ಕಾಡಾನೆ ದಾಳಿ ಇಬ್ಬರಿಗೆ ಗಂಭೀರ ಗಾಯ
Team Udayavani, May 14, 2020, 11:53 AM IST
ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪಲಿನಲ್ಲಿ ಸ್ಕೂಟರ್ ಮೇಲೆ ಕಾಡಾನೆ ದಾಳಿ ನಡೆಸಿದೆ. ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಕೂಟರ್ನಲ್ಲಿ ಕುಶಾಲನಗರದಿಂದ ಮನೆಯತ್ತ ತೆರಳುತ್ತಿದ್ದ ಕೆಂಚಮ್ಮನಬಾಣೆ ನಿವಾಸಿಗಳಾದ ಕೃಷ್ಣ (45), ಕುಶಾಲ (55) ಅವರ ಮೇಲೆ ಯಡವನಾಡು ಮೀಸಲು ಅರಣ್ಯದ ಸಮೀಪ ಆನೆ ದಾಳಿ ನಡೆಸಿದೆ. ಗಾಯಾಳುಗಳನ್ನು ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆರ್ಎಫ್ಒ ಮನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೆಳೆ ನಾಶ: ಕಣಿವೆ ಸಮೀಪ ಭುವನಗಿರಿ ಮತ್ತು ಕಣಿವೆ ಪ್ರಾ. ಶಾಲೆ ಮೈದಾನದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಾಡಾನೆಗಳು ಹುದುಗೂರು ಭಾಗದಿಂದ ಹಾರಂಗಿ ನಾಲೆ ರಸ್ತೆಯಲ್ಲಿ ಬಂದಿದ್ದು, ಬೆಳೆ ನಾಶ ಮಾಡಿವೆ. ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಆನೆಗಳನ್ನು ಜೇನುಕಲ್ಲು ಬೆಟ್ಟದತ್ತ ಓಡಿಸುವ ಕಾರ್ಯಾಚರಣೆ ನಡೆಸಿತು.