ಶಿರಾಗೆ ಸಾವಿರ ಕೋಟಿ ವಿಶೇಷ ಪ್ಯಾಕೇಜ್
Team Udayavani, Sep 4, 2020, 3:23 PM IST
ಶಿರಾ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಶಿರಾ ತಾಲೂಕಿಗೆ 1000 ಕೋಟಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಿಸುವ ಭರವಸೆ ಜೊತೆಗೆ ನೀರಾವರಿ ಯೋಜನೆಗಳು ತ್ವರಿತಗತಿಯಲ್ಲಿ ಕಾಮಗಾರಿ ನಡೆಯಲು ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಲು ಬಿಜೆಪಿ ಬೆಂಬಲಿಸಿ ಎಂದು ಜಿಲ್ಲಾಧ್ಯಕ್ಷ ಸುರೇಶ್ ಗೌಡ ಹೇಳಿದರು.
ತಾಲೂಕಾದ್ಯಂತ ಬೂತ್ ಸಮಿತಿ ರಚನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗುಮ್ಮನಹಳ್ಳಿ ಗೊಲ್ಲರ ಹಟ್ಟಿ, ಎಮ್ಮೇರಹಳ್ಳಿ, ಯಲಿಯೂರು, ಚಿಕ್ಕನ ಹಳ್ಳಿ, ಕಡವಿಗೆರೆ, ದೊಡ್ಡಗೂಳ ಕಾರ್ಯಕ್ರಮಗಳಲ್ಲಿ ಮಾತನಾಡಿದರು.
ಇದೇ ತಿಂಗಳ 15ರ ವೇಳೆಗೆ ತಾಲೂ ಕಾದ್ಯಂತ 234 ಬೂತ್ ಕಮಿಟಿಗಳನ್ನು ರಚಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಅ.2 ರಂದು ಗಾಂಧಿ ಜಯಂತಿಯಂದು ಒಂದು ಭೂತ್ ಕಮಿಟಿಯು 5 ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂಬ ಮಾಹಿತಿ ನೀಡಿದರು. ಶಿರಾ ತಾಲೂಕಿನ ಗುಮ್ಮನಹಳ್ಳಿ ಗೊಲ್ಲರಹಟ್ಟಿಯ ಕರಿಯಮ್ಮ ದೇವಿ ಮತ್ತು ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎರಡನೇ ಬೂತ್ ಕಮಿಟಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಭೆ ನಡೆಸಲಾಯಿತು.
ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಜಿಪಂ ಉಪಾಧ್ಯಕ್ಷೆ ಶಾರದಾ, ತುಮುಲ್ ನಿರ್ದೇಶಕ ಎಸ್.ಆರ್. ಗೌಡ, ಚಿದಾನಂದ ಎಂ ಗೌಡ ಇದ್ದರು.