“ಅಕ್ರಮದಲ್ಲಿ ಚಿದಂಬರಂ ಪಾತ್ರ ಪ್ರಧಾನ; ಜಾಮೀನು ಅಸಾಧ್ಯ’
Team Udayavani, Nov 16, 2019, 5:37 AM IST
ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ. ಮಹತ್ವದ ಅಂಶವೆಂದರೆ ಐಎನ್ಎಕ್ಸ್ ಪ್ರಕರಣದಲ್ಲಿ ಅವರೇ ಪ್ರಧಾನ ಪಾತ್ರ ವಹಿಸಿದ್ದಾರೆ ಎನ್ನುವುದನ್ನು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ನ್ಯಾ.ಸುರೇಶ್ಕೈಟ್ ಅವರನ್ನೊಳಗೊಂಡ ನ್ಯಾಯಪೀಠ “ಈ ಹಂತದಲ್ಲಿ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹೀಗಾಗಿ ಜಾಮೀನು ಅರ್ಜಿಯನ್ನು ಪರಿಗಣಿಸಲು ಬಯಸುವುದಿಲ್ಲ’ ಎಂದರು.
ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ತನಿಖಾ ಸಂಸ್ಥೆ ಅಕ್ರಮವಾಗಿ ಹಣ ವರ್ಗಾಯಿಸಿದ ಪ್ರಕರಣ, ಭ್ರಷ್ಟಾಚಾರ ಎಸಗಿರುವ ಆರೋಪದಲ್ಲಿ ಸಿಬಿಐ ದಾಖಲಿಸಿರುವ ಪ್ರಕರಣ ಮತ್ತು ಸಂಗ್ರಹಿಸಲಾಗಿರುವ ಸಾಕ್ಷ್ಯ ಪ್ರತ್ಯೇಕವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅ.16ರಂದು ಚಿದು ಅವರನ್ನು ಬಂಧಿಸಿತ್ತು. ಸದ್ಯ, ಅವರು ನ.27ರ ವರೆಗೆ ನ್ಯಾಯಾಂಗ ವಶದಲ್ಲಿ ಇದ್ದಾರೆ.