ಬೆಳೆ ನಷ್ಟ ತಪ್ಪಿಸಲು ಹೊಸ ಪ್ರಯತ್ನ
Team Udayavani, Dec 2, 2019, 3:14 PM IST
ದೇವನಹಳ್ಳಿ: ಬಯಲು ಸೀಮೆ ಪ್ರಧಾನ ಆಹಾರ ಬೆಳೆಯಾಗಿರುವ ರಾಗಿ ಫಸಲನ್ನು ಕೂಡಿಸಿ ಕಟ್ಟಿದೆರೆ ಬೆಳೆ ನಷ್ಟ ತಪ್ಪಿಸಲು ಸಾಧ್ಯ ಎಂದು ಅರಿತು ರೈತರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಈ ವರ್ಷದ ಮುಂಗಾರು ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗಿದರೂ,ನಂತರ ಸಕಾಲದಲ್ಲಿ ಸುರಿದ ಮಳೆ ರೈತರ ಫಸಲಿಗೆ ವರದಾನವಾಗಿ ಪರಿಣಮಿಸಿತ್ತು. ಮತ್ತೆ ಹಿಂಗಾರು ಮಳೆ ಆತಂಕದಲ್ಲಿದ್ದ ರೈತರಿಗೆ, ಪ್ರಸ್ತುತ ಜಣ ಹವೆಯಿಂದಾಗಿ ಆಶಾದಾಯಕ ವಾತವಾರಣ ನಿರ್ಮಾಣವಾಗಿದೆ. ಇತ್ತೀಚಿಗೆ ಸುರಿದ ಜಡಿಮಳೆಯಿಂದಾಗಿ ಗಟ್ಟಿಕಾಲು ಹೊತ್ತ ರಾಗಿ ತೆನೆ ಸಾಲುಗಟ್ಟಿ ನೆಲ ಕಚ್ಚಿತ್ತು. ಕಳೆದ ನಾಲ್ಕುವರ್ಷಗಳಿಂದ ಮುಂಗಾರು ಮಳೆ ಕೈ ಕೊಟ್ಟಿದ್ದ ಪರಿಣಾಮ ರೈತರು ಬರಗಾಲಕ್ಕೆ ಸಿಲುಕಿದ್ದರು.ನೆಲದಲ್ಲಿ ಹರಡಿಕೊಂಡಿರುವ ರಾಗಿಯ ಹತ್ತಾರು ತೆನೆಯನ್ನು ರಾಗಿ ಪೈರಿನ ಗರಿಯಿಂದಲೇ ಕೂಡಿಸಿ ಕಟ್ಟಬೇಕು.
ಪ್ಲಾಸ್ಟಿಕ್ದಾರ ಕಟ್ಟಿದರೆ ಪಶುಗಳಿಗೆ ಮೇವು ನೀಡುವ ಸಂದರ್ಭದಲ್ಲಿ ಪಶುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ರೈತರು ಹೇಳುತ್ತಾರೆ. ನೆಲಕ್ಕೆ ಬಿದ್ದ ರಾಗಿತೆನೆಯ ಜೊತೆಗೆ ಪಶುಗಳಿಗೆ ಪೌಷ್ಟಿಕ ಮೇವು ಕೂಡ ಆಗಿರುವ ರಾಗಿ ಹುಲ್ಲು ನೆಲದಲ್ಲಿ ಬಿದ್ದು ಕೊಳೆಯಲು ಪ್ರಾರಂಭಿಸುತ್ತದೆ. ಗುಣಮಟ್ಟದ ಮೇವು ಕಪ್ಪು ಬಣ್ಣಕ್ಕೆ ತಿರುಗುವುದು. ಇದರಿಂದ ರಾಗಿತೆನೆಯಲ್ಲಿನ ಕಾಲು ಮತ್ತು ಮೇವನ್ನು ಉಳಿಸಿಕೊಳ್ಳಲು ತೆನೆ ಕೂಡು ಕಟ್ಟು ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುವುದು ಎನ್ನುವುದು ರೈತರ ಅಭಿಪ್ರಾಯವಾಗಿದೆ.
ವಾತವರಣದಲ್ಲಿನ ತೇವಾಂಶ ಹೆಚ್ಚಳದಿಂದ ರಾಗಿ ಕಾಳು ಮೊಳಕೆ ಬರುವ ಸಾಧ್ಯತೆ ಇರುವುದರಿಂದ ಕೆಲವು ರೈತರು ಚಿಂತನೆ ನೆಡೆಸಿ ತೆನೆ ಕೂಡು ಕಟ್ಟುಗಳಿಗೆ ಮೊರೆ ಹೋಗಿದ್ದಾರೆ. ಪರಿಣಾಮ ರಾಗಿ ತೆನೆಗೆ ತೊಂದರೆಯಾಗದೆ ವಾತಾವರಣ ನೋಡಿ ಕಟಾವು ಮಾಡಬಹುದಾಗಿದೆ.
-ಎಸ್. ಮಹೇಶ್