ಸಕ್ಕರೆ ಕಾರ್ಖಾನೆಯಿಂದ ಹೊರಬಂದ ಸಿಬ್ಬಂದಿ
Team Udayavani, Mar 25, 2020, 4:18 PM IST
ಆಲಮೇಲ: ಕೊರೊನಾ ಭೀತಿಯಿಂದ ಖಾಸಗಿ ಕಂಪನಿಗಳು ಬಂದ ಮಾಡಲು ಆದೇಶವಿದ್ದು, ತಮಿಳುನಾಡು ಮೂಲದ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯಲ್ಲಿ ಬಂದ್ ಮಾಡದೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
ಖಾಸಗಿ ಕಂಪನಿಗಳು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಜೆ ನೀಡಬೇಕು ಎಂದು ಸರ್ಕಾರ ಆದೇಶಿಸಿದರು. ಕಾರ್ಖಾನೆಯಲ್ಲಿ ಸ್ಥಳೀಯ ಕಾರ್ಮಿಕರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಯ ಮತ್ತು ತಮಿಳುನಾಡು, ಬಿಹಾರದ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮುಂಜಾಗ್ರತವಾದ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ. ವಿಷಯ ತಿಳಿದು ಕಾರ್ಖಾನೆಗೆ ಆಗಮಿಸಿದ ಆಲಮೇಲ ಎಸೈ ನಿಂಗಪ್ಪ ಪೂಜಾರಿ ಅಲ್ಲಿನ ಸಂಬಂಧಿಸಿದ ಅಧಿಕಾರಿಗೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡು ಸ್ಯಾನಿಟೈಸರ್ ತಯಾರಿಸಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಂಡಿದ್ದು, ಅದಕ್ಕೆ ಸಂಬಂಧಪಟ್ಟ ಕಾರ್ಮಿಕರನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕರಿಗೆ ರಜೆ ನೀಡಿ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಖಾನೆ ಅಧಿಕಾರಿ ಗಂಗಾಧರ ಹುಕ್ಕೇರಿ, ಕಾರ್ಖಾನೆಯ ಬಾಯ್ಲರ್ ಕೆಲಸ ನಡೆಯುತ್ತಿದ್ದು, ಅದರ ಎಲ್ಲ ಕಾರ್ಮಿಕರು ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ.
ಕಾರ್ಖಾನೆಯ ಬಾಯ್ಲರ್ ತಕ್ಷಣವೇ ಬಂದ್ ಮಾಡಲು ಬರುವುದಿಲ್ಲ. 27ರ ನಂತರ ಬಂದ್ ಮಾಡಿ ಕಾರ್ಮಿಕರಿಗೆ ರಜೆ ನೀಡುತ್ತಿವೆ. ಡಿಸಿ ಆದೇಶದ ಮೇರೆಗೆ ಸ್ಯಾನಿಟೈಸರ್ ತಯಾರಿಸಲು ಪರವಾನಗಿ ಪಡೆದುಕೊಂಡಿದ್ದು ಅದರ ಕೆಲಸ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟ ಕಾರ್ಮಿಕರನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕರನ್ನು ರಜೆ ನೀಡುತ್ತೇವೆ ಎಂದು ತಿಳಿಸಿದರು.
ಕಾರ್ಖಾನೆಯಲ್ಲಿ 430 ಕಾರ್ಮಿಕರು ಕೆಲಸ ಮಾಡುತ್ತಿದ್ದು ಸದ್ಯ ಶೇ.30 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಮತ್ತು ಬೇರೆ ಬೇರೆ ರಾಜ್ಯದ ಕಾರ್ಮಿಕರು ಇದ್ದಾರೆ ಅವರಿಗೆ ಮುಂಜಾಗ್ರತೆಯಾಗಿ ಮಾಸ್ಕ್ ಧರಿಸಿಕೊಂಡು ಕೆಲಸ ಮಾಡಲು ಹೇಳಲಾಗಿದೆ ಎನ್ನುತ್ತಾರೆ ಕಾರ್ಮಿಕರ ವ್ಯವಸ್ಥಾಪಕ ರಮೇಶ ಮಾಳಗಿ.