ಸುಧಾರಣೆಯೇ ಉದ್ದೇಶ: ಲೋಕಾಯುಕ್ತ
ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಭೇಟಿ
Team Udayavani, Feb 28, 2020, 5:42 AM IST
ಅಜೆಕಾರು: ಜನರಿಗೆ ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ದೊರೆತಾಗ ಉತ್ತಮ ಸಮಾಜ ನಿರ್ಮಾಣ ವಾಗಲು ಸಾಧ್ಯವಿದೆ. ಸುಧಾಕರಣೆಯ ಉದ್ದೇಶವೇ ಲೋಕಾಯುಕ್ತರ ಭೇಟಿ ಯದ್ದಾಗಿದೆ ಎಂದು ಕರ್ನಾಟಕ ಲೋಕಾ ಯುಕ್ತ ಪಿ. ವಿಶ್ವನಾಥ ಶೆಟ್ಟಿ ಹೇಳಿದರು.
ಅವರು ಫೆ.27ರಂದು ಕಾರ್ಕಳ ತಾಲೂಕಿನ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಪರಿಶೀಲಿಸಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಕರ್ತವ್ಯ ನಿಷ್ಠೆ
ಕಾರ್ಕಳದ ವೈದ್ಯರು, ಸಿಬಂದಿಯ ಕರ್ತವ್ಯ ನಿಷ್ಠೆ ಉತ್ತಮವಾಗಿದ್ದು, ಇಲ್ಲಿ ಚಿಕಿತ್ಸೆ ಪಡೆಯುವರ ಸಂಖ್ಯೆ ಹೆಚ್ಚಿರುವುದು ಇಲ್ಲಿನ ವೈದ್ಯರಿಂದ ಉತ್ತಮ ಸೇವೆ ಸಿಗುತ್ತದೆ ಎಂಬುದಕ್ಕೆ ಸಾಕ್ಷಿ ಎಂದರು.
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಇರುವ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರಕ್ಕೆ ವರದಿ ನೀಡಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಸಿಸಿ ಕೆಮರಾ ಅಗತ್ಯವಾಗಿದೆ. ಇದರಿಂದ ಅಲ್ಲಿ ದೊರೆಕುವ ಸೇವೆ ಹಾಗೂ ವೈದ್ಯರು ಹಾಗೂ ಸಿಬಂದಿ ಭದ್ರತೆಗೆ ಅನುಕೂಲವಾಗುತ್ತದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ತಾಲೂಕು ಸರಕಾರಿ ಆಸ್ಪತ್ರೆ ಕಟ್ಟಡದ ಗುಣಮಟ್ಟ ಹಾಗೂ ನಿರ್ವಹಣೆ ಕಾಪಾಡುವಂತೆ ಎಂಜಿನಿಯರ್ಗೆ ನಿರ್ದೇಶನ ನೀಡಿದರು.
ಮಿಯ್ನಾರಿನ ಮೊರಾರ್ಜಿ ದೇಸಾಯಿ ವಸತಿಶಾಲೆ, ಹಿಂದುಳಿದ ವರ್ಗಗಳ ವಸತಿ ಗೃಹ ಹಾಗೂ ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇದೇ ಸಂದರ್ಭದಲ್ಲಿ ಅವರು ಭೇಟಿ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ಚಂದ್ರ ಸೂಡಾ, ತಾಲೂಕು ಆರೋಗ್ಯಾಧಿಕಾರಿ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಕೃಷ್ಣಾನಂದ, ಮುಖ್ಯವೈದ್ಯಾಧಿಕಾರಿ ಡಾ| ಪಿ.ಕೆ. ಮಲ್ಯ, ಲೋಕಾಯುಕ್ತ ಪ್ರಭಾರ ವಲಯ ವರಿಷ್ಠಾಧಿಕಾರಿ ಭಾಸ್ಕರ್ ವಿ., ವೃತ್ತನಿರೀಕ್ಷಕ ರವಿ ರಾಜಶೇಖರ್ ಉಪಸ್ಥಿತರಿದ್ದರು.