ನಿರಂತರ ಕಲಿಕೆಗಾರರನ್ನು ಸೃಷ್ಟಿಸುವವನೇ ಉತ್ತಮ ಶಿಕ್ಷಕ
Team Udayavani, Nov 7, 2019, 3:00 AM IST
ಮೈಸೂರು: ಮಾನವ ಸಂಪನ್ಮೂಲ ಹರಿವಿನ ಮಾರ್ಗ ಕಾಲೇಜುಗಳಲ್ಲಿ ಇರುವುದರಿಂದ ಶಿಕ್ಷಕರು ಸ್ವ-ಪ್ರಯತ್ನದಿಂದ ತಮ್ಮನ್ನು ರೂಪಿಸಿಕೊಳ್ಳಬೇಕೆಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ತಿಳಿಸಿದರು.
ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ತಮ್ಮ ಸೋದರ ಸಂಸ್ಥೆಗಳಲ್ಲಿ ಹೊಸದಾಗಿ ಶಿಕ್ಷಕ ವೃತ್ತಿ ಪ್ರವೇಶಿಸಿರುವ ಶಿಕ್ಷಕರಿಗಾಗಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದೆ ಶಿಕ್ಷಕರು ಮಾಹಿತಿ, ವಿಜ್ಞಾನ ಮತ್ತು ಬುದ್ಧಿವಂತಿಕೆ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಜ್ಞಾನ ಸಾಧಿಸಿ: ಶಿಕ್ಷಕರ ಯೋಜಿತ ಪುನಶ್ಚೇತನ ಕಾರ್ಯಕ್ರಮ ಕಲಿಕೆ ವಾತಾವರಣ ಮತ್ತು ಶಿಕ್ಷಕರ ಹೆಚ್ಚಿನ ಆದ್ಯತೆ ಅಗತ್ಯ ಗಣನೆಗೆ ತೆಗೆದುಕೊಳ್ಳುತ್ತಾ ವಿವೇಕಯುತವಾಗಿ ಮಾಹಿತಿ ಪಡೆದುಕೊಳ್ಳಲು ಒತ್ತು ನೀಡುತ್ತದೆ. ಅಲ್ಲದೆ, ಪರಿಣಾಮಕಾರಿ ಶಿಕ್ಷಕರಾಗಲು ಅಗತ್ಯ ಜ್ಞಾನ ಮತ್ತು ಕೌಶಲ್ಯ ಸಾಧಿಸಲು ಸಹಾಯ ಮಾಡುತ್ತದೆ.
ಜೊತೆಗೆ ವೃತ್ತಿಪರ ಬೆಂಬಲ ಒದಗಿಸಿ ನಿರ್ಧಾರಿತ ಪ್ರಕ್ರಿಯೆ ಮತ್ತು ನಿಶ್ಚಿತ ಸಮಯದೊಂದಿಗೆ ಇಡೀ ಚಿತ್ರಣದ ತುಣುಕುಗಳು ಹೇಗೆ ಹೊಂದಿಕೊಳ್ಳುತ್ತವೆಂದು ಶಿಕ್ಷಕರಿಗೆ ಮನವರಿಕೆ ಮಾಡಿಕೊಡಲು ಒಂದು ವೇದಿಕೆ ಆಗುತ್ತದೆ ಎಂದು ಹೇಳಿದರು.
ಬದಲಾವಣೆ ತನ್ನಿ: ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಮಾತನಾಡಿ, ಶಿಕ್ಷಕರು ಸತತ ತಯಾರಿ ಮತ್ತು ನಿರಂತರ ವೃತ್ತಿಪರ ಅಭಿವೃದ್ಧಿ ಕೇಂದ್ರೀಕರಿಸಿಕೊಂಡು ಬದಲಾವಣೆಯತ್ತ ಮುನ್ನುಗ್ಗಬೇಕೆಂದರು.
ತಾಂತ್ರಿಕ ಅಧಿವೇಶನದಲ್ಲಿ ಪ್ರೊ.ಜೆ.ಎ.ಕೆ.ತರೀನ್, ಪ್ರೊ.ಪಿ.ವೆಂಕಟರಾಮಯ್ಯ, ಪ್ರೊ.ಎ.ಬಾಲಸುಬ್ರಹ್ಮಣ್ಯಂ, ಡಾ.ವೀರಕೀರ್ತಿ ಶೇಖರ್, ಡಾ.ಎಚ್.ಎಸ್.ಕುಮಾರ್, ಡಾ.ಬಿ.ಪ್ರಭುಸ್ವಾಮಿ, ಡಾ.ಆರ್.ಸುಹಾಸ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮೈಸೂರಿನ ಜೆಎಸ್ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ , ಸಂಯೋಜಕರಾದ ಡಾ.ಕುಮುದಿನಿ ಅಚ್ಚಿ ಮತ್ತಿತರರಿದ್ದರು.