ಹೆದ್ದಾರಿ ಕಾಮಗಾರಿಗೆ ನೀಲನಕ್ಷೆ ಸಿದ್ಧಪಡಿಸಿ
Team Udayavani, May 31, 2020, 6:07 PM IST
ಸಾಂದರ್ಭಿಕ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ವರ್ತುಲ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಕುರಿತು ನೀಲನಕ್ಷೆ ಸಿದ್ಧಪಡಿಸಿ ಶೀಘ್ರದಲ್ಲೇ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿಗಳ ಕುರಿತು ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ. ಹೀಗಾಗಿ ಪ್ರತಿ ಗ್ರಾಮದ ಭೂಮಿ, ನಷ್ಟದ ಅಂದಾಜುಗಳ ಮಾಹಿತಿ ನೀಡಿದಾಗ ಮಾತ್ರ ಭೂ ಸ್ವಾಧೀನಕ್ಕೆ ಬೆಲೆ ನಿಗದಿಪಡಿಸಲು ಅನುಕೂಲವಾಗುತ್ತದೆ. ಅಗತ್ಯ ಭೂಮಿ, ಕೃಷಿ ಮಾಹಿತಿ ಸಂಗ್ರಹಿಸಬೇಕು. ಭೂಮಿ ಸ್ವಾಧೀನಕ್ಕೆ ದರ ನಿಗದಿಪಡಿಸುವುದು ಹಾಗೂ ರಸ್ತೆ ನಿರ್ಮಾಣಕ್ಕೆ ಅಂದಾಜು ಪತ್ರಿಕೆ ಸಿದ್ಧಪಡಿಸಬೇಕು ಎಂದರು.
ಅಕ್ಕಲಕೋಟೆಯಿಂದ ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ, ಜೇವರ್ಗಿ, ಕಲಬುರಗಿ ಮಾರ್ಗವಾಗಿ 75 ಕಿಮೀ ಹಾಗೂ ರಾಯಚೂರು ಜಿಲ್ಲೆಯ 37 ಕಿಮೀ ಹಾದು ಹೋಗುವ ರಸ್ತೆ ನಿರ್ಮಾಣಕ್ಕೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ರಾಯಚೂರು, ದೇವದುರ್ಗ ಮಾರ್ಗವಾಗಿ ನಿರ್ಮಿಸುವ ರಸ್ತೆ ನಿರ್ಮಾಣಕ್ಕೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಮಾರ್ಗ ನಿರ್ಮಾಣ, ಭೂಮಿಯ ಸ್ವಾಧೀನಕ್ಕೆ ಅಗತ್ಯ ಮಾಹಿತಿ ಸಂಗ್ರಹಿಸಿ ಎಂದರು.
ಯರಮರಸ್, ಚಿಕ್ಕಸೂಗೂರು, ದೇವಸೂಗೂರು ಮೂಲಕ ಮಂತ್ರಾಲಯ ರಸ್ತೆಗೆ ಜೋಡಿಸುವ ಲಿಂಕ್ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ನಡೆಸಿರುವ ಸಮೀಕ್ಷೆಯಂತೆ ಭೂ ಸ್ವಾಧೀನಕ್ಕೆ ಅವಶ್ಯಕತೆ ಇರುವ ಭೂಮಿ, ಕೃಷಿಯ ಮಾಹಿತಿ ಸಂಗ್ರಹಿಸಬೇಕು. ಭೂಮಿ ಸ್ವಾಧೀನಕ್ಕೆ ದರ ನಿಗದಿಪಡಿಸುವುದು, ರಸ್ತೆ ನಿರ್ಮಾಣಕ್ಕೆ ಅಂದಾಜು ಪತ್ರಿಕೆ ತಯಾರಿಸಬೇಕು ಎಂದರು. ಎಡಿಸಿ ದುರುಗೇಶ, ಆರ್ಡಿಎ ಪ್ರಭಾರ ಆಯುಕ್ತ ಶರಣಪ್ಪ, ಎಇಇ ಪ್ರಕಾಶ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.