ಏಪ್ರಿಲ್ಗೆ ಒಂದು ಗಂಟೆಯ ಕಥೆ
Team Udayavani, Feb 24, 2020, 7:00 AM IST
ಕನ್ನಡದಲ್ಲಿ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ “ಒಂದು ಗಂಟೆಯ ಕಥೆ’ ಕೂಡ ಸೇರಿದೆ. ಈಗಾಗಲೇ ಪೋಸ್ಟರ್ ಹಾಗು ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಫೆ.28 ರಂದು ಚಿತ್ರದ ಆಡಿಯೋ ಬಿಡುಗಡೆ ಮಾಡುವ ಬಗ್ಗೆ ತಯಾರಿ ನಡೆಸಿದೆ. ಈ ಹಿಂದೆ “ಮತ್ತೆ ಮುಂಗಾರು’ ಚಿತ್ರವನ್ನು ನಿರ್ದೇಶಿಸಿದ್ದ ರಾಘವ್ ದ್ವಾರ್ಕಿ ಈ ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
“ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್’ ಬ್ಯಾನರ್ನಲ್ಲಿ ಕಶ್ಯಪ್ ದಾಕೋಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಹಾಡುಗಳನ್ನು ಹೊರತರುವ ಉತ್ಸಾಹದಲ್ಲಿದೆ. ಚಿತ್ರದ ಹಾಡುಗಳಿಗೆ ಡೆನ್ನಿಸ್ ವಲ್ಲಭನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸೂರ್ಯಕಾಂತ್ ಛಾಯಾಗ್ರಹಣವಿದೆ. ಗಣೇಶ್ ಮಲ್ಲಯ್ಯ ಸಂಕಲನವಿದೆ. ಇಂದಿನ ಯುವಕರ ಜೀವನ ಶೈಲಿ ಮತ್ತು ಅಭಿರುಚಿ, ಜವಾಬ್ದಾರಿಗಳ ಕುರಿತು ಕಥಾ ಹಂದರ ಹೊಂದಿರುವ “ಒಂದು ಗಂಟೆಯ ಕಥೆ’ ಚಿತ ಏಪ್ರಿಲ್ ಅಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
“ಪ್ರೇಮಿಗಳ ದಿನ’ದಂದು ಚಿತ್ರದ ಪೋಸ್ಟರ್ ಮತ್ತು ಟ್ರೇಲರ್ ಬಿಡುಗಡೆಯಾಗಿತ್ತು. ಬಿಡುಗಡೆ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ ಜೋರು ಸದ್ದು ಮಾಡಿದೆ. ಹೊಸ ತಂಡವೊಂದು ಹೊಸಬಗೆಯ ಸಿನಿಮಾ ಕಟ್ಟಿಕೊಟ್ಟಿರುವ ಸಂತಸದಲ್ಲಿದೆ. ಚಿತ್ರದಲ್ಲಿ ಅಜಯ್ ರಾಜ್ (ನಂಜುಂಡ) ಶನಾಯ ಕಾಟೆ, ಸ್ವಾತಿ ಶರ್ಮ, ಚಿದಾನಂದ್, ಪ್ರಶಾಂತ್ ಸಿದ್ಧಿ, ಪ್ರಕಾಶ್ ತುಮಿನಾಡು, ಚಂದ್ರಕಲಾ, ಯಶವಂತ್ ಸರದೇಶಪಾಂಡೆ, ನಾಗೇಂದ್ರ, ಮಿಮಿಕ್ರಿ ಗೋಪಿ, ಆನಂದ್, ಕುಳ್ಳ ಸೋಮು, ಮಜಾ ಟಾಕೀಸ್ ರೆಮೊ, ರುಕ್ಮಿಣಿ ಮೊದಲಾದ ಕಲಾವಿದರು ನಟಿಸಿದ್ದಾರೆ.