ಚಿರತೆ ಕಾಟ: ರೈತರಲ್ಲಿ ಹೆಚ್ಚಿದ ಆತಂಕ
Team Udayavani, Feb 24, 2020, 3:00 AM IST
ಚನ್ನರಾಯಪಟ್ಟಣ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮಗಳಲ್ಲಿಯೂ ಚಿರತೆ ಸಂಚಾರ ರಾತ್ರಿ ವೇಳೆ ನಡೆಯುತ್ತಿರುವುದರಿಂದ ಗ್ರಾಮಸ್ಥರು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಕಾಡಿಂದ ನಾಡಿಗೆ ಬಂದಿರುವ ಚಿರತೆಗಳು ಅನೇಕ ಗ್ರಾಮದಲ್ಲಿನ ನಾಯಿ, ಕುರಿ ಹಾಗೂ ಜಾನುವಾರುಗಳನ್ನು ಬೇಟೆಯಾಡಿ ಪರಾರಿಯಾಗುತ್ತಿವೆ.
ಇದಕ್ಕೆ ಸಾಕ್ಷಿಯಾಗಿ ನುಗ್ಗೇಹಳ್ಳಿ ಹೋಬಳಿ ಗೌಡಗೆರೆ ಸಮೀಪದಲ್ಲಿ ಹಾದು ಹೋಗಿರುವ ರಾಷ್ಟ್ರೀಯದ್ದಾರಿಯಲ್ಲಿ ಚಿರತೆಗಳು ವಾಹನಕ್ಕೆ ಸಿಕ್ಕಿ ಮೃತಪಟ್ಟಿರುವುದು. ಗೌಡಗೆರೆ ಗ್ರಾಮದ ಸುತ್ತಮುತ್ತಲಿನ ಅನೇಕ ಹಳ್ಳಿಯಲ್ಲಿ ಬೀದಿನಾಯಿಗಳು ನಾಪತ್ತೆಯಾಗಿರುವುದು. ಕೆಲವು ಮನೆಗಳಲ್ಲಿ ಕುರಿ, ರಾಸುಗಳ ಕರುಗಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಾಯವಾಗುತ್ತಿವೆ ಇದರಿಂದ ಚಿರತೆ ಹಾವಳಿ ಇದೆ ಎನ್ನುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತಿದೆ.
ಮುಂಜಾಗ್ರತೆ ವಹಿಸದ ಅರಣ್ಯ ಇಲಾಖೆ: ಒಂದೆರಡು ತಿಂಗಳಿನಿಂದ ಚಿರತೆಗಳು ಶ್ರವಣಬೆಳಗೊಳದ ವಿಂದ್ಯಗಿರಿ ಮತ್ತು ಚಂದ್ರಗಿರಿಯಲ್ಲಿ ಬೀಡು ಬಿಟ್ಟಿದ್ದು, ಸ್ಥಳಿಯ ನಿದ್ದೆಗೆಡಿಸಿತ್ತು. ಆದರೆ ಈಗ ಹಿರೀಸಾವೆ ಹೋಬಳಿ, ನುಗ್ಗೇಹಳ್ಳಿ, ಬಾಗೂರು ಹಾಗೂ ದಂಡಿಗನಹಳ್ಳಿಯಲ್ಲಿ ಹಲವು ಕೆರೆಯಲ್ಲಿ ದಟ್ಟವಾಗಿ ಬೆಳೆದಿರುವ ಗಿಡಗಳ ತಪ್ಪಲಿನಲ್ಲಿ ಚಿರತೆ ವಾಸವಾಗಿವೆ. ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ ಚಿರತೆಗಳು ಸಾರ್ವಜನಿಕರಿಗೆ ದರ್ಶನ ನೀಡುವ ಮೂಲಕ ಗ್ರಾಮದಲ್ಲಿ ಹಗಲು-ರಾತ್ರಿ ಸಂಚರಿಸುತ್ತಿದ್ದು, ಈಗಾಗಲೇ ಹಲವು ಬಾರಿ ರೈತರ ಮೇಲೆ, ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಚಿರತೆಗಳು ಬಲಿ ತೆಗೆದುಕೊಂಡಿದ್ದರೂ ಈ ಭಾಗದಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ರೈತರ ಮನವಿಗೆ ಸ್ಪಂದನೆ ಇಲ್ಲ: ಚಿರತೆ ಹಾವಳಿಯಿಂದ ಬೇಸತ್ತಿರುವ ರೈತರು ಅರಣ್ಯ ಇಲಾಖೆ ಆಗಮಿಸಿ ತಮ್ಮ ಗ್ರಾಮಕ್ಕೆ ಬೋನು ನೀಡುವಂತೆ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ರೈತರು ತಮ್ಮ ಸಾಕು ಪ್ರಾಣಿಯನ್ನು ಹೊಲ ತೋಟಗಳಿಗೆ ಮನೆಗಳಿಗೆ ಕರೆದುಕೊಂಡು ಹೋಗಲು ಭಯಪಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ನಿರ್ಮಾಣ ಆಗಿದೆ.
ಕೇವಲ ಭರವಸೆ: ಪ್ರತಿ ಬಾರಿ ಗ್ರಾಮದ ರಾಸುಗಳ ಮೇಲೆ ಚಿರತೆ ದಾಳಿ ನಡೆದಾಗಲೂ ಕಾಟಾಚಾರಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. ರಾಸುಗಳು ಮೃತ ಪಟ್ಟರೆ ಪಶುಪಾಲನ ಇಲಾಖೆಗೆ ತಿಳಿಸಿ ಮೃತ ರಾಸು ಅಥವಾ ಕುರಿಯ ದೇಹ ಪಂಚನಾಮೆ ಮಾಡಿಸುವಂತೆ ತಿಳಿಸುವುದಲ್ಲದೇ ಪರಿಹಾರ ನೀಡುವ ಭರವಸೆ ನೀಡಿ ಗ್ರಾಮದಿಂದ ತೆರಳುತ್ತಿದ್ದಾರೆ ಹೊರತು ಈ ವರೆಗೆ ಪರಿಹಾರ ನೀಡಿಲ್ಲ. ಚಿರತೆ ಹಿಡಿಯಲು ಕ್ರಮ ಕೈಗೊಂಡಿಲ್ಲ ಎಂಬುದು ರಾಸು ಹಾಗೂ ಕುರಿ ಕಳೆದುಕೊಂಡವರ ಅಳಲಾಗಿದೆ.
ಕೋಳಿಶೆಡ್ನತ್ತ ಚಿರತೆ ಹೆಜ್ಜೆ: ಬೆಟ್ಟ ಗುಡ್ಡ ಹಾಗೂ ಹೆಚ್ಚು ಮರಗಿಡಗಳು ಬೆಳೆದಿರುವ ಜಾಗದಲ್ಲಿ ವಾಸವಾಗಿರುವ ಚಿರತೆಗಳು ರಾತ್ರಿಯಾಗುತ್ತಿದಂತೆ ಗ್ರಾಮಕ್ಕೆ ಪ್ರವೇಶ ಮಾಡುತ್ತಿವೆ. ನಾಯಿ, ಕುರಿ, ರಾಸುಗಳನ್ನು ಹೊಂಚುಹಾಕಿ ರಕ್ತ ಹೀರುತ್ತಿದ್ದ ಚಿರತೆಗಳು ಇದೀಗ ಕೋಳಿ ಫಾರಂಗಳತ್ತ ಗುರಿ ಇಟ್ಟಿವೆ. ಕೋಳಿಶೆಡ್ನಲ್ಲಿ ಚಿರತೆ ದಾಳಿಮಾಡಿ ಹತ್ತಾರು ನಾಟಿ ಕೋಳಿ ಹಾಗೂ ಫಾರಂ ಕೋಳಿಗಳ ಪ್ರಾಣತೆಗೆಯುತ್ತಿವೆ. ಇದರಿಂದ ಶೆಡ್ ಮಾಲೀಕರಿಗೆ ಸಾವಿರಾರು ರೂ. ನಷ್ಟವಾಗುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಶ್ರವಣಬೆಳಗೊಳದ ವಿಂದ್ಯಗಿರಿ ಮತ್ತು ಚಂದ್ರಗಿರಿಯಲ್ಲಿ ಬೆಟ್ಟದಲ್ಲಿ ಬೋನು ಇಡಲಾಗಿದೆ. ಇನ್ನು ಹಲವು ಗ್ರಾಮಸ್ಥರು ಬೋನಿಗೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಇರುವಷ್ಟು ಬೋನ್ ಲಭ್ಯವಿಲ್ಲದೇ ತೊಂದರೆಯಾಗುತ್ತಿದೆ. ಯಾವ ಗ್ರಾಮದಲ್ಲಿ ಹೆಚ್ಚು ಚಿರತೆ ಕಾಣಿಸಿಕೊಳ್ಳುತ್ತದೋ ಅಲ್ಲಿಗೆ ಕೂಡಲೆ ಸಿಬ್ಬಂದಿ ಕಳುಹಿಸಿ ಚಿರತೆ ಹಿಡಿಯಲು ಕ್ರಮ ಕೈಗೊಳ್ಳುತ್ತಿದ್ದೇವೆ.
-ಹೇಮಂತ ಕುಮಾರ, ವಲಯ ಅರಣ್ಯ ಅಧಿಕಾರಿ
ಚಿರತೆ ಒಂದು ಕುರಿ ತಿಂದಿರುವುದಲ್ಲದೇ ಕರುವಿನ ಮೇಲೂ ದಾಳಿ ಮಾಡಿ ಅದನ್ನು ಕೊಂದು ಹಾಕಿದೆ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇನೆ ಅವರು ಪಶುಆಸ್ಪತ್ರೆಯಲ್ಲಿ ಸತ್ತ ಕುರುವಿನ ದೇಹ ಪರೀಕ್ಷಿಸಿ ಪ್ರಮಾಣ ಪತ್ರ ನೀಡಿ ನಂತರ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದರು. ಅಗತ್ಯ ದಾಖಲೆ ನೀಡಿ ತಿಂಗಳು ಕಳೆದರೂ ಬಿಡಿಗಾಸು ಪರಿಹಾರ ನೀಡಿಲ್ಲ.
-ಗುರು, ಅಣ್ಣೇನಹಳ್ಳಿ ರೈತ
* ಶಾಮಸುಂದರ್ ಕೆ ಅಣ್ಣೇನಹಳ್ಳಿ