ಕಾಲಿನಿಂದ ಗುದ್ದಿ ಕಾಮಗಾರಿ ಪರಿಶೀಲಿಸಿದ ಮಹೇಶ್
Team Udayavani, Feb 3, 2020, 3:00 AM IST
ಭೇರ್ಯ: ಪಟ್ಟಣದ ಬಸ್ ನಿಲ್ದಾಣದಲ್ಲಿ 1.50 ಕೋಟಿ ರೂ.ವೆಚ್ಚದ ಕಾಂಕ್ರೀಟ್ ರಸ್ತೆ, ಪ್ಲಾಟ್ಫಾರಂ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಸಾ.ರಾ.ಮಹೇಶ್ ಭೂಮಿಪೂಜೆ ಸಲ್ಲಿಸಿದರು. ಇದೇ ವೇಳೆ, ಬಸ್ನಿಲ್ದಾಣದ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಕಾಮಗಾರಿ ಕಳಪೆಯಿಂದ ಕೂಡಿದ್ದು, ಶೌಚಾಲಯ ಕಾಮಗಾರಿ ಕೂಡ ಸಮರ್ಪಕವಾಗಿ ಮಾಡಿರಲಿಲ್ಲ.
ಇಲ್ಲಿ ಕ್ಯೂರಿಂಗ್ ಮಾಡಿಲ್ಲ ಎಂದು ಸ್ವತ: ಶಾಸಕರೇ ಕಾಲಿನಿಂದ ಒದ್ದು ನೋಡಿ ಪರಿಶೀಲಿಸಿದರು. ಗೋಡೆಗೆ ಪ್ಲಾಸ್ಟಿಂಗ್ ಮಾಡಿರುವ ಗಾರೆ ಕಳಚಿಕೊಂಡು ಕೆಳಗೆ ಬಿದ್ದಾಗ ಶಾಸಕರು, ಸ್ಥಳದಲ್ಲಿದ್ದ ಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರರನ್ನು ತರಾಟೆ ತೆಗೆದುಕೊಂಡರು. ಈ ಕುರಿತು ಕೂಡಲೇ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ನಿರ್ಮಿಸುವಂತೆ ತಾಕೀತು ಮಾಡಿದರು.
ಬಳಿಕ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಲಾಯಿತು. ಭೇರ್ಯದಲ್ಲಿ ಬಸ್ನಿಲ್ದಾಣ ನಿರ್ಮಿಸಲು ಯಾರೊಬ್ಬರೂ ಒಂದು ಗುಂಟೆ ಜಮೀನು ನೀಡಿಲಿಲ್ಲ, ಕಂದಾಯ ಇಲಾಖೆಯಿಂದ ಜಾಗ ಪಡೆಯಲಾಗಿದೆ. ಇದಕ್ಕೂ ಗ್ರಾಮದ ವ್ಯಕ್ತಿಯೊಬ್ಬರು ತಕರಾರು ಮಾಡಿದರು. ಅವರ ಮನವೊಲಿಸಿ ಇದೇ ಜಾಗದಲ್ಲಿ ಬಸ್ನಿಲ್ದಾಣ ನಿರ್ಮಿಸಲಾಗುತ್ತಿದೆ. ವಿನಾ ಕಾರಣ ಆರೋಪ, ಅಪಪ್ರಚಾರ ಮಾಡಿದ್ದರಿಂದ ಸಾಕಷ್ಟು ಬೇಸರವಾಯಿತು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಶಿವಶಂಕರ್, ಮಾಜಿ ಅಧ್ಯಕ್ಷ ಅನಿಫ್ಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ಬಿ.ಕೆ.ಕುಮಾರ್, ಬಿ.ಪಿ.ಲೋಕೇಶ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಸ್ಕುಮಾರ್, ಎಸ್ಎಸ್ಎನ್ ಅಧ್ಯಕ್ಷ ರಾಮೇಗೌಡ, ಜೆಡಿಎಸ್ ಮುಖಂಡರಾದ ಮಹೇಶ್ನಾಯಕ, ಬಂಡೆಕುಮಾರ್, ಸಾಲಿಗ್ರಾಮ ಅಯಾಜ್, ಅನಂತಣ್ಣ, ಡೇರಿ ರಾಜೇಗೌಡ, ಶಿಕ್ಷಕ ಪ್ರಸನ್ನ, ಪಿಡಿಒ ಕಾರ್ತೀಕ್ ಇತರರಿದ್ದರು.