ಜೋಳಕ್ಕೆ ರಬ್ಬರ್ ಹುಳು ಬಾಧೆ
Team Udayavani, Jun 18, 2020, 6:55 AM IST
ವಿಜಯಪುರ: ರಬ್ಬರ್ ಹುಳು ಅಥವಾ ಸೈನಿಕ ಹುಳ ಬಾಧೆಗೆ ರೈತರ ಬೆಳೆ ನಾಶವಾಗುತ್ತಿದ್ದು, ರೈತರು ಮುಂಜಾಗ್ರತೆ ಕ್ರಮಕೈಗೊಂಡು ಬೆಳೆ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ ತಿಳಿಸಿದರು. ಹಾರೋಹಳ್ಳಿ ಗ್ರಾಮದ ರೈತ ಬಸವರಾಜು ತೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಸೈನಿಕ ಹುಳು ಕೇವಲ ಜೋಳದ ಬೆಳೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ತೊಗರಿ, ರಾಗಿ ಬೆಳೆಗಳಲ್ಲೂ ಕಾಣಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ರೈತರು ಬೆಳೆಗಳು ನಾಟಿ ಮಾಡುವ ಮುಂಚೆಯೇ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಬೆಳೆಗಳಿಗೆ ರೋಗ ಬಾರದಂತೆ ತಡೆಗಟ್ಟಬಹುದು. ಮುಂಚೆಯೇ ಕ್ರಮ ಅನುಸರಿಸಿದರೆ ಕೃಷಿ ಕ್ಷೇತ್ರದಲ್ಲಾಗುವ ನಷ್ಟ ತಪ್ಪಿಸಬಹುದು ಎಂದರು.
2019-20ನೇ ಸಾಲಿನಲ್ಲಿ ಜೋಳ ಬೆಳೆದಿರುವ ರೈತರಿಗೆ “ನೇರ ಲಾಭ ವರ್ಗಾವಣೆ’ (ಡಿಬಿಟಿ) ಮೂಲಕ 5,000 ರೂ. ಪರಿಹಾರ ಸಿಗುತ್ತಿದೆ. ಸಾಕಷ್ಟು ಮಂದಿ ರೈತರು ನೋಂದಣಿ ಮಾಡಿಸಿಲ್ಲ. ನೋಂದಾಯಿಸಿ ಕೊಳ್ಳದ ರೈತರು ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಕೊರೊನಾ ಸಮಯದಲ್ಲೂ ಯೋಜನೆಗಳನ್ನು ಮುಂದುವರಿಸಲಾಗಿದೆ. ವಲಸೆ ತಪ್ಪಿಸಲು ನರೇಗಾ ಯೋಜನೆಯಡಿ ಕಾರ್ಯಕ್ರಮಗಳು ಮುಂದುವ ರಿದಿವೆ ಎಂದು ಮಾಹಿತಿ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣಪ್ಪ ಮನಗೂಳಿ, ಕೃಷಿ ಅಧಿಕಾರಿ ಲಕ್ಷ್ಮಣಬೇವಿನಕಟ್ಟಿ, ಆತ್ಮಯೋಜನೆ ಅಧಿಕಾರಿ ಯತೀಶ್, ಪುಷ್ಪಾವತಿ, ಮಾನಸ, ಗ್ರಾಪಂ ಸದಸ್ಯೆ ವರಲಕ್ಷ್ಮಮ್ಮ, ಮುನಿರಾಜು, ರೈತ ಬಸವರಾಜು, ಕೆಂಪಣ್ಣ, ಸೊಣ್ಣೇಗೌಡ ಇದ್ದರು.