ಅಪಾಯಕಾರಿ ಕಲ್ಲು ಕೋರೆಗಳನ್ನು ಮುಚ್ಚಿಸಿ: ಸಂಸದ ನಳಿನ್ ಸೂಚನೆ
Team Udayavani, May 20, 2020, 9:52 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕಲ್ಲು ಕೋರೆಗಳಲ್ಲಿ ನೀರು ತುಂಬಿ ನಿಂತು ಮಕ್ಕಳ ಸಹಿತ ಹಲವರು ಬಿದ್ದು ಮೃತಪಡುವ ಘಟನೆಗಳು ಪ್ರತಿ ಮಳೆಗಾಲದಲ್ಲಿ ಸಂಭವಿಸುತ್ತಿರುವುದರಿಂದ ಈಗಾಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲ ಕಲ್ಲಿನ ಕೋರೆ ಹೊಂಡಗಳನ್ನು ಮುಚ್ಚಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಸೂಚಿಸಿದ್ದಾರೆ.
ದ.ಕ. ಜಿ.ಪಂ.ನಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರೈಸಬೇಕು. ಬಾಡಿಗೆ ಕಟ್ಟಡದಲ್ಲಿರುವ ಹಾಗೂ ನಾದುರಸ್ತಿ ಸ್ಥಿತಿಯಲ್ಲಿರುವ ಅಂಗನವಾಡಿಗಳನ್ನು ಗುರುತಿಸಿ ಪಟ್ಟಿ ಮಾಡಿ. ಬ್ಯಾಂಕ್, ಬೃಹತ್ ಕೈಗಾರಿಕೆ ಸಹಿತ ವಿವಿಧ ಉದ್ಯಮಗಳ ಸಾಮಾಜಿಕ ಜವಾಬ್ದಾರಿ ನಿಧಿಯ ನೆರವು ಪಡೆದು ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದರು.
ಕೃಷಿಗೆ ಪುನಶ್ಚೇತನ
ದ.ಕ. ಜಿಲ್ಲೆಯಲ್ಲಿ ನಿಸ್ತೇಜಗೊಂಡ ಕೃಷಿ, ಆರ್ಥಿಕ ಚಟುವಟಿಕೆಯ ಪುನಶ್ಚೇತನಕ್ಕೆ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಯೋಗಶೀಲ ಸಮಗ್ರ ಕೃಷಿಗೆ ಉತ್ತೇಜನ ನೀಡಬೇಕು. ಯಾವೆಲ್ಲ ಕೆಲಸಗಳನ್ನು ನರೇಗಾ ಯೋಜನೆ ಯಲ್ಲಿ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ನಳಿನ್ ಹೇಳಿದರು.