ಕೋವಿಡ್ 19: ಅಬ್ಬಾ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ ಗೊತ್ತಾ? ಇಲ್ಲಿನ ವೈದ್ಯರ ಅಳಲು ಓದಿ
ರಂಜಾನ್ ತಿಂಗಳಲ್ಲಿ ಮಸೀದಿಗಳನ್ನು ತೆರೆಯುವುದು ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸುವುದು ಅಪಾಯಕ್ಕೆ ಎಡೆಮಾಡಿಕೊಡಲಿದೆ
Team Udayavani, Apr 23, 2020, 5:54 PM IST
ಇಸ್ಲಾಮಾಬಾದ್:ಮುಂಬರುವ ದಿನಗಳಲ್ಲಿ ಕೋವಿಡ್ 19 ವೈರಸ್ ನ ಪರಿಣಾಮ ಪಾಕಿಸ್ತಾನದಲ್ಲಿ ತುಂಬಾ ಭೀಕರವಾಗಲಿದೆ. ಅಲ್ಲದೇ ರಂಜಾನ್ ತಿಂಗಳಲ್ಲಿ ಜನರು ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೇಬೇಕಾಗಿದೆ ಎಂದು ಪಾಕಿಸ್ತಾನದ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಇದೊಂದು ವೈದ್ಯ ಸಂಬಂಧಿ ಸಮಸ್ಯೆಯಾಗಿದೆ ಇದರಿಂದ ಆರ್ಥಿಕ ಮತ್ತು ಸಮಾಜದ ಮೇಲೆ ಪರಿಣಾಮ ಬೀಳಲಿದೆ. ಆದರೆ ಇದಕ್ಕಿಂತ ಮುಖ್ಯವಾಗಿ ಇದೊಂದು ವೈದ್ಯಕೀಯ ಸಮಸ್ಯೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಗ್ಯಾಸ್ಟ್ರೋಎಂಟರಾಲೋಜಿಸ್ಟ್ ಡಾ.ಸಾದ್ ನಿಯಾಝ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಪಾಕಿಸ್ತಾನದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಶೇ.30ರಿರಂದ 40ಕ್ಕೆ ಏರಿಕೆಯಾಗಿದೆ. ಇದೊಂದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ ಇಲ್ಲಿನ ಜನರು ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕೋವಿಡ್ 19 ಅಪಾಯಕ್ಕಿಂತ ಹೆಚ್ಚು ನಾವು ಮೊದಲು ಇದರ ಬಗ್ಗೆ ಆಲೋಚಿಸಬೇಕು. ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಲಾಕ್ ಡೌನ್ ಘೋಷಿಸದಿದ್ದರೆ, ಇದರ ಪರಿಣಾಮ ಮುಂದೆ ಮತ್ತಷ್ಟು ಭೀಕರವಾಗಲಿದೆ. ಅಲ್ಲದೇ ನಾವು ಈಗ ಕಾರ್ಯಪ್ರವೃತ್ತರಾಗದೇ ಹೋದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಡಾ.ನಿಯಾಝ್ ಎಚ್ಚರಿಸಿದ್ದಾರೆ.
ದೇಶದಲ್ಲಿನ ವೈದ್ಯಕೀಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿದೆ. ರೋಗಿಗಳಿಗೆ ಬೇಕಾದ ಬೆಡ್ಸ್ ಗಳು ಇಲ್ಲ. ಬೆಡ್ ಗಳು ಇಲ್ಲದ ಪರಿಣಾಮ ನಾವು ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರೆ ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಅಂದಾಜಿನ ಪ್ರಕಾರ 70 ಸಾವಿರ ಮಂದಿಗೆ ಕೋವಿಡ್ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಶೇ.10ರಷ್ಟು ರೋಗಿಗಳು ಸೀರಿಯಸ್ ಆದರೂ ಕೂಡಾ ಅವರಿಗೆ ಆಸ್ಪತ್ರೆಯಲ್ಲಾಗಲಿ, ವೆಂಟಿಲೇಟರ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಡಾ.ನಿಯಾಝ್ ತಿಳಿಸಿದ್ದಾರೆ.
ನಾವೀಗ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದರೆ ನಾವು 35 ವರ್ಷದವರಿಗೆ ಅಥವಾ 55 ವರ್ಷದವರಿಗೆ ಆದ್ಯತೆ ಕೊಡಬೇಕಾ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆದರೆ ನಾವು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಂಜಾನ್ ತಿಂಗಳಲ್ಲಿ ಮಸೀದಿಗಳನ್ನು ತೆರೆಯುವುದು ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸುವುದು ಅಪಾಯಕ್ಕೆ ಎಡೆಮಾಡಿಕೊಡಲಿದೆ ಎಂದು ಈಗಾಗಲೇ ವೈದ್ಯರು ಮಸೀದಿ ಮೌಲ್ವಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಕೋವಿಡ್ 19 ವೈರಸ್ ನಿಂದ 200 ಮಂದಿ ಸಾವನ್ನಪ್ಪಿದ್ದು, 10,513 ಜನರು ಸೋಂಕು ಪೀಡಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.