ಶಂಕರನಾರಾಯಣ ಸರಕಾರಿ ಹಿ. ಪ್ರಾ. ಶಾಲೆಯಲ್ಲಿ 4 ಜೋಡಿ ಅವಳಿ ಜವಳಿ
ನಡೆನುಡಿಯಲ್ಲಿ ಮಾತ್ರವಲ್ಲದೆ ಆಟ ಪಾಠಗಳಲ್ಲೂ ಮುಂಚೂಣಿಯಲ್ಲಿ
Team Udayavani, Jan 23, 2020, 1:01 AM IST
ಸಿದ್ದಾಪುರ: ಶಂಕರ ನಾರಾಯಣ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ನಾಲ್ಕು ಜೋಡಿ ಅವಳಿ ಜವಳಿ ಮಕ್ಕಳು ಕಲಿಯುತ್ತಿದ್ದಾರೆ. ಈ ನಾಲ್ಕು ಜೋಡಿ ಅವಳಿ ಜವಳಿಗಳು ಪ್ರತಿನಿತ್ಯ ಶಾಲೆಗೆ ಬರುವಾಗ ಒಂದೇ ತೆರನಾದ ಬ್ಯಾಗ್, ನಡೆದುಕೊಳ್ಳುವ ರೀತಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರನ್ನು ಆಚ್ಚರಿ ಮೂಡಿಸಿದ್ದಾರೆ. ಇವರು ತಮ್ಮ ಡ್ರೆಸ್ ಹಾಗೂ ನಡೆ ನುಡಿಯಲ್ಲಿ ಮಾತ್ರವಲ್ಲದೆ, ಆಟ- ಪಾಠಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದು ಇನ್ನೂ ಆಚ್ಚರಿಗೆ ಕಾರಣವಾಗಿದೆ. ಅರಳು ಹುರಿದಂತೆ ಮಾತನಾಡುವ ಅವಳಿ- ಜವಳಿ ಮಕ್ಕಳು ಎಲ್ಕೆಜಿ, ಯುಕೆಜಿ, 3 ಮತ್ತು 4ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಈ ಮಕ್ಕಳು ಕಲಿಯುವ ತರಗತಿಗಳಿಗೆ ಪಾಠಕ್ಕೆ ಹೋಗುವುದೆಂದರೆ ಶಿಕ್ಷಕರಿಗೆ ಒಂದು ರೀತಿಯಲ್ಲಿ ಖುಷಿ.
ಶಾಲೆಯು ಕನ್ನಡ ಮಾಧ್ಯಮ ಶಾಲೆಯಾಗಿದ್ದರೂ ಇಲ್ಲಿ ಆಂಗ್ಲಮಾಧ್ಯಮ ವಿಭಾಗ ಇದೆ. ಶಾಲೆಯ ಆಂಗ್ಲಮಾಧ್ಯಮ ವಿಭಾಗದ ಎಲ್ಕೆಜಿಯಲ್ಲಿ ಕಲಿಯುತ್ತಿರುವ ಸಾನ್ವಿತಾ ಮತ್ತು ಸಂಹಿತಾ, ಯುಕೆಜಿಯಲ್ಲಿ ಕಲಿಯುತ್ತಿರುವ ರವಿ ಮತ್ತು ಕಿರಣ್, 3ನೇ ತರಗತಿಯಲ್ಲಿ ಕಲಿಯುತ್ತಿರುವ ಮಂದಾರ ಪೈ ಮತ್ತು ಮೇಘರಾಜ ಪೈ, 5ನೇ ತರಗತಿಯಲ್ಲಿ ಕಲಿಯುತ್ತಿರುವ ತನ್ವಿ ಮತ್ತು ಮನ್ವಿ ಶಾಲೆಗೆ ವಿಶೇಷ ಆಕರ್ಷಣೆಯಾಗಿದ್ದಾರೆ. ಈ ನಾಲ್ಕು ಜೋಡಿಗಳು ಪ್ರತಿಯೊಬ್ಬರೂ ಒಂದೊಂದು ವಿಭಾಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಅವರ ಪೈಕಿ ರವಿ ಮತ್ತು ಕಿರಣ್ ಅರಳು ಹುರಿದಂತೆ ಮಾತನಾಡುತ್ತಿದ್ದರೆ, ಮಂದಾರ ಪೈ ಮತ್ತು ಮೇಘರಾಜ ಪೈ ಅಕ್ಕ ತಮ್ಮಂದಿರು. ಉಳಿದ ಮೂವರು ಅವಳಿ ಜವಳಿಗಳು. ರವಿ ಮತ್ತು ಕಿರಣ್ ಒಂದೇ ತೆರನಾಗಿರುವುದರಿಂದ ಅವರನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಈ ಅವಳಿ ಜವಳಿ ಮಕ್ಕಳಲ್ಲಿ ಏಕತೆರನಾದ ಗುಣಧರ್ಮವಿದೆ. ಆಹಾರ ವಿಹಾರ ದಲ್ಲಿಯೂ ಏಕ ಪ್ರಕಾರ ಆಸಕ್ತಿ ಹೊಂದಿ ದ್ದಾರೆ. ಒಬ್ಬರಿಗೆ ಸೌಖ್ಯ ಇಲ್ಲದಿದ್ದರೆ ಇನ್ನೊಬ್ಬರಿಗೂ ಹಾಗೇ ಆಗುತ್ತಿರುವುದು ಮತ್ತೂಂದು ವಿಶೇಷ.
ಗುರುತು ಹಿಡಿಯುವುದು ಕಷ್ಟ
ಈ ಶಾಲೆ ಸರಕಾರಿ ಶಾಲೆಯಾಗಿದ್ದರೂ, ಖಾಸಗಿ ಶಾಲೆಗೆ ಕಡಿಮೆ ಇರದ ರೀತಿಯಲ್ಲಿ ಗುರುತಿಸಿಕೊಂಡಿದೆ. ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ವಿವಿಧ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಇವರು ಆಟ ಪಾಠದಲ್ಲಿ ಕ್ರಿಯಾಶೀಲರಾಗಿದ್ದಾರೆ. ಇವರನ್ನು ಗುರುತು ಹಿಡಿಯುವುದು ಕೂಡ ಕಷ್ಟವಾಗುತ್ತಿದೆ.
-ಸಂತೋಷಕುಮಾರ ಶೆಟ್ಟಿ,, ಪ್ರಭಾರ ಮುಖ್ಯ ಶಿಕ್ಷಕ
ಮೂಲ ಸೌಕರ್ಯ
ಈ ಶಾಲೆಯು ಕುಂದಾಪುರ ವಲಯದಲ್ಲಿ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದೆ. ಈ ಶಾಲೆಯನ್ನು ಸರಕಾರ, ಎಸ್ಡಿಎಂಸಿ, ವಿದ್ಯಾಭಿಮಾನಿಗಳು, ವಿಶೇಷವಾಗಿ ಶಂಕರನಾರಾಯಣ ಎಜುಕೇಶನಲ್ ಟ್ರಸ್ಟ್ ಎಲ್ಲ ರೀತಿಯ ಮೂಲ ಸೌಕರ್ಯ ನೀಡುವಲ್ಲಿ ಶ್ರಮಿಸುತ್ತಿದೆ. ಈಗ ಈ ಶಾಲೆಗೆ ನಾಲ್ಕು ಜೋಡಿ ಮಕ್ಕಳು ಆಕರ್ಷಣೆಯಾಗಿದ್ದಾರೆ ಎಂದು ಪ್ರಭಾರ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.