ದಿವ್ಯಾಂಗ ಮಗನಿಗಾಗಿ ಸೈಕಲ್ ಕದ್ದ ಇಕ್ಬಾಲ್ ಬರೆದ ಮನಕಲುಕುವ ಕ್ಷಮಾಪಣಾ ಪತ್ರ!
Team Udayavani, May 18, 2020, 6:09 AM IST
ಮಹಮ್ಮದ್ ಇಕ್ಬಾಲ್ ಖಾನ್ ಸೈಕಲ್ ಮಾಲಕರಿಗೆ ಬರೆದಿರುವ ಕ್ಷಮಾಪಣಾ ಪತ್ರ.
ಜೈಪುರ: ಕೋವಿಡ್ ತಂದಿಟ್ಟಿರುವ ಲಾಕ್ ಡೌನ್ ಸ್ಥಿತಿಯಿಂದ ಕಂಗೆಟ್ಟ ವಲಸೆ ಕಾರ್ಮಿಕನೊಬ್ಬ ತನ್ನ ದಿವ್ಯಾಂಗ ಮಗನೊಂದಿಗೆ ದೂರದ ತನ್ನ ಊರನ್ನು ಸೇರಲು ಸೈಕಲ್ ಒಂದನ್ನು ಕದ್ದು ಆ ಸೈಕಲ್ ಮಾಲಕರಿಗೆ ತಾನು ಸೈಕಲ್ ಕದಿಯಲೇಬೇಕಾಗಿ ಬಂದ ಪ್ರಮೇಯದ ಕುರಿತಾಗಿ ಪತ್ರವನ್ನೂ ಬರೆದು ಹೋಗಿರುವ ಘಟನೆಯೊಂದು ಇದೀಗ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.
ಹಾಗೂ ದೇಶಾದ್ಯಂತ ವಲಸೆ ಕಾರ್ಮಿಕರು ಈ ಅನಪೇಕ್ಷಿತ ಲಾಕ್ ಡೌನ್ ಪರಿಸ್ಥಿತಿಗೆ ಸಿಲುಕಿ ತಮ್ಮವರನ್ನು ಕರೆದುಕೊಂಡು ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಲು ಪಡುತ್ತಿರುವ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿಯಂತಿದೆ ಈ ಘಟನೆ.
ಆತನ ಹೆಸರು ಮಹಮ್ಮದ್ ಇಕ್ಬಾಲ್ ಖಾನ್. ಈತ ಉತ್ತರ ಪ್ರದೇಶದ ಬರೇಲಿಯವನಾಗಿದ್ದು ರಾಜಸ್ಥಾನದ ಭರತ್ ಪುರ ಜಿಲ್ಲೆಯ ರಾರ್ಹಾ ಎಂಬ ಗ್ರಾಮದಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿದ್ದ. ಆದರೆ ಧುತ್ತೆಂದು ಎರಗಿದ ಕೋವಿಡ್ ಲಾಕ್ ಡೌನ್ ಪರಿಸ್ಥಿತಿ ಇಕ್ಬಾಲ್ ಮತ್ತು ಆತನನ್ನು ನಂಬಿಕೊಂಡವರ ಜೀವನವನ್ನು ಸಂಕಷ್ಟಕ್ಕೆ ದೂಡಿತ್ತು. ಸಾಲದ್ದಕ್ಕೆ ಇಕ್ಬಾಲ್ ಗೆ ದಿವ್ಯಾಂಗ ಮಗನೊಬ್ಬನಿದ್ದ.
ಇನ್ನು ಇಲ್ಲಿ ಜೀವನ ನಡೆಯದು ಎಂದು ಎಣಿಸಿದ ಇಕ್ಬಾಲ್ 250 ಕಿಲೋ ಮೀಟರ್ ದೂರದಲ್ಲಿದ್ದ ತನ್ನ ಸ್ವಂತ ಊರಿಗೆ ತೆರಳಲು ನಿಶ್ಚಯಿಸಿದ. ಆದರೆ ಆತನ ಬಳಿ ಊರಿಗೆ ಹಿಂತಿರುಗಲು ನಯಾಪೈಸೆ ಇರಲಿಲ್ಲ. ದಿವ್ಯಾಂಗ ಮಗನನ್ನು ಕರೆದುಕೊಂಡು ಉಳಿದವರಂತೆ ನಡೆದು ಸಾಗುವುದೂ ಸಾಧ್ಯವಿರಲಿಲ್ಲ.
ಈ ಕಾರಣದಿಂದಾಗಿ, ಭರತ್ಪುರದ ಸಾಹಿಬ್ ಸಿಂಗ್ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಸೈಕಲನ್ನು ಅನಿವಾರ್ಯವಾಗಿ ಕದಿಯುವ ಪರಿಸ್ಥಿತಿ ಇಕ್ಬಾಲ್ ಗೆ ಒದಗಿ ಬಂದಿತ್ತು. ಆದರೆ ಆತ ಹಾಗೇ ಸುಮ್ಮನೆ ಸೈಕಲನ್ನು ತೆಗೆದುಕೊಂಡು ಅಲ್ಲಿಂದ ತೆರಳಲಿಲ್ಲ.
ಬದಲಿಗೆ, ತಾನು ಸೈಕಲನ್ನು ಕದಿಯಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ಆ ಸೈಕಲ್ ಮಾಲಕರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಪತ್ರವೊಂದನ್ನು ಬರೆದಿಟ್ಟು ಸೈಕಲ್ ನೊಂದಿಗೆ ಅಲ್ಲಿಂದ ಇಕ್ಬಾಲ್ ತೆರಳಿದ್ದಾನೆ. ಆತ ಬರೆದ ಪತ್ರ ಎಂತಹ ಕಲ್ಲು ಹೃದಯನ್ನೂ ಕರಗಿಸುವಂತಿದೆ!
‘ನಾನೊಬ್ಬ ಕಾರ್ಮಿಕ, ಮತ್ತು ನಿಯತ್ತಿರುವ ಕಾರ್ಮಿಕನಾಗಿದ್ದೇನೆ. ನಿಮ್ಮ ಪಾಲಿಗೆ ನಾನು ತಪ್ಪಿತಸ್ಥ, ಯಾಕೆಂದರೆ ನಾನು ನಿಮ್ಮ ಸೈಕಲನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಬರೇಲಿಗೆ ಹೋಗಲೇಬೇಕಾಗಿದೆ. ಆದರೆ ಹಾಗೆ ಹೋಗಲು ನನ್ನ ಬಳಿಯಲ್ಲಿ ಯಾವುದೇ ಸೌಕರ್ಯವಿಲ್ಲ, ಮಾತ್ರವಲ್ಲದೇ ನನಗೊಬ್ಬ ದಿವ್ಯಾಂಗ ಮಗನೂ ಇದ್ದಾನೆ’ ಎಂದು ಚೀಟಿಯೊಂದರಲ್ಲಿ ಬರೆದು ಇಕ್ಬಾಲ್ ಸೈಕಲ್ ನೊಂದಿಗೆ ಅಲ್ಲಿಂದ ತೆರಳಿದ್ದಾನೆ.
ಮರುದಿನ ತನ್ನ ಮನೆಯ ವರಾಂಡವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸೈಕಲ್ ಮಾಲಕ ಸಾಹಿಬ್ ಸಿಂಗ್ ಅವರಿಗೆ ಇಕ್ಬಾಲ್ ಬರೆದಿಟ್ಟು ಹೋಗಿದ್ದ ಪತ್ರ ದೊರಕಿದೆ. ಈ ಪತ್ರವನ್ನು ಓದಿದ ಸಿಂಗ್ ಅವರ ಮನಸ್ಸು ಕರಗಿದೆ ಮತ್ತು ಅವರು ಈ ಸಂಬಂಧ ಪೊಲೀಸರಿಗೆ ಯಾವುದೇ ದೂರನ್ನು ನೀಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ಥಾನ ಹಾಗೂ ಉತ್ತರಪ್ರದೇಶದ ಗಡಿಗ್ರಾಮಗಳಲ್ಲಿ ಒಂದಾಗಿ ರಾರ್ಹಾ ಗುರುತಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು