ಉಪಚುನಾವಣೆಯ ನಂತರ ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ಇರಲ್ಲ: ಪುಟ್ಟಸ್ಚಾಮಿ
Team Udayavani, Nov 25, 2019, 12:14 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಫಲಿತಾಂಶದ ಬಳಿಕ ಸಿದ್ದರಾಮಯ್ಯ ವಿಪಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಮುಂದಾಗಿದ್ದಾರೆಂದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಯಾರು ಪ್ರಚಾರಕ್ಕೆ ಹೋಗುತ್ತಿಲ್ಲ ಎಂದರು. ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರ ಅವರಿಗೆ ಅಭಿವೃದ್ಧಿ, ಸ್ಥಿರ ಸರ್ಕಾರ ಬೇಕಿಲ್ಲ ಎಂದರು. ಉಪ ಚುನಾವಣೆ ಫಲಿತಾಂಶ ಬಳಿಕ ಮತ್ತೆ ಅವಕಾಶಕ್ಕೆ ಎದುರು ನೋಡುತ್ತಿರುವ ಕುಮಾರಸ್ವಾಮಿಗೆ ಹಾಗೂ ಮಧ್ಯಂತರ ಚುನಾವಣೆಗೆ ಕಾಯುತ್ತಿರುವ ಸಿದ್ದರಾಮಯ್ಯಗೆ ಭ್ರಮನಿರಸನವಾಗಲಿದೆ ಎಂದರು. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಬಾಡಿಗೆ ಕಾರ್ಮಿಕರಂತೆ ನೋಡಿದರು. ಅವರ ಕ್ಷೇತ್ರಗಳಿಗೆ ಅನುದಾನ ಕೊಡಲಿಲ್ಲ ಎಂದರು. ರಾಜ್ಯದ ಮುಖ್ಯಮಂತ್ರಿಯೊಬ್ಬರು ಐಷಾರಾಮಿ ಹೋಟೆಲ್ ನಲ್ಲಿ ಕೂತು ಆಡಳಿತ ನಡೆಸಿದ ಕೀರ್ತಿ ಕುಮಾರಸ್ಚಾಮಿಗೆ ಸಲ್ಲುತ್ತದೆ. ಉಪ ಚುನಾವಣೆ ಫಲಿತಾಂಶ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಕಣ್ಮರೆಯಾಗಲಿದೆ ಎಂದರು.
ರಾಜ್ಯದ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಅಭಿವೃದ್ಧಿ, ಸ್ಥಿರ ಸರ್ಕಾರ ಕೊಡುವ ಶಕ್ತಿ ಕೇವಲ ಬಿಜೆಪಿಗೆ ಮಾತ್ರ ಇದೆ ಎಂದರು. ಅನರ್ಹ ಶಾಸಕರು ಮೈತ್ರಿ ಸರ್ಕಾರದಲ್ಲಿ ಆದ ನೋವು, ಅಪಮಾನ ತಾಳದೇ ಅವರಗಾಗಿಯೆ ಬಿಜೆಪಿ ಸೇರಿದ್ದಾರೆಂದರು.