ನಟ ಅಮಿತಾಭ್ ಆಸ್ಪತ್ರೆಯಿಂದ ಬಿಡುಗಡೆ
ಮನೆಯಲ್ಲಿಯೇ ಇದ್ದು ವಿಶ್ರಾಂತಿ; ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಕೆ
Team Udayavani, Aug 3, 2020, 8:51 AM IST
ಕೋಲ್ಕತಾದಲ್ಲಿರುವ ಅಖೀಲ ಬಂಗಾಲ ಅಮಿತಾಭ್ ಬಚ್ಚನ್ ಅಭಿಮಾನಿಗಳ ಸಂಘದ ವತಿಯಿಂದ ಅವರಿಗಾಗಿ ರವಿವಾರ ಹೋಮ ಹವನ ನಡೆಸಿಕೊಟ್ಟಿತು.
ಮುಂಬಯಿ: ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 23 ದಿನಗಳಿಂದ ಮುಂಬಯಿಯ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್(77) ರವಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಿದ್ದು, ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದ ಕಾರಣ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸ್ವತಃ ಪುತ್ರ ಅಭಿಷೇಕ್ ಬಚ್ಚನ್ ಅವರೇ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
ಜತೆಗೆ, ಇನ್ನೂ ಕೆಲವು ದಿನಗಳ ಕಾಲ ಅಪ್ಪ ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆಯಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಹಾರೈಕೆಗೆ ಧನ್ಯವಾದಗಳು ಎಂದಿದ್ದಾರೆ ಅಭಿಷೇಕ್. ಬಿಗ್ ಬಿ ಕೂಡ ಈ ಕುರಿತು ಟ್ವೀಟ್ ಮಾಡಿ, ‘ನನ್ನ ವರದಿ ನೆಗೆಟಿವ್ ಬಂದಿದೆ. ನಾನೀಗ ಮನೆಗೆ ಮರಳಿ, ಕ್ವಾರಂಟೈನ್ನಲ್ಲಿರುತ್ತೇನೆ. ದೇವರ ದಯೆ, ನಿಮ್ಮೆಲ್ಲರ ಪ್ರಾರ್ಥನೆ, ನಾನಾವತಿ ಆಸ್ಪತ್ರೆಯ ಸಿಬಂದಿಯ ಅತ್ಯದ್ಭುತ ಸೇವೆಯು ನಾನು ಈ ದಿನವನ್ನು ನೋಡುವಂತೆ ಮಾಡಿತು’ ಎಂದು ಬರೆದುಕೊಂಡಿದ್ದಾರೆ. ಜುಲೈ 11ರಂದು ಅಮಿ ತಾಭ್ ಹಾಗೂ ಅಭಿಷೇಕ್ಗೆ ಸೋಂಕು ದೃಢಪಟ್ಟು, ಆಸ್ಪತ್ರೆಗೆ ದಾಖಲಾಗಿದ್ದರು.
ಅಭಿಷೇಕ್ ಅವರ ಕೋವಿಡ್ ಪರೀಕ್ಷೆ ವರದಿ ಪಾಸಿಟಿವ್ ಎಂದೇ ಬಂದಿರುವ ಕಾರಣ, ಅವರು ಇನ್ನೂ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಇತ್ತೀಚೆಗಷ್ಟೇ ಅಭಿಷೇಕ್ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಪುತ್ರಿ ಆರಾಧ್ಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಆಗಸ್ಟ್ 2 ಬಿಗ್ಬಿಗೆ ಅದೃಷ್ಟದ ದಿನ
ಕುತೂಹಲಕಾರಿ ವಿಚಾರವೆಂದರೆ, ಆಗಸ್ಟ್ 2 ಬಿಗ್ಬಿ ಪಾಲಿಗೆ ವಿಶೇಷ ದಿನ. ಯಾಕೆಂದರೆ, ಅಮಿತಾಭ್ ಬಚ್ಚನ್ ಅವರ ಬದುಕಿಗೆ ದೊಡ್ಡ ಆಘಾತ ಹಾಗೂ ತಿರುವು ನೀಡಿದ್ದಂಥ 1982ರ ದುರಂತದ ವೇಳೆ ಕೋಮಾದಿಂದ ಅವರು ಹೊರಬಂದಿದ್ದೂ ಇದೇ ದಿನ. ಬೆಂಗಳೂರಿನಲ್ಲಿ ಕೂಲಿ ಸಿನೆಮಾ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಮಿತಾಭ್ ಕೋಮಾ ಸ್ಥಿತಿಗೆ ತಲುಪಿದ್ದರು. ನಿರಂತರ ಚಿಕಿತ್ಸೆಯ ಬಳಿಕ ಆ. 2ರಂದು ಅವರು ಕೋಮಾದಿಂದ ಹೊರಬಂದಿದ್ದರು. ಇದು ನನಗೆ ಮರುಹುಟ್ಟು ನೀಡಿದ ದಿನ ಎಂದು ಅವರೇ ಹಲವು ಬಾರಿ ಹೇಳಿಕೊಂಡಿದ್ದರು. ಈಗ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ಡಿಸಾcರ್ಜ್ ಆಗಿ ಮನೆಗೆ ತೆರಳಿದ್ದೂ ಆಗಸ್ಟ್ 2ರಂದು ಎನ್ನುವುದು ವಿಶೇಷ.