ರಾಜಾಹುಲಿ ಯಡಿಯೂರಪ್ಪ ತಮ್ಮ ಹೆಸರು ರಾಜಾ ಇಲಿ ಎಂದು ಬದಲಾಯಿಸಿಕೊಳ್ಳುವುದು ಸೂಕ್ತ : ಉಗ್ರಪ್ಪ
ಸಂಪುಟ ವಿಸ್ತರಣೆ ಮಾಡದಿದ್ದರೆ ಜನರ ಕ್ಷಮೆ ಕೋರಲಿ
Team Udayavani, Jan 14, 2020, 6:32 PM IST
ಬೆಂಗಳೂರು: ರಾಜಾಹುಲಿ ಯಡಿಯೂರಪ್ಪ ತಮ್ಮ ಹೆಸರನ್ನು ರಾಜಾ ಇಲಿ ಎಂದು ಬದಲಾಯಿಸಿಕೊಂಡರೆ ಸೂಕ್ತ ಎಂದು ಮಾಜಿ ಸಂಸದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಯಡಿಯೂರಪ್ಪ ತರಾತುರಿಯಲ್ಲಿ ರಾಯಚೂರಿನಲ್ಲಿ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗಬೇಕು ಎಂದು ಸಿದ್ಧರಾದರೆ ಅಮಿತ್ ಶಾ ಭೇಟಿಗೆ ಅವಕಾಶವನ್ನೇ ನೀಡಲಿಲ್ಲ. ಬೆಕ್ಕು ಬಂದಾಗ ಇಲಿ ಯಾವ ರೀತಿ ಬಿಲ ಹುಡುಕುತ್ತದೆಯೋ ಅದೇ ರೀತಿ ಅಮಿತ್ ಶಾ ಕಂಡರೆ ಯಡಿಯೂರಪ್ಪ ಬಿಲ ಹುಡುಕುತ್ತಿದ್ದಾರೆ. ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದವರನ್ನು 24 ಗಂಟೆಯೊಳಗೆ ಮಂತ್ರಿ ಮಾಡುತ್ತೇವೆ ಎಂದಿದ್ದರು. ಯಡಿಯೂರಪ್ಪ ಮಾತು ನಂಬಿ ಅವರೆಲ್ಲ ಸೂಟುಬೂಟು ಹೊಲಿಸಿಕೊಂಡು ಮಂತ್ರಿಮಂಡಲ ಸೇರಲು ಕಾಯುತ್ತಿದ್ದಾರೆ. ಶಾಸಕರಿಗೆ ನೀಡಿದ ಭರವಸೆಯನ್ನಾಗಲೀ ರಾಜ್ಯದ ಜನರ ಅಭಿವೃದ್ಧಿಯ ಭರವಸೆಯನ್ನಾಗಲೀ ಈಡೇರಿಸಲು ಸಾಧ್ಯವಾಗಲಿಲ್ಲ. ಇನ್ನು 24 ಗಂಟೆಯೊಳಗೆ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಿಸದಿದ್ದರೆ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
2011 ರಲ್ಲಿ ಯಡಿಯೂರಪ್ಪ ಅಕ್ರಮ ಗಣಿ ಹಗರಣದಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದ್ದ ಹಾಗೆ ಈಗ ಅದೇ ಮಾದರಿಯಲ್ಲಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅವರ ಪಕ್ಷದಲ್ಲಿಯೇ ಒಂದು ಗುಂಪು ಸಜ್ಜಾಗಿದೆ. ಎಂದರು.
ವಚನ ಭ್ರಷ್ಟ ಯಡಿಯೂರಪ್ಪ ರಾಮನ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಅಧಿಕಾರದ ಕಚ್ಚಾಟದಲ್ಲಿ ಆಡಳಿತ ಯಂತ್ರ ಕುಸಿದಿದೆ. ಮಂತ್ರಿಮಂಡಲ ವಿಸ್ತರಣೆಯಾದರೆ ಆಡಳಿತದ ಯಂತ್ರ ಚುರುಕಾಗಬಹುದು. ಹೀಗಾಗಿ 12 ಶಾಸಕರನ್ನು ಸಂಪುಟಕ್ಕೆ ಸೇರಿಸಿ ಯಡಿಯೂರಪ್ಪ ತಮ್ಮ ಗಂಡಸುತನ ತೋರಲಿ ಎಂದು ಸವಾಲೆಸೆದರು.
ಇದೇ ವೇಳೆ, ಕೇಂದ್ರ ಸರ್ಕಾರದಿಂದ ನರೇಗಾ, ಬರ, ನೆರೆ ಪರಿಹಾರ ಹಣ ಬಂದಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಆದಷ್ಟು ಬೇಗ ಶ್ವೇತಪತ್ರ ಹೊರಡಿಸಬೇಕು. ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಲು ಬಡವರಿಗೆ ನೀಡುತ್ತಿರುವ ಅನ್ನಭಾಗ್ಯದ ಅಕ್ಕಿಯಲ್ಲಿ 2 ಕೆ.ಜಿ. ಕಡಿಮೆ ಮಾಡಲು ಮುಂದಾಗಿದ್ದಾರೆ. ಯಡಿಯೂರಪ್ಪ ಬಡವರ ಹೊಟ್ಟೆ ಮೇಲೆ ಹೊಡೆಯಲು ಅನ್ನಭಾಗ್ಯದ ಅಕ್ಕಿಯನ್ನು ಆಂಧ್ರ, ಗುಜರಾತಿಗೆ ಕಳುಹಿಸಲು ನಾಚಿಕೆಯಾಗುವುದಿಲ್ಲವೇ?ಬಡವರ ಅನ್ಮಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.
ಕಪಾಲಬೆಟ್ಟದಲ್ಲಿ ಡಿ.ಕೆ.ಶಿವಕುಮಾರ್ ನಿರ್ಮಿಸಲು ಉದ್ದೇಶಿಸಿರುವ ಏಸು ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ಶಿವಕುಮಾರ್ ಪಕ್ಷದ ಹಿರಿಯ ನಾಯಕರು. ಪಕ್ಷ ಸಂಕಷ್ಟದಲ್ಲಿದ್ದಾಗ ಬಲ ತುಂಬಿದವರು. ಏಸುಪ್ರತಿಮೆ ವಿಚಾರವಾಗಿ ಡಿ.ಕೆ.ಶಿವಕುಮಾರ್ ಒಂಟಿಯಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇದೆ. ಕಲ್ಲಡ್ಕ ಪ್ರಭಾಕರ ಭಟ್ಗೆ ತಮ್ಮ ಶಾಲೆಯ ಮಕ್ಕಳ ಬಗ್ಗೆ ಮಾತ್ರ ಗೊತ್ತು. ರಾಜ್ಯದ ಎಲ್ಲಾ ಮಕ್ಕಳ ಬಗ್ಗೆ ಅವರು ಕಾಳಜಿ ತೋರಲಿ. ಕನಕಪುರ, ರಾಮನಗರವೂ ಸೇರಿದಂತೆ ದೇಶದ ಜನ ಸಾಮರಸ್ಯದಿಂದ ಬದುಕುತ್ತಿದ್ದು, ಸಾಮರಸ್ಯ ಕೆಡಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಜನತೆಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ, ಆರ್ಥಿಕ ಕುಸಿತ, ಬೆಲೆ ಏರಿಕೆ ಸರಿಪಡಿಸಿ ಜನರ ಸಮಸ್ಯೆಗಳ ಕಡೆ ಗಮನ ಕೊಡಲಿ ಎಂದರು.