ಮುಂಚಿತವಾಗಿಯೇ “ಆ ದೃಶ್ಯ’ ಬಿಡುಗಡೆ
ನ.8ರಂದು ಪ್ರೇಕ್ಷಕರ ಮುಂದೆ ಸಸ್ಪೆನ್ಸ್ ಚಿತ್ರ
Team Udayavani, Oct 31, 2019, 3:04 AM IST
ರವಿಚಂದ್ರನ್ ಅಭಿನಯದ “ಆ ದೃಶ್ಯ’ ಚಿತ್ರ ನವೆಂಬರ್ 15 ಕ್ಕೆ ತೆರೆಗೆ ಬರಲು ಸಿದ್ಧವಾಗಿತ್ತು. ಚಿತ್ರತಂಡ ಕೂಡ ಚಿತ್ರವನ್ನು ನ.15ಕ್ಕೆ ತೆರೆಗೆ ತರುವುದಾಗಿ ಘೋಷಿಸಿಕೊಂಡಿತ್ತು. ಆದರೆ ಈಗ ಬದಲಾದ ಬೆಳವಣಿಗೆಯಲ್ಲಿ “ಆ ದೃಶ್ಯ’ ಚಿತ್ರ, ಮೊದಲು ಘೋಷಣೆ ಮಾಡಿದ್ದಕ್ಕಿಂತ ಸುಮಾರು ಹತ್ತು ದಿನ ಮೊದಲೇ ತೆರೆಗೆ ಬರುತ್ತಿದೆ. ಹೌದು, “ಆ ದೃಶ್ಯ’ ಚಿತ್ರದ ಬಿಡುಗಡೆಯನ್ನು ಸದ್ಯ ಪ್ರೀ-ಪೋನ್ ಮಾಡಿಕೊಂಡಿರುವ ಚಿತ್ರತಂಡ ನ. 15ರ ಬದಲಾಗಿ, ನ.8ಕ್ಕೆ ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದೆ.
ನವೆಂಬರ್ ತಿಂಗಳು ನಿರ್ಮಾಪಕ ಕೆ. ಮಂಜು ಅವರಿಗೆ ಲಕ್ಕಿ ತಿಂಗಳು ಎನ್ನಲಾಗಿದ್ದು, ಕೆ. ಮಂಜು ನಿರ್ಮಾಣದ ಬಹುತೇಕ ಹಿಟ್ ಚಿತ್ರಗಳು ಇದೇ ತಿಂಗಳಿನಲ್ಲಿ ತೆರೆಗೆ ಬಂದಿದ್ದವು. ಹಾಗಾಗಿ ಈ ಬಾರಿ ಕೂಡ ಕೆ. ಮಂಜು ನವೆಂಬರ್ 8ಕ್ಕೆ ಚಿತ್ರವನ್ನು ತೆರೆಗೆ ತರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಹಿಂದೆ ರವಿಚಂದ್ರನ್ “ದೃಶ್ಯ’ ಸಿನಿಮಾದಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ಇಷ್ಟವಾಗಿದ್ದರು.
ಈ ಚಿತ್ರದಲ್ಲೂ ಅಂಥದ್ದೇ ಮರ್ಡರ್ ಮಿಸ್ಟರಿ ಕಂಟೆಂಟ್ ಇರುವುದರಿಂದ ಚಿತ್ರಕ್ಕೆ “ಆ ದೃಶ್ಯ’ ಎಂದು ಹೆಸರಿಡಲಾಗಿದೆ. ಈ ಹಿಂದೆ “ಜಿಗರ್ ಥಂಡ’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಶಿವ ಗಣೇಶ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ಎರಡು ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್, ರಮೇಶ್ ಭಟ್, ಯಶ್ ಶೆಟ್ಟಿ, ಅರ್ಜುನ್ ಗೌಡ, ಚೈತ್ರ ಆಚಾರ್ ಮೊದಲಾದವರು “ಆ ದೃಶ್ಯ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ “ಆ ದೃಶ್ಯ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆ ಒಂದು ಕಡೆ ರವಿಚಂದ್ರನ್ ರವಿಚಂದ್ರನ್ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗುತ್ತಿರುವಾಗ “ಆ ದೃಶ್ಯ’ ಚಿತ್ರ ಅಂದುಕೊಂಡಿದ್ದಕ್ಕಿಂತ ಮೊದಲೇ ತೆರೆಗೆ ಬರುತ್ತಿರುವ ಸುದ್ದಿ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಒಂದಷ್ಟು ಖುಷಿ ನೀಡಿದೆ.
ರವಿಚಂದ್ರನ್ ಮುಡಿಗೆ ಗೌರವ ಡಾಕ್ಟರೇಟ್
ವರನಟ ರಾಜಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ಸ್ಟಾರ್ ಅಂಬರೀಶ್, ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ನಂತರ ಕನ್ನಡದ ಮತ್ತೂಬ್ಬ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಗೌರವ ಡಾಕ್ಟರೇಟ್ ಪದವಿಗೆ ಪಾತ್ರವಾಗುತ್ತಿದ್ದಾರೆ. ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ಗೆ ರವಿಚಂದ್ರನ್ ಅವರನ್ನು ಆಯ್ಕೆ ಮಾಡಲಾಗಿದ್ದು, ನ. 3 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರಿಗೆ ಸಿಎಮ್ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಧಾನ ಮಾಡಲು ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ.
ಈ ಹಿಂದೆ ಕೂಡ ಹಲವು ಬಾರಿ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಬಾರಿ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸುವ ಮೂಲಕ ಅಭಿಮಾನಿಗಳ ಹಲವು ವರ್ಷದ ಆಸೆ ಈಡೇರಿದಂತಾಗಿದೆ.
ನಿರ್ಮಾಪಕ ವೀರಾಸ್ವಾಮಿ ಪುತ್ರ ರವಿಚಂದ್ರನ್ 1971ರಲ್ಲಿ ಬಾಲನಟನಾಗಿ “ಕುಲ ಗೌರವ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ರವಿಚಂದ್ರನ್, ನಂತರ ನಾಯಕ, ನಿರ್ದೇಶಕ, ನಿರ್ಮಾಪಕ, ಗೀತ ರಚನೆಗಾರ, ಸಂಗೀತ ನಿರ್ದೇಶಕ, ಸಂಭಾಷಣೆಕಾರನಾಗಿ ಚಿತ್ರರಂಗದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 85ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ ರವಿಚಂದ್ರನ್, ಸದ್ಯ “ಆ ದೃಶ್ಯ’, “ರಾಜೇಂದ್ರ ಪೊನ್ನಪ್ಪ’, “ರವಿ ಬೊಪ್ಪಣ್ಣ’ ಚಿತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.