ಕಡಲೆ ಖರೀದಿ ಕೇಂದ್ರ ಆರಂಭ ಯಾವಾಗ?
Team Udayavani, Feb 10, 2020, 5:02 PM IST
ಗದಗ: ಹಲ್ಲು ಇದ್ದವನಿಗೆ ಕಡಲೆ ಇಲ್ಲ. ಕಡಲೆ ಇದ್ದವನಿಗೆ ಹಲ್ಲು ಇಲ್ಲ ಎಂಬಂತಾಗಿದೆ ಜಿಲ್ಲೆಯ ರೈತರ ಪರಿಸ್ಥಿತಿ. ಕಳೆದ ಅಕ್ಟೋಬರ್ ನಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದ ಮಧ್ಯೆಯೂ ಕಡಲೆ ಇಳುವರಿ ಉತ್ತಮವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯದೇ ಕಡಲೆ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದ್ದು, ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಕೂಗು ಜೋರಾಗಿದೆ.
ಕಳೆದ ಐದಾರು ವರ್ಷಗಳಿಂದ ಸತತವಾಗಿ ಕಾಡಿದ ಬರಗಾಲ ಜಿಲ್ಲೆಯ ರೈತರನ್ನು ಕಂಗೆಡಿಸಿತ್ತು. ಅದರಂತೆ ಕಳೆದ ಅಕ್ಟೋಬರ್ನಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹ ಬರದಿಂದ ಬಳಲಿದ್ದ ರೈತರನ್ನು ಮತ್ತಷ್ಟು ಜರ್ಜರಿತವಾಗುವಂತೆ ಮಾಡಿತು. ಆನಂತರ ಬಿತ್ತನೆಯಾದ ಕಡಲೆ ಬೆಳೆ ಭಾರೀ ಅಲ್ಲದಿದ್ದರೂ, ಉತ್ತಮ ಇಳುವರಿ ಬಂದಿದೆ.
1.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: ಕಡಲೆ ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಮಳೆ ಆಶ್ರಿತ ಪ್ರದೇಶದಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅದರಂತೆ ಈ ಬಾರಿ ಜಿಲ್ಲೆಯಲ್ಲಿ ಗದಗ ತಾಲೂಕಿನ 32,600 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 11,816 ಹೆಕ್ಟೇರ್, ನರಗುಂದಲ್ಲಿ 12,700 ಹೆಕ್ಟೇರ್, ರೋಣ 55,812 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 9315 ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,22,243 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಅದರಲ್ಲೂ ನವೆಂಬರ್ನಲ್ಲಿ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಬಹುದಿನಗಳ ವರೆಗೆ ಕಾಯ್ದುಕೊಂಡಿದ್ದರಿಂದ ಶೇ.50ರಷ್ಟು ಬೆಳೆ ಉತ್ತಮವಾಗಿದೆ. ಹಲವೆಡೆ ಬಿತ್ತನೆ ವಿಳಂಬವಾಗಿದ್ದರಿಂದ ಕಾಳು ಕಟ್ಟುವಿಕೆ ಹಾಗೂ ಕೊಯ್ಲು ವಿಳಂಬವಾಗಿದೆ.
ಇನ್ನುಳಿದಂತೆ ಕಡಲೆ ಕಟಾವು ಆಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ಬೆಲೆ ಇಲ್ಲದೇ ರೈತರ ಪರದಾಟ: ಬರ- ನೆರೆ ಮಧ್ಯೆಯೂ ಭೂತಾಯಿ ನಂಬಿರುವ ಅನ್ನದಾತರು ಈ ಬಾರಿ ಹಿಂಗಾರಿನಲ್ಲಿ ಸಾಲ ಮಾಡಿ ಕಡಲೆ ಬಿತ್ತನೆ ಮಾಡಿದ್ದರು. ಸುಮಾರು 4500 ರೂ. ಕ್ವಿಂಟಲ್ನಂತೆ ಕಡಲೆ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಬಳಿಕ ಕಳೆ ತೆಗೆಯುವುದು, ಕ್ರಿಮಿನಾಶಕ ಸಿಂಪರಣೆ ಸೇರಿದಂತೆ ಬೆಳೆ ಕಟಾವು ಆಗಿ, ಮಾರುಕಟ್ಟೆಗೆ ಸಾಗಿಸುವುದರೊಳಗೆ ಸುಮಾರು 13ರಿಂದ 15 ಸಾವಿರ ರೂ. ಖರ್ಚು ಬರುತ್ತದೆ. ಪ್ರತಿ ಎಕರೆಗೆ ಐದರಿಂದ ಆರು ಚೀಲ ಇಳುವರಿ ಬಂದಿದೆ. ಆದರೆ, ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕನಿಷ್ಠ 3200 ರೂ.ಗಳಿಂದ ಗರಿಷ್ಠ 4000 ರೂ. ಮೀರುತ್ತಿಲ್ಲ. ಅದರಲ್ಲೂ ಬಹುತೇಕ ರೈತರಿಗೆ ಪ್ರತಿ ಕ್ವಿಂಟಲ್ಗೆ ಸರಾಸರಿ 3,500 ರೂ. ಕೈಗೆ ಬರುತ್ತಿದ್ದು, ಬೆಳೆಗೆ ಖರ್ಚು ಮಾಡಿದ ಕೂಲಿಯೂ ಮರಳುತ್ತಿಲ್ಲ ಎಂಬುದು ರೈತರ ಅಳಲು.
ಆದರೆ, ಕಳೆದ ಜನವರಿ 1ರಿಂದ ಫೆ. 8ರ ವರೆಗೆ ಜಿಲ್ಲೆಯ ಗದಗ ಮಾರುಕಟ್ಟೆಯೊಂದರಲ್ಲೇ 59,922 ಕ್ವಿಂಟಲ್ ಕಡಲೆ ಆವಕವಾಗಿದೆ. ಜಿಲ್ಲೆಯ ವಿವಿಧ ಎಪಿಎಂಸಿಗಳಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 68,449 ಕ್ವಿಂಟಲ್ ಆವಕವಾಗಿದೆ. ಆದರೆ ಬೆಲೆಯಲ್ಲಿ ಚೇತರಿಕೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಕಡಲೆ ಬೆಳೆಗಾರರ ರಕ್ಷಣೆಗಾಗಿ ತಕ್ಷಣವೇ ರಾಜ್ಯ ಸರಕಾರ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರೈತರ ಒತ್ತಾಯ.
-ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ