ಮೋದಿ 2.0: ಪಂಚ ನಿರ್ಧಾರಗಳ ಬುನಾದಿ
ವರುಷದ ಹಾದಿಯ ಹಿನ್ನೋಟ ; ಭರವಸೆಯ ಮುನ್ನೋಟ
Team Udayavani, May 30, 2020, 7:23 AM IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಬಾರಿ ಅಮೋಘ ಬಹುಮತದೊಂದಿಗೆ ಅಧಿಕಾರಕ್ಕೇರಿ ಮೇ 30ಕ್ಕೆ ಒಂದು ವರ್ಷ. ಈ ಮೊದಲ ಒಂದು ವರ್ಷದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಸರ್ಕಾರ, ದಶಕಗಳ ಕಾಲ ತೆಗೆದುಕೊಳ್ಳಲು ಸಾಧ್ಯವಾಗದ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಸೈ ಎನಿಸಿತು. ಅತ್ಯಂತ ಗಟ್ಟಿತನದ ತೀರ್ಮಾನಗಳನ್ನು ಕೈಗೊಂಡ ಮೋದಿ ಸರ್ಕಾರ ಭವ್ಯ ಭಾರತಕ್ಕೆ ಭದ್ರ ಬುನಾದಿ ಹಾಕಿದೆ.
370ನೇ ವಿಧಿ ರದ್ದು, ಕೇಂದ್ರಾಡಳಿತ ಪ್ರದೇಶಗಳ ಸ್ಥಾಪನೆ
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಆಗಸ್ಟ್ 5ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಐತಿಹಾಸಿಕ ಘೋಷಣೆ ಮಾಡಿದರು. ಆರ್ಟಿಕಲ್ 370 ರದ್ದತಿಯ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲೇ ಘೋಷಿಸಿತ್ತಾದರೂ, ಇದು ಅನುಷ್ಠಾನಕ್ಕೆ ಬರುವಂಥದ್ದಲ್ಲ ಎಂದೇ ರಾಜಕೀಯ ಪಂಡಿತರು ಹೇಳುತ್ತಿದ್ದರು! ಗಮನಾರ್ಹ ಸಂಗತಿ ಎಂದರೆ, ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಕೈಮೀರಬಾರದು ಎಂಬ ಕಾರಣದಿಂದ ಸೇನೆಯನ್ನು ಕಳುಹಿಸಿ ಆ ರಾಜ್ಯವನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿತ್ತು. ಪ್ರತ್ಯೇಕತಾವಾದಿಗಳು, ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಯಿತು.
ಒಟ್ಟಿನಲ್ಲಿ ವಿವಿಧ ಕ್ರಮಗಳ ಮೂಲಕ ರಾಜ್ಯವನ್ನು ಸಹಜ ಸ್ಥಿತಿಗೆ ತರಲಾಯಿತು. ದೇಶದ ಹಲವೆಡೆ ಪರ ಹಾಗೂ ವಿರೋಧ ಪ್ರತಿ ಭಟನೆಗಳೂ ನಡೆದವು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದು ತೀವ್ರ ಚರ್ಚೆಗೆ ಗ್ರಾಸವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ, 370ನೇ ವಿಧಿಯ ನೆರಳಡಿ ಕಳ್ಳಾಟವಾಡುತ್ತಾ ಬಂದಿದ್ದ ಕಾಶ್ಮೀರಿ ನಾಯಕರಿಗಂತೂ ಕೇಂದ್ರದ ಈ ನಡೆ ಆಘಾತ ತಂದಿದ್ದು ಸುಳ್ಳಲ್ಲ. ಇದರೊಟ್ಟಿಗೆ ಆರ್ಟಿಕಲ್ 35ಎ ಕೂಡ ಹಿಂಪಡೆದಿದ್ದರಿಂದ, ಇನ್ಮುಂದೆ ಜಮ್ಮು-ಕಾಶ್ಮೀರದಲ್ಲಿ ಆ ರಾಜ್ಯದವರಲ್ಲದವರೂ ನಿವಾಸಿಗಳಾಗಬಹುದಾದ ಬಹುದೊಡ್ಡ ಬದಲಾವಣೆಯಾಗಿದೆ.
ಅಲ್ಲಿಯವರೆಗೂ ಜಮ್ಮು-ಕಾಶ್ಮೀರದವರು ಮಾತ್ರ ಆ ಪ್ರದೇಶದ ಕಾಯಂ ನಿವಾಸಿಗಳಾಗಬಹುದೆಂಬ ನಿಯಮವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಜಮ್ಮು-ಕಾಶ್ಮೀರವನ್ನು ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶಗಳಾಗಿಸಿದ್ದು ಅತಿ ದೊಡ್ಡ ಅನಿರೀಕ್ಷಿತಗಳಲ್ಲಿ ಒಂದು. ಇದರಿಂದಾಗಿ, ಲಡಾಖ್ ಮತ್ತು ಜಮ್ಮು ಪ್ರಾಂತ್ಯಗಳು ದಶಕಗಳಿಂದ ಕಾಶ್ಮೀರಿ ನಾಯಕರಿಂದ ಅನುಭವಿಸಿದ್ದ
ಮಲತಾಯಿ ಧೋರಣೆಯಿಂದ ಮುಕ್ತವಾದಂತಾಗಿದೆ. ಮತ್ತು ಪಾಕಿಸ್ತಾನ ಹಾಗೂ ಚೀನಾಕ್ಕೂ ಭಾರತದ ಈ ಹೆಜ್ಜೆಯನ್ನು ಅರಗಿಸಿಕೊಳ್ಳ ಲಾಗಲಿಲ್ಲ. ಈ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಲು ಅವು ಪ್ರಯತ್ನಿಸುತ್ತಲೇ ಇವೆಯಾದರೂ, ಬಹುತೇಕ ರಾಷ್ಟ್ರಗಳು ಭಾರತದ ಪರ ನಿಂತಿವೆ.
ಉಗ್ರ ದಮನಕ್ಕೆ ಚತುರ ನಿರ್ಧಾರ
ಉಗ್ರ ಚಿಂತನೆಯುಳ್ಳವರನ್ನು ಆರಂಭದಲ್ಲೇ ಕಟ್ಟಿಹಾಕಿ, ಭಯೋತ್ಪಾದನೆಯನ್ನು ಬೇರು ಸಮೇತ ನಾಶ ಮಾಡುವ ಉದ್ದೇಶವುಳ್ಳ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆಯು (ಎನ್ಐಎ) ಮೋದಿ 2.0 ಸರ್ಕಾರದ ಪ್ರಮುಖ ಹೆಜ್ಜೆಗಳಲ್ಲಿ ಒಂದು. ಇದುವರೆಗೂ ಉಗ್ರ ಸಂಘಟನೆಗಳನ್ನು ನಿಷೇಧಿಸಿ ಕ್ರಮ ಕೈಗೊಂಡರೂ ಅದರ ಸದಸ್ಯನನ್ನೂ ಉಗ್ರನೆಂದು ಪರಿಗಣಿಸಿ ವಿಚಾರಣೆ ನಡೆಸುವುದು ಕಷ್ಟವಾಗಿತ್ತು. ತಿದ್ದುಪಡಿಯಿಂದಾಗಿ ಈ ಕೊರತೆ ನಿವಾರಣೆಯಾದಂತಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಉಗ್ರರ ಸ್ವತ್ತು ವಶಪಡಿಸಿಕೊಳ್ಳಲು ಈ ತಿದ್ದುಪಡಿಯಿಂದ ಈಗ ಸಾಧ್ಯವಾಗಿರುವುದು ಉಲ್ಲೇಖಾರ್ಹ. ಆದರೆ ಈ ಕಾಯ್ದೆ ದುರ್ಬಳಕೆಯಾಗಲಿದೆ ಎಂದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಸರ್ಕಾರ ಎನ್ಐಎ ಅನ್ನು ರಾಜಕೀಯ ದ್ವೇಷ ಸಾಧನೆಗೆ ಬಳಸಿಕೊಳ್ಳುವ ಅಪಾಯವಿದೆ, ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ಎನ್ಐಎ ರಾಜ್ಯ ಸರ್ಕಾರಗಳ ಅನುಮತಿ ಪಡೆಯದೇ ಅಲ್ಲಿಗೆ ಹೋಗಿ ತನಿಖೆ ನಡೆಸಲು ಇದು ಅವಕಾಶ ಕಲ್ಪಿಸುತ್ತದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪ್ರತಿಪಕ್ಷಗಳು ತಕರಾರು ಎತ್ತಿದವಾದರೂ, ಉಗ್ರವಾದದಿಂದಾಗಿ ಅತಿಹೆಚ್ಚು ಹಾನಿ ಅನುಭವಿಸಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತಕ್ಕೆ ಇಂಥ ಅಸ್ತ್ರ ಅತ್ಯಗತ್ಯವಾಗಿತ್ತು.
ತ್ರಿವಳಿ ತಲಾಖ್ಗೆ ಕೊನೆಗೂ ಮುಕ್ತಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅತಿದೊಡ್ಡ ರಾಜಕೀಯ ಜಯ ಎಂಬಂತೆ ಜು.30ರಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕಕ್ಕೆ ಅಂಗೀಕಾರ ದೊರೆಯಿತು. 2017ರಿಂದಲೂ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದಗಳಿಗೆ ಕಾರಣವಾಗಿದ್ದ ಈ ವಿಧೇಯಕವು ರಾಜ್ಯಸಭೆಯಲ್ಲಿ ದೀರ್ಘ ಚರ್ಚೆಯ ಬಳಿಕ ಅಂಗೀಕಾರ ಪಡೆಯಿತು. ಏಕಕಾಲಕ್ಕೆ 3 ಬಾರಿ ತಲಾಖ್ ಹೇಳುವ ಪದ್ಧತಿ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಕೂಡ ಕೇಂದ್ರ ಸರ್ಕಾರಕ್ಕೆ ವರವಾಗಿ ಪರಿಣಮಿಸಿತು. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಎತ್ತಿಹಿಡಿದ ಈ ವಿಧೇಯಕವು ಸರ್ಕಾರ ಕೈಗೊಂಡ ಐತಿಹಾಸಿಕ ಕ್ರಮಗಳಲ್ಲಿ ಒಂದಾಗಿದೆ.
ಬ್ಯಾಂಕಿಂಗ್ ರಕ್ಷಣೆಗೆ ವಿಲೀನದ ಹೆಜ್ಜೆ
ಬ್ಯಾಂಕಿಂಗ್ ವಲಯವನ್ನು ರೋಗಗ್ರಸ್ತ ಸ್ಥಿತಿಯಿಂದ ಹೊರತರಲು, ಅನುತ್ಪಾದಕ ಆಸ್ತಿ, ವಸೂಲಿಯಾಗದ ಸಾಲದ ಹೊರೆಯಿಂದ ಅವುಗಳು ಕುಸಿಯುವುದನ್ನು ತಡೆಯಲು ಹಾಗೂ ಮುಖ್ಯವಾಗಿ ಜಾಗತಿಕ ಬ್ಯಾಂಕ್ಗಳಿಗೆ ದೇಶದ ಬ್ಯಾಂಕಿಂಗ್ ವಲಯ ಸರಿಸಮನಾಗಿ ನಿಲ್ಲುವಂತೆ ಮಾಡಲು ಕೇಂದ್ರ ಸರ್ಕಾರ ಮತ್ತೂಂದು ಹೆಜ್ಜೆಯನ್ನಿಟ್ಟಿತು. ಏಪ್ರಿಲ್ 1ರಿಂದ 10 ಸಾರ್ವಜನಿಕ ವಲಯದ (ಪಿಎಸ್ಯು) ಬ್ಯಾಂಕುಗಳು ವಿಲೀನಗೊಂಡು ನಾಲ್ಕು ದೊಡ್ಡ ಬ್ಯಾಂಕ್ಗಳಾಗಿ ಪರಿವರ್ತನೆಯಾಗುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದರನ್ವಯ…
1. ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ವಿಲೀನ.
2. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ನಲ್ಲಿ ವಿಲೀನ.
3. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ವಿಲೀನ.
4. ಇಂಡಿಯನ್ ಬ್ಯಾಂಕ್ನಲ್ಲಿ ಅಲಹಾಬಾದ್ ಬ್ಯಾಂಕ್ ವಿಲೀನ.
ಪೌರತ್ವ ಕಾಯ್ದೆ: ಸಂತ್ರಸ್ತರ ಸಂಜೀವಿನಿ
ಭಾರತ ವರ್ಷದ ಕೊನೆಗೆ ದೇಶದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾದ ವಿಷಯವಿದು. ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಧಾರ್ಮಿಕ ಹಿಂಸೆಗೆ ತುತ್ತಾಗಿ ಭಾರತದಲ್ಲಿ ಆಶ್ರಯ ಪಡೆದ ಆ ದೇಶಗಳ ಅಲ್ಪಸಂಖ್ಯಾತರಿಗೆ (ಹಿಂದೂ, ಕ್ರಿಶ್ಚಿಯನ್, ಬೌದ್ಧರು ಇತ್ಯಾದಿ) ಭಾರತೀಯ ಪೌರತ್ವ ಕೊಡುವುದಕ್ಕಾಗಿ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿತು. ಆದರೆ, ಅನಿರೀಕ್ಷಿತವೆಂಬಂತೆ ದೇಶಾದ್ಯಂತ ಇದರ ವಿರುದ್ಧ ಕಿಚ್ಚು ಹತ್ತಿತು.
ಈ ತಿದ್ದುಪಡಿ ಕಾಯ್ದೆಯು ಮುಸ್ಲಿಂ ವಿರೋಧಿ ಕಾಯ್ದೆ ಎಂದು ಆರೋಪಿಸಿ, ವಿದ್ಯಾರ್ಥಿಗಳು (ಮುಖ್ಯವಾಗಿ, ಜೆಎನ್ಯು, ಜಾಮಿಯಾ ಮಿಲಿಯಾ, ಅಲೀಗಢ ವಿವಿ), ಪ್ರತಿಪಕ್ಷಗಳು, ಮುಸ್ಲಿಮರು ಸೇರಿದಂತೆ ನಾಗರಿಕ ಸಮುದಾಯ ಬೀದಿಗಿಳಿದು ಪ್ರತಿಭಟಿಸತೊಡಗಿತು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸಲ್ಮಾನರಿಗೆ ಯಾವ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ಕೇಂದ್ರ ಎಷ್ಟೇ ಸ್ಪಷ್ಟನೆ ಕೊಟ್ಟರೂ, ಪ್ರತಿಭಟನೆಗಳು ನಿಲ್ಲಲಿಲ್ಲ. ಈ ವಿಚಾರಕ್ಕೆ ಪ್ರತಿಪಕ್ಷಗಳು ಎನ್ಆರ್ಸಿ ವಿಚಾರವನ್ನೂ ಬೆರೆಸಿ ಭಯ ಹುಟ್ಟಿಸಲು ಪ್ರಯತ್ನಿಸಿದ್ದವು. ಮತ್ತೂಂದು ಕಡೆ, ಕಾಯ್ದೆಯ ಪರ ರ್ಯಾಲಿಗಳೂ ನಡೆದವು. ಸಿಎಬಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ