ಪರಿಹಾರ ವಿತರಣೆಗೆ ಅರ್ಜಿ
Team Udayavani, May 20, 2020, 8:38 AM IST
ಜಮಖಂಡಿ: ಲಾಕ್ಡೌನ್ ಹಿನ್ನಲೆಯಲ್ಲಿ ಜಿಲ್ಲೆಯ ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ಹೂವು ಬೆಳೆಗಾರರ ಬೆಳೆ ನಷ್ಟಕ್ಕೆ ಪರಿಹಾರವಾಗಿ ರಾಜ್ಯ ಸರಕಾರ ಗರಿಷ್ಠ 1 ಹೆಕ್ಟೇರ್ಗೆ 25 ಸಾವಿರ ರೂ.ಗಳಂತೆ ಪರಿಹಾರ ಧನ ನೀಡಲು ಮುಂದಾಗಿದ್ದು, 1 ಹೆಕ್ಟೇರ್ಗಿಂತ ಕಡಿಮೆ ವಿಸ್ತೀರ್ಣದಲ್ಲಿನ ಹೂ ಬೆಳೆಗಾರರಿಗೆ 2019-20ನೇ ಸಾಲಿನಲ್ಲಿ ಕೈಗೊಳ್ಳಲಾದ ಬೆಳೆ ಸಮೀಕ್ಷೆ ಮಾಹಿತಿ ಆಧಾರದ ಮೇಲೆ ಸಹಾಯಧನ ವಿತರಿಸಲಾಗುತ್ತಿದೆ.
ಹೂ ಬೆಳೆಗಾರರ ಪಟ್ಟಿಯನ್ನು ಗ್ರಾಪಂ, ರೈತ ಸಂಪರ್ಕ ಕೇಂದ್ರ, ತಾಲೂಕು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ನಾಮಫಲಕದಲ್ಲಿ ಪ್ರಕಟಿಸಲಾಗಿದೆ. ಒಂದು ವೇಳೆ ರೈತರು ಬೆಳೆದಿರುವ ಹೂ ಬೆಳೆ 2019-20ನೇ ಸಾಲಿನಲ್ಲಿ ಹಿಂಗಾರು, ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಹೂಬೆಳೆ ನಮೂದಾಗದ ರೈತರು ಅರ್ಜಿಯನ್ನು ಆಯಾ ತಾಲೂಕಿನ ತೋಟಗಾರಿಕೆ ಕಚೇರಿಗೆ ಪಹಣಿ ಪತ್ರಿಕೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ಬುಕ್ ಝೆರಾಕ್ಸ್ ಪ್ರತಿ, ಸ್ವಯಂ ದೃಢೀಕೃತ ಘೋಷಣೆ ಪತ್ರದೊಂದಿಗೆ ಮೇ 25ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಭಯಕುಮಾರ ಮೊರಬ ತಿಳಿಸಿದ್ದಾರೆ.
ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಸಾವಳಗಿ (9164735961), ರೈತ ಸಂಪರ್ಕ ಕೇಂದ್ರ ಜಮಖಂಡಿ (9035170730) ಸಂಪರ್ಕಸಬಹುದು.