ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ ಕರ್ತವ್ಯ ಹಾಜರಿ ಸೂಚನೆ
Team Udayavani, Jun 4, 2020, 9:03 PM IST
ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಜೂನ್ 5ರಂದು ತಮ್ಮ ತಮ್ಮ ಶಾಲೆಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಶಾಲಾ ಪುನರಾರಂಭಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿತ್ತು.
ಆದರೆ, ಬೇಸಿಗೆ ರಜೆ ಹಾಗೂ ಆ ಬಳಿಕದ ಲಾಕ್ ಡೌನ್ ಕಾರಣದಿಂದ ಹಲವಾರು ಶಿಕ್ಷಕರು ದೂರದ ಊರುಗಳಿಗೆ ಹಾಗೂ ಸ್ವಗ್ರಾಮಗಳಿಗೆ ತೆರಳಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಮತ್ತು ಸಮರ್ಪಕ ಸಾರಿಗೆ ವ್ವವಸ್ಥೆ ಇಲ್ಲದಿರುವ ಕಾರಣ ಅವರಿಗೆ ಸೂಚಿತ ದಿನಾಂಕದಂದು ಕರ್ತವ್ಯಕ್ಕೆ ಹಾಜರಾಗಲು ಕಷ್ಟ ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಈ ಮನವಿಯ ಹಿನ್ನಲೆಯಲ್ಲಿ ರಾಜ್ಯಾದ್ಯಂತ ದೂರದ ಊರುಗಳಿಂದ ಕರ್ತವ್ಯಕ್ಕೆ ಬರುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಜೂನ್ 5ರ ಬದಲಾಗಿ ಜೂನ್ 8ಕ್ಕೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಶಿಕ್ಷಣ ಸಚಿವರು ತಮ್ಮ ಸೂಚನೆಯಲ್ಲಿ ತಿಳಿಸಿದ್ದಾರೆ.