ಲಾಕ್ಡೌನ್ ಪರಿಣಾಮ: ಹೊಟೇಲ್ ಖಾದ್ಯ ದರ ಹೆಚ್ಚಳಕ್ಕೆ ಚಿಂತನೆ
Team Udayavani, May 19, 2020, 6:20 AM IST
ಸಾಂದರ್ಭಿಕ ಚಿತ್ರ.
ವಿಶೇಷ ವರದಿ- ಮಂಗಳೂರು: ಲಾಕ್ಡೌನ್ ಪರಿಣಾಮ ಹೊಟೇಲ್ ಉದ್ಯಮಕ್ಕೆ ಕೋಟ್ಯಂತರ ರೂ.ನಷ್ಟ ಉಂಟಾಗಿದೆ.ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೊಟೇಲ್ ಮಾಲಕರ ಸಂಘದವರು ಲಾಕ್ಡೌನ್ ಅವಧಿ ಪೂರ್ಣಗೊಂಡ ಬಳಿಕ ತಿಂಡಿ-ತಿನಸುಗಳ ದರ ಹೆಚ್ಚಿಸುವ ಬಗ್ಗೆ ಚಿಂತಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಮಿಕ್ಕಿ ಸಸ್ಯಾಹಾರಿ, ಮಾಂಸಾಹಾರಿ ಹೊಟೇಲ್ ಗಳಿವೆ. ಸಾವಿರಾರು ಮಂದಿ ಮಾಲಕರು, ಕಾರ್ಮಿಕರು ಇದೇ ಉದ್ಯಮ ಅವಲಂಭಿ ಸಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಕೆಲವು ಹೊಟೇಲ್ ಮಾಲಕರು ಕಾರ್ಮಿಕರಿಗೆ ಪೂರ್ತಿ ತಿಂಗಳ ಸಂಬಳ ಸಂದಾಯ ಮಾಡಿದ್ದಾರೆ. ಬಂದ್ ನಿಂದಾಗಿ ಉಂಟಾದ ನಷ್ಟವನ್ನು ಹೊಂದಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಶೇ.10ರಿಂದ 20ರಷ್ಟು ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಗ್ರಾಹಕರಿಗೆ ಹೊರೆಯಾಗ ಬಹುದಾದರೂ ಅನಿವಾರ್ಯ ಎಂಬುದು ಹೊಟೇಲ್ ಮಾಲಕರ ಅಭಿಪ್ರಾಯ.
ನಷ್ಟ ತಪ್ಪಿದ್ದಲ್ಲ
ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸದ್ಯ ಹೊಟೇಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕರು ಸಾಮಾನ್ಯವಾಗಿ ಯಾವ ರೀತಿಯ ತಿಂಡಿ ಇಷ್ಟಪಡುತ್ತಾರೆ ಎಂದು ಅರಿಯುವಲ್ಲಿ ಅವರು ಸೋಲುತ್ತಿದ್ದಾರೆ.ಹಾಗಾಗಿ ಪ್ರತಿದಿನ ಹೆಚ್ಚಿನ ತಿಂಡಿ-ತಿನಸು ಹಾಳಾಗುತ್ತಿವೆ. ಜಿಲ್ಲೆಯ ಬಹುತೇಕ ಹೊಟೇಲ್ಗಳು ಇನ್ನೂ ತೆರೆದು ಕೊಂಡಿಲ್ಲ.
ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ಹೊಟೇಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ ನೀಡಲಾಗಿದೆ. ರಾತ್ರಿ ವೇಳೆ ಸಾಮಾನ್ಯವಾಗಿ ಜನ 9 ಗಂಟೆಯ ಬಳಿಕ ಊಟ ಮಾಡುತ್ತಾರೆ. ಆದರೆ ಆ ಸಮಯಕ್ಕೆ ಪಾರ್ಸೆಲ್ಗೆ ಅವಕಾಶವಿಲ್ಲ. 7 ಗಂಟೆಗೆ ಊಟದ ಪಾರ್ಸೆಲ್ ಹೋಗುವುದಿಲ್ಲ. ಆನ್ಲೈನ್ ಡೆಲಿವೆರಿ ಕಂಪೆನಿಗಳಿಗೆ ಹೊಟೇಲ್ ಮಾಲಕರು ಶೇಕಡಾವಾರು ಹಣ ನೀಡಬೇಕು. ಒಟ್ಟಿನಲ್ಲಿ ಪಾರ್ಸೆಲ್ಗೆ ಅವಕಾಶವಿದ್ದರೂ ನಷ್ಟ ತಪ್ಪಿದ್ದಲ್ಲ ಎನ್ನುತ್ತಾರೆ ಹೊಟೇಲ್ ಮಾಲಕರು.
ಹೊಟೇಲ್ಗಳಲ್ಲಿ ಇಲಿ ಕಾಟ
ಲಾಕ್ಡೌನ್ ಪರಿಣಾಮದಿಂದಾಗಿ ಒಂದೂವರೆ ತಿಂಗಳಿನಿಂದ ಬಹುತೇಕ ಹೊಟೇಲ್ಗಳು ಬಂದ್ ಆಗಿದ್ದು, ಇದೀಗ ಹೊಟೇಲ್ಗಳಲ್ಲಿ ಇಲಿ-ಹೆಗ್ಗಣ ಕಾಟ ಹೆಚ್ಚಾಗಿದೆ. ಹೊಟೇಲ್ಗಳಲ್ಲಿರುವ ವಯರ್, ಪೇಪರ್, ದಾಸ್ತಾನು ಸಾಮಗ್ರಿಗಳನ್ನು ಇಲಿಗಳು ತಿನ್ನುತ್ತಿದ್ದು, ತಲೆ ನೋವಾಗಿ ಪರಿಣಮಿಸಿದೆ. ಸುಮಾರು 15ದಿನಗಳಿಗೊಮ್ಮೆ ಹೊಟೇಲ್ಗಳನ್ನು ತೆರೆದು ಸ್ವತ್ಛಗೊಳಿಸುವ ಕಾರ್ಯದಲ್ಲಿ ಕೆಲವು ಹೊಟೇಲ್ ಕಾರ್ಮಿಕರು ತೊಡಗುತ್ತಿದ್ದಾರೆ ಎನ್ನುತ್ತಾರೆ ಹೊಟೇಲ್ ಮಾಲಕರು.
ಅನಿವಾರ್ಯ
ಕೋವಿಡ್-19 ಪರಿಣಾಮ ದಿಂದಾಗಿ ಹೊಟೇಲ್ ಮಾಲಕರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ನಷ್ಟ ಸರಿಹೊಂದಿಸಲು ದರ ಪರಿಷ್ಕರಣೆ ಅನಿವಾರ್ಯವಾಗಿದೆ. ಮತ್ತೂಂದೆಡೆ ಹೆಚ್ಚಿನ ಕಾರ್ಮಿಕರು ಊರುಗಳನ್ನು ಸೇರಿದ್ದು, ಸದ್ಯದಲ್ಲಿ ಮರಳುವುದು ಅನುಮಾನ. ಹೀಗಾಗಿ ಕೆಲವೊಂದು ಹೊಟೇಲ್ ಮುಚ್ಚಬಹುದು.
-ಕುಡ್ಪಿ ಜಗದೀಶ್ ಶೆಣೈ, ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ.