ಅಂಗನವಾಡಿ ಕಟ್ಟಡ ಕಳಪೆ; ಉದ್ಘಾಟನೆ ಸ್ಥಗಿತ
Team Udayavani, Jan 14, 2020, 1:03 PM IST
ಮುದಗಲ್ಲ: ಸಮೀಪದ ಕಾಚಾಪುರ ಗ್ರಾಮದಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರ 3ರ ಕಟ್ಟಡ ಕಾಮಗಾರಿ ಕಳಪೆಯಾಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸೋಮವಾರ ನಡೆಯಬೇಕಿದ್ದ ಉದ್ಘಾಟನೆ ಕಾರ್ಯಕ್ರಮ ಸ್ಥಗಿತಗೊಂಡ ಪ್ರಸಂಗ ನಡೆದಿದೆ.
ಶಾಸಕ ಡಿ.ಎಸ್. ಹೂಲಗೇರಿ ಕಟ್ಟಡ ಉದ್ಘಾಟಿಸದೇ ಹಾಗೇ ತೆರಳಿದರು. ಸೋಮವಾರ ಕಾಚಾಪುರ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ 1 ಕೋಟಿ ಮೊತ್ತದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವಿತ್ತು. ಇದರ ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಟ್ಟಡ ಉದ್ಘಾಟನೆ ಕೂಡ ಹಮ್ಮಿಕೊಳ್ಳಲಾಗಿತ್ತು. ಕಟ್ಟಡಕ್ಕೆ ಹಸಿರು ತಳಿರು, ತೋರಣ ಕಟ್ಟಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕಟ್ಟಡ ಕಾಮಗಾರಿ ಕಳಪೆ ಆಗಿದ್ದನ್ನು ಪ್ರತ್ಯಕ್ಷ ಕಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಶಾಸಕರು ಕಟ್ಟಡ ಉದ್ಘಾಟಿಸದೇ ತೆರಳಿದರು.
ಹಾಸಲಾದ ಟೈಲ್ಸ್ಗಳು ಕುಸಿದಿದ್ದರೆ, ಇನ್ನು ಕೆಲವಡೆ ಜಖಂಗೊಂಡಿವೆ. ಕಟ್ಟಡದ ಕಿಟಕಿ ಗಾಜುಗಳು ಒಡೆದಿವೆ. ಹಳೆಯ ಲೈಟ್, ಫ್ಯಾನ್ ಅಳವಡಿಸಿ ಅಧಿಕಾರಿಗಳು ಸಂಪೂರ್ಣ ಬಿಲ್ ಪಾವತಿಸಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಟ್ಟಡ ಉದ್ಘಾಟನೆ ಸ್ಥಗಿತಗೊಂಡಿದೆ.