ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ದಂಧೆ
Team Udayavani, Nov 18, 2019, 12:55 PM IST
ಗದಗ: ಹಾಡಹಗಲೇ ನಂಬರ್ ಪ್ಲೇಟ್ ಇಲ್ಲದೇ ಮರಳು ತುಂಬಿರುವ ಟಿಪ್ಪರ್ಗಳಓಡಾಟ ಗದಗ-ಬೆಟಗೇರಿ ಅವಳಿನಗರದಲ್ಲಿ ಜೋರಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ ಅವರ ತವರು ಜಿಲ್ಲೆಯಲ್ಲೇ ಅಕ್ರಮ ಮರಳು ಸಾಗಾಟದ ವಾಸನೆ ಬಡಿಯುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಮರಳು ಗಣಿಗಾರಿಕೆ ಹಾಗೂ ಸಾಗಾಟ ನಿಯಮಾವಳಿಗಳು ಕಠಿಣವಾಗಿದ್ದರಿಂದ ಮರಳಿಗೆ ಎಲ್ಲಿಲ್ಲದ ಬೇಡಿಕೆ, ಚಿನ್ನದ ಬೆಲೆ ಬಂದಿದೆ. ಮುಂಡರಗಿಯಿಂದ ಸಾಗಾಣಿಕೆಯಾಗುವ ಪ್ರತಿ ಟಿಪ್ಪರ್ ಮರಳಿಗೆ ಗದುಗಿನಲ್ಲಿ 25 ರಿಂದ 30 ಸಾವಿರ ರೂ. ದರವಿದ್ದರೆ, ಹುಬ್ಬಳ್ಳಿ- ಧಾರವಾಡದಲ್ಲಿ 30-35 ಸಾವಿರ ರೂ. ಬೆಲೆಗೆ ಮಾರಾಟವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಪ್ರತಿನಿತ್ಯ 200 ಟಿಪ್ಪರ್ ಮರಳು ಅಗತ್ಯವಿದ್ದು, ಆ ಪೈಕಿ ಶೇ.75 ಮರಳು ಗದಗ ಜಿಲ್ಲೆಯಿಂದ ಪೂರೈಕೆಯಾಗುತ್ತದೆ.
ಟಿಪ್ಪರ್ಗಳ ಅಘೋಷಿತ ಮುಷ್ಕರ?: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿ.ಸಿ. ಪಾಟೀಲ ಅವರು ಗಣಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಬಳಿಕ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟದ ವಿರುದ್ಧ ಛಾಟಿ ಬೀಸುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಓವರ್ಲೋಡ್(12 ಟನ್ಗಿಂತ ಹೆಚ್ಚು) ಸಾಗಿಸುವ ಮರಳು ಟಿಪ್ಪರ್ ಗಳ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ.
ಇದರಿಂದ ಆತಂಕಗೊಂಡಿರುವ ಟಿಪ್ಪರ್ ಚಾಲಕರು ಮರಳು ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ. ನಿಗದಿಯಂತೆ 12 ಟನ್ ಸಾಗಿಸಿದರೆ ಸರಕಾರದ ರಾಜಸ್ವ, ಚಾಲಕರ ವೇತನ, ಇಂಧನ ಹಾಗೂ ಇತರೆ ವೆಚ್ಚಗಳನ್ನು ಭರಿಸಲಾಗದು. ಹೀಗಾಗಿ 15 ಟನ್ ಹೆಚ್ಚಿಸಿ ಪಾಸ್ ವಿತರಿಸಬೇಕು ಎಂದು ಟಿಪ್ಪರ್ ಮಾಲೀಕರು ಪಟ್ಟು ಹಿಡಿದ್ದಾರೆ. ಅದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸೊಪ್ಪು ಹಾಕಿಲ್ಲ ಎಂದು ತಿಳಿದು ಬಂದಿದೆ.
ಇದರ ಮಧ್ಯೆ ಕಳೆದ 15 ದಿನಗಳಿಂದ ಜಿಲ್ಲೆಯ ತುಂಗಭದ್ರಾ ನದಿ ಭಾಗದ ಬ್ಲಾಕ್ಗಳಿಂದ ಮರಳು ಸಾಗಾಟ ಬಹುತೇಕ ಸ್ಥಗಿತಗೊಳಿಸಲಾಗಿದೆ. ಪೂರೈಕೆ ಕಡಿಮೆಯಾಗಿದ್ದರಿಂದ ಸಹಜವಾಗಿಯೇ ಗದಗ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಮರಳಿನ ಬೇಡಿಕೆ ಹೆಚ್ಚುತ್ತಿದೆ. ಇದರ ಲಾಭ ಪಡೆಯಲು ಯತ್ನಿಸುತ್ತಿರುವ ಕೆಲವರು ಅಡ್ಡದಾರಿ ತುಳಿಯುತ್ತಿದ್ದಾರೆ. ಇತ್ತೀಚೆಗೆ ಉಂಟಾದ ನೆರೆಯಿಂದಾಗಿ ತುಂಗಭದ್ರಾ,ಮಲಪ್ರಭಾ ಸೇರಿದಂತೆ ಹಳ್ಳಗಳ ಅಕ್ಕಪಕ್ಕದ ಮೀನುಗಳಿಗೆ ಮರಳು ಕೊಚ್ಚಿಕೊಂಡು ಬಂದಿರುವುದು ಅಕ್ರಮವಾಗಿ ಮರಳು ಸಾಗಿಸುವವರಿಗೆ ವರವಾಗಿದೆ ಎನ್ನಲಾಗಿದೆ.
ಅಕ್ರಮ ಮರೆಮಾಚುವ ತಂತ್ರ?: ಗದಗ-ಬೆಟಗೇರಿಅವಳಿನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೋಂದಣಿ ಸಂಖ್ಯೆ ಇರದ ಮರಳು ಟಿಪ್ಪರ್ಗಳ ಓಡಾಟ ಹೆಚ್ಚಾಗಿದೆ. ಬೆಳಗ್ಗೆ 7ರಿಂದಲೇ ಇಂತಹ ವಾಹನಗಳು ಅಲ್ಲಲ್ಲಿ ಕಂಡುಬರುತ್ತಿವೆ. ಅದರಂತೆ ರವಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಟಗೇರಿಯ ಪಾಲಾ ಬದಾಮಿ ರಸ್ತೆ ಹಾಗೂ 11:30ರ ಸುಮಾರಿಗೆ ಇಲ್ಲಿನ ಭೂಮರೆಡ್ಡಿ ವೃತ್ತದ ಬಳಿ ಪ್ರತ್ಯೇಕ ಎರಡು ವಾಹನಗಳು ಕಂಡುಬಂದಿವೆ. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯಬಾರದು. ಇದು ಇಲಾಖೆ ಸಚಿವನಾಗಿ ನನಗೂ ಶೋಭೆಯಲ್ಲ. ಆದರೆ, ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟವನ್ನು ನಿಯಂತ್ರಿಸುವಂತಹ ದಕ್ಷ ಅಧಿಕಾರಿಗಳು ಗಣಿ ಇಲಾಖೆಗೆ ಬೇಕಿದೆ ಎಂದು ಇತ್ತೀಚೆಗಷ್ಟೇ ಗಣಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ನಂಬರ್ ಪ್ಲೇಟ್ ಕೂಡಾ ಇಲ್ಲ. ಇನ್ನೂ ಕೆಲವು ನಂಬರ್ ಪ್ಲೇಟ್ ಇದ್ದರೂ ಅದಕ್ಕೆ ನೋಂದಣಿ ಸಂಖ್ಯೆಯೇ ಇಲ್ಲದಂತಹ ಟಿಪ್ಪರ್ಗಳಲ್ಲಿ ಮರಳು ಸಾಗಾಟವಾಗುತ್ತಿದೆ. ಇದು ಸಾರ್ವಜನಿಕರಲ್ಲಿ ಸಹಜವಾಗಿಯೇ ಅಧಿ ಕಾರಿಗಳ ಬಗ್ಗೆ ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಅವಳಿನಗರದಲ್ಲಿ ನಂಬರ್ ಪ್ಲೇಟ್ ಹಾಗೂ ನೋಂದಣಿ ಸಂಖ್ಯೆ ಇಲ್ಲದೆ ಓಡಾಡುವ ಮರಳು ಲಾರಿಗಳ ಬಗ್ಗೆ ಗಮನಕ್ಕೆ ಬಂದಿದೆ. ರವಿವಾರ ಮಧ್ಯಾಹ್ನ ಭೂಮರೆಡ್ಡಿ ವೃತ್ತದಲ್ಲಿ ಒಂದು ಟಿಪ್ಪರ್ ವಶಕ್ಕೆ ಪಡೆದಿದ್ದು, ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂತಹ ಲಾರಿಗಳನ್ನು ಪತ್ತೆ ಮಾಡುವಂತೆ ಸಿಬ್ಬಂದಿಗೂ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. –ಶ್ರೀನಾಥ ಜೋಶಿ, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ
-ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ