ಹಳ್ಳಿ ಸುತ್ತ ಗಂಡುಲಿ
Team Udayavani, Feb 14, 2020, 6:20 AM IST
ಸುಮಾರು ಎರಡು ವರ್ಷಗಳ ಹಿಂದೆ ಬಹುತೇಕ ಇಂಜಿನಿಯರ್ಗಳೇ ಸೇರಿ ನಿರ್ಮಿಸಿದ್ದ ಈ “ಇಂಜಿನಿಯರ್’ ಎಂಬ ಚಿತ್ರ ತೆರೆಗೆ ಬಂದಿದ್ದು ಗೊತ್ತಿರಬಹುದು. ಈ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದ, ವೃತ್ತಿಯಲ್ಲಿ ಇಂಜಿನಿಯರ್ ನವ ಪ್ರತಿಭೆ ವಿನಯ್ ರತ್ನಸಿದ್ಧಿ ಈಗ ಸದ್ದಿಲ್ಲದೆ ಮತ್ತೂಂದು ಚಿತ್ರವನ್ನು ಮಾಡಿ ಮುಗಿಸಿ ತೆರೆ ತರಲು ಅಣಿಯಾಗಿದ್ದಾರೆ. ಅಂದಹಾಗೆ ಆ ಚಿತ್ರದ ಹೆಸರು “ಗಂಡುಲಿ’
ಕನ್ನಡದಲ್ಲಿ ಈಗಾಗಲೇ “ಹುಲಿ’, “ರಾಜಾಹುಲಿ’, “ಹೆಬ್ಬುಲಿ’, “ಪಡ್ಡೆಹುಲಿ’ ಹೀಗೆ ಹುಲಿಯ ಹೆಸರಿನಲ್ಲಿ ಹಲವು ಚಿತ್ರಗಳು ತೆರೆಗೆ ಬಂದಿವೆ. ಈ ಇಂಥ ಶೀರ್ಷಿಕೆಗಳ ಸಾಲಿಗೆ ಈಗ “ಗಂಡುಲಿ’ ಹೊಸ ಸೇರ್ಪಡೆ. ಇನ್ನು ಚಿತ್ರದ ಹೆಸರೇ ಹೇಳುವಂತೆ, “ಗಂಡುಲಿ’ ಔಟ್ ಆ್ಯಂಡ್ ಔಟ್ ಕಮರ್ಶಿಯಲ್, ಆ್ಯಕ್ಷನ್ ಎಂಟರ್ಟೈನ್ಮೆಂಟ್ ಚಿತ್ರ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ “ಗಂಡುಲಿ’ ಚಿತ್ರದ ಟೀಸರ್ ಅನ್ನು ಹೊರತಂದಿದೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಾಯಕ ಕಂ ನಿರ್ದೇಶಕ ವಿನಯ್ ರತ್ನಸಿದ್ಧಿ, “ಈ ಹಿಂದೆ ಈಗಿನ ಕಾಲದ ಯುವ ಜನರನ್ನು ಕುರಿತಾಗಿ “ಇಂಜಿನಿಯರ್’ ಸಿನಿಮಾ ಮಾಡಿದ್ದೆವು. ಆದ್ರೆ “ಗಂಡುಲಿ’ ಪಕ್ಕಾ ಹಳ್ಳಿಯ ಹಿನ್ನೆಲೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ. ಇದರಲ್ಲಿ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗಕ್ಕೂ ಇಷ್ಟವಾಗುವಂಥ ಕಂಟೆಂಟ್ ಇದೆ. ಸೆಂಟಿಮೆಂಟ್, ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೂ ಸಿನಿಮಾದಲ್ಲಿದೆ. ಊರಿನ ಜನರೆಲ್ಲಾ ಹೆದರಿಕೊಳ್ಳುವಂತಹ ಘಟನೆಗಳು ನಡೆದಾಗ ಅದರ ಹಿಂದೆ ಯಾರ್ಯಾರಿದ್ದಾರೆ ಅದಕ್ಕೆ ಕಾರಣ ಏನು ಎನ್ನುವುದನ್ನು ಹುಡುಕುತ್ತ ಹೊರಡುವುದು ಚಿತ್ರದಲ್ಲಿ ನಾಯಕ ಪಾತ್ರ. ತನ್ನ ಚಟುವಟಿಕೆಗಳಿಂದಲೇ ನಾಯಕ ಹೇಗೆ ಇಡೀ ಊರಿಗೇ “ಗಂಡುಲಿ’ ಎನಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾದ ಒನ್ ಲೈನ್ ಸ್ಟೋರಿ’ ಎಂದು ಚಿತ್ರದ ಕಥಾಹಂದರ ಮತ್ತು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ಇನ್ನು ಬಹು ಸಮಯದ ನಂತರ ಹಿರಿಯ ನಟ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಈ ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮತ್ತೆ ಬೆಳ್ಳಿತೆರೆಗೆ ಬಂದಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಟಿ ಸುಧಾ ನರಸಿಂಹರಾಜ್, “ಬಹಳ ದಿನಗಳ ನಂತರ ಒಂದು ಒಳ್ಳೆಯ ಪಾತ್ರದ ಮೂಲಕ ತೆರೆಯ ಮೇಲೆ ಬರುತ್ತಿದ್ದೇನೆ.
ಊರಲ್ಲಿ ದಾನ – ಧರ್ಮಕ್ಕೆ ಹೆಸರಾದ ದಿವಾನರ ಮನೆತನದ ಹೆಣ್ಣುಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ. ತಾಯಿ-ಮಗನ ಸೆಂಟಿಮೆಂಟ್ ಜೊತೆಗೆ ಎಂಟರ್ಟೈನ್ಮೆಂಟ್ ಕಥೆ ಈ ಸಿನಿಮಾದಲ್ಲಿರುವುದರಿಂದ, ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಹೇಳಿದರು.
“ಗಂಡುಲಿ’ ಚಿತ್ರದಲ್ಲಿ ಛಾಯಾದೇವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಧರ್ಮೆàಂದ್ರ ಅರಸ್, ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ವಿ.ಆರ್.ಫಿಲಂಸ್’ ಲಾಂಛನದಲ್ಲಿ ಅಮರೇಂದ್ರ ಚಂದನ್ ಹಾಗೂ ಪುನೀತ್ ಕೆ.ಎಂ ಜಂಟಿಯಾಗಿ ಬಂಡವಾಳ ಹೂಡಿ “ಗಂಡುಲಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ರವಿದೇವ್ ಸಂಗೀತ ಸಂಯೋಜಿಸಿದ್ದು, ರಾಜು ಶಿವಶಂಕರ್ ಮತ್ತು ಶ್ಯಾಮ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಬೇಸಿಗೆ ವೇಳೆಗೆ “ಗಂಡುಲಿ’ಯನ್ನು ಪ್ರೇಕ್ಷಕರ ಮುಂದೆ ತರುವ ಪ್ಲಾನ್ನಲ್ಲಿದೆ.