ಮೂರಾಜೆ ಕೊಪ್ಪ ಶಾಲಾ ಕಟ್ಟಡ ನಿರ್ಮಾಣಕ್ಕೆ ತೊಡಕು; ಬಿಇಒ ಭೇಟಿ; ಸಮಸ್ಯೆ ಬಗೆಹರಿಸುವ ಭರವಸೆ
Team Udayavani, Jul 29, 2020, 12:57 PM IST
ಕೊಪ್ಪ ಸರಕಾರಿ ಕಿ.ಪ್ರಾ. ಶಾಲೆಗೆ ಬಿಇಒ ಲೋಕೇಶ್ ಭೇಟಿ ನೀಡಿದರು.
ಕಡಬ: ಕೋಡಿಂಬಾಳ ಗ್ರಾಮದ ಮೂರಾಜೆ ಕೊಪ್ಪ ಸರಕಾರಿ ಕಿ.ಪ್ರಾ. ಶಾಲೆಯ ಕಟ್ಟಡ ಶಿಥಿಲ ಗೊಂಡಿದ್ದು, ಜಾಗದ ತೊಡಕಿ ನಿಂದಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರದ ಅನುದಾನ ಲಭಿಸದ ಕುರಿತು ಉದಯವಾಣಿ ಸುದಿನ ಜು. 16ರ ಸಂಚಿಕೆಯಲ್ಲಿ “ನೆಲೆ ಕಳೆದುಕೊಂಡ ಮೂರಾಜೆ ಕೊಪ್ಪ ಶಾಲೆ; ಮಕ್ಕಳು ಅತಂತ್ರ’ ಎನ್ನುವ ಸಚಿತ್ರ ವರದಿಗೆ ಅಧಿಕಾರಿಗಳಿಂದ ಪೂರಕ ಸ್ಪಂದನೆ ಲಭಿಸಿದೆ.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ, ಕಡಬ ಕಂದಾಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಸುಮಾರು 40 ಮಕ್ಕಳು ಕಲಿಯುತ್ತಿರುವ ಮೂರಾಜೆ ಕೊಪ್ಪ ಶಾಲಾ ಕಟ್ಟಡದ ಗೋಡೆ ಹಾಗೂ ಛಾವಣಿಯಲ್ಲಿ ಬಿರುಕು ಕಂಡುಬಂದಿರುವ ಕಾರಣದಿಂದಾಗಿ ಅದನ್ನು ತೆರವುಗೊಳಿಸಲು ಸರಕಾರ ಆದೇಶಿಸಿದೆ. ಆದರೆ ಶಾಲಾ ಕಟ್ಟಡ ಇರುವ ಜಾಗ ಭಾಗಶಃ ಅರಣ್ಯ ಪ್ರದೇಶದಲ್ಲಿದೆ ಎನ್ನುವ ಕಾರಣದಿಂದಾಗಿ ಇದುವರೆಗೆ ಶಾಲೆಯ ಹೆಸರಿನಲ್ಲಿ ಪಹಣಿ ಪತ್ರ ಲಭಿಸಿರಲಿಲ್ಲ. ಅದರಿಂದಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಇರಿಸಲು ತಾಂತ್ರಿಕ ತೊಡಕು ಎದುರಾಗಿದೆ. ಈಗಿನ ಕಟ್ಟಡ ಶಿಥಿಲಗೊಂಡ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಪಕ್ಕದ ಭಜನ ಮಂದಿರದ ಜಗಲಿ ಹಾಗೂ ತಾತ್ಕಾಲಿಕ ಶೆಡ್ನಲ್ಲಿ ತರಗತಿ ನಡೆಸಲಾಗುತ್ತಿತ್ತು.
ಕಡಬ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕುಮಾರ್ ಕೆ.ಜೆ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗುಣವತಿ ದೊಡ್ಡಕೊಪ್ಪ, ಉಪಾ ಧ್ಯಕ್ಷೆ ಬೇಬಿ ಉಪಸ್ಥಿತರಿದ್ದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಕಡಬ ಕಂದಾಯ ಕಚೇರಿಗೆ ಭೇಟಿ ನೀಡಿ ಶಾಲೆಯ ಜಮೀ ನಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಿದರು. ಬಳಿಕ ಪತ್ರಿಕೆ ಯೊಂದಿಗೆ ಮಾತನಾಡಿ, ಈಗಾಗಲೇ ಶಾಲೆಯ ಜಮೀನಿನ ಸಮಸ್ಯೆ ಕುರಿತು ಕ್ಷೇತ್ರದ ಶಾಸಕರೊಂದಿಗೆ ಸಮಾ ಲೋಚನೆ ನಡೆಸಲಾಗಿದೆ. ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದ್ದಾರೆ. ಕಡಬದ ಕಂದಾಯ ಅಧಿಕಾರಿ ಗಳು ಹಾಗೂ ಅರಣ್ಯ ಇಲಾಖೆಯ ಸಿಬಂದಿ ಭೇಟಿ ನೀಡಿ ಜಮೀನಿನ ಅಳತೆ ನಡೆಸಿ 34 ಸೆಂಟ್ಸ್ ಜಾಗವನ್ನು ಶಾಲೆಗಾಗಿ ಗುರುತಿಸಿದ್ದಾರೆ. ಈ ಬಗ್ಗೆ ಅವರು ಸಹಾ ಯಕ ಆಯುಕ್ತರಿಗೆ ವರದಿ ಸಲ್ಲಿಸು ವುದಾಗಿ ತಿಳಿಸಿದ್ದು, ಶಾಲೆ ಪುನರಾರಂಭಗೊಳ್ಳುವ ಮೊದಲು ಜಮೀನಿನ ಸಮಸ್ಯೆ ಬಗೆಹರಿಯುವ ಭರವಸೆ ಹೊಂದಲಾಗಿದೆ ಎಂದರು.