ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ
ಮಡಿವಾಳ ಮಾಚಿದೇವ-ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬೆಳ್ಳಿ ಪ್ರಕಾಶ್ ಅಭಯ
Team Udayavani, Feb 2, 2020, 3:10 PM IST
ಕಡೂರು: ತಾಲೂಕಿನಲ್ಲಿರುವ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೋಷಣೆಗೆ ಹಾಗೂ ತಾತ್ಸರಕ್ಕೆ ಒಳಗಾದವರಿಗೆ ಬಸವಣ್ಣನವರು ಅನುಭವ ಮಂಟಪದಲ್ಲಿ ಸ್ಥಾನಮಾನ ನೀಡಿದರು. ಮಡಿವಾಳ ಮಾಚಿದೇವರಿಗೆ ಅನುಭವ ಮಂಟಪದಲ್ಲಿ ಸಮಾನ ಅವಕಾಶ ನೀಡಲಾಗಿತ್ತು. ಬಸವಣ್ಣನವರು ಜಾತಿ ರಹಿತ, ವರ್ಣರಹಿತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಸಣ್ಣಪುಟ್ಟ ಸಮಾಜಗಳಿಗೂ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ನನ್ನ ಅಧಿ ಕಾರವ ಧಿಯಲ್ಲೂ ಸಹ ಸಣ್ಣ ಸಣ್ಣ ಜಾತಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸಲಾಗುವುದು ಎಂದರು.
ಶರಣರ ವಚನ ಸಾಹಿತ್ಯವನ್ನು ಉಳಿಸುವಲ್ಲಿ ಮಾಚಿದೇವರು ಪ್ರಮುಖ ಪಾತ್ರವಹಿಸಿದ್ದರು. ದೊಡ್ಡಮಟ್ಟದ ಧರ್ಮಕ್ರಾಂತಿ, ಬಸವಣ್ಣನವರ ಕಾಲಘಟ್ಟದಲ್ಲಿ ನಡೆಯಿತು. ಶೋಷಿತರ ಪರವಾಗಿ ನಿಂತು ಸಮಾನತೆ ನೀಡಿದರು ಎಂದರು.
ಮೇಲು-ಕೀಳು ಎಂಬ ಭಾವನೆಯಿಂದ ಬದಲಾವಣೆಯನ್ನು ಹೊಂದಬೇಕಿದೆ. ಜಾತ್ಯತೀತವಾಗಿ, ಧರ್ಮಾತೀತವಾಗಿ ರಾಜಕಾರಣ ಮಾಡಬೇಕಿದೆ. ಎಲ್ಲರೂ ಒಂದಾಗಿ ಬಾಳಬೇಕಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಣ್ಣಪುಟ್ಟ ಸಮಾಜಗಳಿಗೆ ಹಲವಾರು ಯೋಜನೆಗಳನ್ನು ತಂದಿವೆ. ಮಡಿವಾಳ ಮತ್ತು ಸವಿತಾ ಸಮಾಜಗಳನ್ನು ಮೇಲೆತ್ತುವ ಕಾರ್ಯಕ್ಕೆ ಹಾಗೂ ರಾಜಕೀಯದಲ್ಲಿ ನಿಮ್ಮನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದರು.
ಜಿ.ಪಂ. ಸದಸ್ಯ ಕೆ.ಆರ್. ಮಹೇಶ್ಒಡೆಯರ್ ಮಾತನಾಡಿ, ಸಣ್ಣ ಮತ್ತು ಸೂಕ್ಷ್ಮ ಜನಾಂಗಗಳು ಅಭಿವೃದ್ಧಿ ಹೊಂದಲು ಸರಕಾರ ಇಂತಹ ಜಯಂತಿ ಆಚರಣೆಗಳನ್ನು ಜಾರಿಗೆ ತಂದಿದೆ. ಮಹಾಪುರುಷರ ವ್ಯಕ್ತಿತ್ವವನ್ನು ನೋಡಿ ಗುರುತಿಸಲಾಗಿದೆ. ಅವರನ್ನು ಜಾತಿಯಿಂದ ನೋಡದೆ, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ. ಯಾವುದೇ ಒಂದು ಜಾತಿಗೆ ಮಹಾಪುರುಷರನ್ನು ಸೀಮಿತಗೊಳಿಸಬಾರದು ಎಂದರು.
ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಮಾಚಿದೇವರಿಗೆ ಅನುಭವ ಮಂಟಪದಲ್ಲಿ ವಿಶೇಷ ಗೌರವ ಸ್ಥಾನಮಾನ ನೀಡಲಾಗಿತ್ತು. ಶರಣರ ವಚನಗಳನ್ನು ಉಳಿಸುವಲ್ಲಿ ಅವರ ವೀರಾವೇಷ ಕಾರಣವಾಗಿದೆ. ಕಾಯಕವೇ ಕೈಲಾಸ ಎಂದರು. ಮಡಿವಾಳ ಸಮಾಜವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕು ಎಂಬುದು ಬಹಳ ವರ್ಷಗಳ ಹೋರಾಟವಾಗಿದೆ. ಇದು ಈವರೆಗೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ತಮ್ಮ ಸಮಾಜದ ಬೇಡಿಕೆಯ ವರದಿಯನ್ನು ಕಳುಹಿಸಿಕೊಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಉಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸವಿತಾ ಸಮಾಜದ ರಾಜ್ಯ ನಿರ್ದೇಶಕ ರವಿಕುಮಾರ್, ತಾಲೂಕು ಅಧ್ಯಕ್ಷ ಪರಮೇಶ್, ಮಡಿವಾಳ ಸಮಾಜದ ಮುಖಂಡರಾದ ಷಢಾಕ್ಷರಿ, ತಾ.ಪಂ. ಇಒ ಡಾ| ದೇವರಾಜ್ ನಾಯ್ಕ ಮತ್ತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ