಆಸ್ಪತ್ರೆಯನ್ನು ಗುರುತಿಸಿಕೊಂಡು, ಘಟನೆ ನಡೆದಾಗ ಹೇಗೆ ಕಾರ್ಯನಿರ್ವಹಿಸಬೇಕು ಎಂದು ಮಾರ್ಗದರ್ಶನ ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಯಾವ ವಿಚಾರಕ್ಕೆ ಯಾರನ್ನು ಸಂಪರ್ಕಿಸಬೇಕು ಎಂದು ಸಂಪರ್ಕ ಸಂಖ್ಯೆಗಳನ್ನು ನೋಂದಾಯಿಸಿ ಅಲ್ಲಲ್ಲಿ ಸಾರ್ವಜನಿಕ ಪ್ರಕಟಣೆ ನೀಡವಂತೆಯೂ ಸೂಚಿಸಲಾಗಿದೆ. ಇದರೊಂದಿಗೆ ಮುಖ್ಯವಾಗಿ ಪಟಾಕಿ ಮಾರಾಟ ಮಳಿಗೆಗಳು, ಮಾರಾಟ ಪ್ರದೇಶಗಳಲ್ಲಿ ಈ ಸಮಿತಿ ಹೆಚ್ಚು ನಿಗಾವಹಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಔಷಧ, ವೈದ್ಯರು ಕಡ್ಡಾಯ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಸಾರ್ವಜನಿಕ ಆರೋಗ್ಯ ಕೇಂದ್ರ, ಬಿಬಿಎಂಪಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸುಟ್ಟಗಾಯ, ಕಣ್ಣಿಗೆ ಸಂಭಂಧಿಸಿದ, ಅಸ್ತಮಾ, ಕೆಮ್ಮು ಸೇರಿ ಪಟಾಕಿ ಸಿಡಿದಾಗ ಉಂಟಾಗುವ ರೋಗಗಳಿಗೆ ಕಡ್ಡಾಯವಾಗಿ ಔಷಧಗಳನ್ನು ಮೊದಲೇ ಶೇಖರಣೆ ಮಾಡಿಕೊಳ್ಳಬೇಕು. ಪಾಳಿ ಮಾದರಿಯಲ್ಲಿ ದಿನದ 24 ಗಂಟೆ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಒಂದು ವೇಳೆ ಆರೋಗ್ಯ ಕೇಂದ್ರದಲ್ಲಿ ಗಾಯಾಳುವಿಗೆ ಸ್ಪಂದಿಸದಿದ್ದರೆ ಅಂತಹ ಸಿಬ್ಬಂದಿ ಅಥವಾ ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.
460 ಪಟಾಕಿ ಮಳಿಗೆಗಳು: ಎಂಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ 54 ಬಿಬಿಎಂಪಿ ಮೈದಾನಗಳಲ್ಲಿ 460 ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಮೈದಾನದಲ್ಲಿ ಒಂದು ಅಗ್ನಿಶಾಮಕ ವಾಹನ, ಸ್ಥಳೀಯ ಪೊಲೀಸ್ ಸಿಬ್ಬಂದಿ ನಿಯೊಜಿಸಲಾಗಿದೆ. ಹಾಗೇ ಅಗ್ನಿಶಾಮಕ ದಳದಿಂದ ಕೆಲವೊಂದು ಮಾರ್ಗಸೂಚಿಗಳನ್ನು ಪಟಾಕಿ ಮಾರಾಟಗಾರರಿಗೆ ನೀಡಲಾಗಿದ್ದು,
ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡಬಾರದು. ಒಂದು ವೇಳೆ ಅಕ್ರಮವಾಗಿ ಮಾರಾಟ ಮಾಡಿ, ಅವಘಡ ಸಂಭವಿಸಿದರೆ ಅದಕ್ಕೆ ಮಳಿಗೆ ಮಾಲೀಕರೇ ಹೊಣೆ. ಮೈದಾನಗಳಲ್ಲಿ ಮಳಿಗೆ ತೆರೆಯುವ ಮಾಲೀಕರು ಮುನ್ನೆಚ್ಚರಿಕಾ ಕ್ರಮವಾಗಿ ನೀರು, ಬೆಂಕಿ ನಂದಕ ಇಟ್ಟುಕೊಳ್ಳಬೇಕು. ರಾತ್ರಿ ವೇಳೆ ಮಳಿಗೆಯಲ್ಲಿ ಮಲಗಬಾರದು ಹಾಗೂ ಇತರೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು.
ಪೊಲೀಸರಿಂದ ಜಾಗೃತಿ: ನಗರದಲ್ಲಿ ಪಟಾಕಿ ಸಿಡಿಸುವಾಗ ಪ್ರತಿ ವರ್ಷ 15-20 ಮಕ್ಕಳ ಕಣ್ಣಿಗೆ ಹಾನಿಯಾಗುತ್ತಿದೆ. ಹಾಗೆಯೇ ಮಕ್ಕಳು ಸೇರಿ ನೂರಕ್ಕೂ ಅಧಿಕ ಮಂದಿ ಪಟಾಕಿ ಅವಘಡದಿಂದ ಗಾಯಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್, ಟ್ವಿಟರ್ ಮೂಲಕ ಒಂದೆರಡು ದಿನಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತೇವೆ. ಅಲ್ಲದೆ, ಠಾಣಾ ವ್ಯಾಪ್ತಿಗಳಲ್ಲೂ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಎಂಟು ವಲಯಗಳಲ್ಲಿ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನೊಳಗೊಂಡ “ಸಮನ್ವಯ ಸಮಿತಿ’ ರಚಿಸಲಾಗಿದೆ. ಹಾಗೇ 24 ಗಂಟೆಯೂ ಬಿಬಿಎಂಪಿ ಆಸ್ಪತ್ರೆಗಳು, ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ.
-ಬಿ.ಎಚ್.ಅನಿಲ್ಕುಮಾರ್, ಬಿಬಿಎಂಪಿ ಆಯುಕ್ತ
* ಮೋಹನ್ ಭದ್ರಾವತಿ