ಕೈಗಾರಿಕೆಗಳಿಗೆ ಈಗ ಕಾರ್ಮಿಕರ ಕೊರತೆ!
ವಲಸೆ ಕಾರ್ಮಿಕರು ಊರಿಗೆ ಮರಳಿರುವುದು ಕಾರಣ
Team Udayavani, Jun 5, 2020, 5:57 AM IST
ಸಾಂದರ್ಭಿಕ ಚಿತ್ರ..
ಮಂಗಳೂರು: ಲಾಕ್ಡೌನ್ ತೆರವುಗೊಳ್ಳುತ್ತಿದ್ದರೂ ದಕ್ಷಿಣ ಕನ್ನಡದ ಸಣ್ಣ ಕೈಗಾರಿಕೆಗಳಿಗೆ ಪೂರ್ಣಪ್ರಮಾಣದ ಕಾರ್ಯಾಚರಣೆ ಸಾಧ್ಯವಾಗಿಲ್ಲ. ವಲಸೆ ಕಾರ್ಮಿಕರು ತಮ್ಮ ಊರುಗಳಿವೆ ಮರಳಿರು ವುದು ಇದಕ್ಕೆ ಕಾರಣ.
ಜಿಲ್ಲಾಡಳಿತದ ಮೂಲಗಳ ಪ್ರಕಾರ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಝಾರ್ಖಂಡ್, ಪಶ್ಚಿಮ ಬಂಗಾಲ ಮೊದ ಲಾದ ರಾಜ್ಯಗಳ 40 ಸಾವಿರಕ್ಕೂ ಅಧಿಕ ಕಾರ್ಮಿಕರು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ 15 ಸಾವಿರಕ್ಕೂ ಅಧಿಕ ಮಂದಿ ದ.ಕ. ಜಿಲ್ಲೆಯಲ್ಲಿ ಕೈಗಾರಿಕೆ, ಕಟ್ಟಡ ನಿರ್ಮಾಣ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಬಹುತೇಕರು ಶ್ರಮಿಕ್ ರೈಲಿನ ಮೂಲಕ ಊರಿಗೆ ತೆರಳಿದ್ದಾರೆ.
ಬೈಕಂಪಾಡಿ ಮೊದಲಾದ ಕೈಗಾರಿಕಾ ಪ್ರಾಂಗಣಗಳಲ್ಲಿರುವ ಕೈಗಾರಿಕೆಗಳು ಈಗ ಶೇ. 20ರಷ್ಟು ಕಾರ್ಮಿಕರೊಂದಿಗೆ ಚಟುವಟಿಕೆ ಆರಂಭಿಸಿವೆ. ಅವರಲ್ಲಿ ಕೆಲವು ಬಾಕಿಯಿರುವ ವಲಸೆ ಕಾರ್ಮಿಕರು, ಸ್ಥಳೀಯರೂ ಇದ್ದಾರೆ. ಊರಿಗೆ ತೆರಳಿರುವ ಕಾರ್ಮಿಕರು ಮತ್ತೆ ಕೆಲಸಕ್ಕಾಗಿ ಆಗಮಿಸುವ ಬಗ್ಗೆ ಕೈಗಾರಿಕೆಯ ಮುಖ್ಯಸ್ಥರನ್ನು ಸಂಪರ್ಕಿಸಿ, ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಸೂಕ್ತ ವ್ಯವಸ್ಥೆ
ಸಣ್ಣ ಕೈಗಾರಿಕೆಗಳಲ್ಲಿ ಶೇ. 60ರಷ್ಟು ಮಂದಿ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ ಬಹುತೇಕರು ಊರಿಗೆ ತೆರಳಿದ್ದಾರೆ. ಸದ್ಯ ಶೇ. 20ರಷ್ಟು ಜನರ ಮೂಲಕ ಕೈಗಾರಿಕೆ ನಡೆಸಲಾಗುತ್ತಿದೆ. ಹೋಗಿರುವ ಕಾರ್ಮಿಕರ ಪೈಕಿ ಬಹುತೇಕ ಮಂದಿ ವಾಪಸಾಗುವ ಬಗ್ಗೆ ಕರೆಮಾಡಿ ತಿಳಿಸುತ್ತಿದ್ದಾರೆ. ಅಂಥವರನ್ನು ಕರೆತರುವ ಬಗ್ಗೆಯೂ ಆಡಳಿತ ವ್ಯವಸ್ಥೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ.
– ಅಜಿತ್ ಕಾಮತ್, ಅಧ್ಯಕ್ಷರು,
ಕೆನರಾ ಸಣ್ಣ ಕೈಗಾರಿಕಾ ಸಂಘ, ಮಂಗಳೂರು