ಸರ್ವಶ್ರೇಷ್ಠ ಪೆನ್ಸಿಲ್ನಂತಾಗಲಿ ನಮ್ಮ ಬದುಕು
Team Udayavani, Sep 29, 2020, 6:17 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಯೋವೃದ್ಧ ಪೆನ್ಸಿಲ್ ತಯಾರಕರೊಬ್ಬರು ಒಂದು ಹೊಸ ಪೆನ್ಸಿಲ್ ತಯಾರಿಸಿದರು. ಅದನ್ನು ಪ್ಯಾಕ್ ಮಾಡಿ ಮಾರುಕಟ್ಟೆಗೆ ಕಳುಹಿಸುವ ಮುನ್ನ ಅದನ್ನು ಕೈಯಲ್ಲಿ ಹಿಡಿದುಕೊಂಡು ಕ್ಷಣಕಾಲ ದಿಟ್ಟಿಸಿದರು.
ಆ ಬಳಿಕ ತನ್ನ ಮಗುವೋ ಎಂಬ ಹಾಗೆ ಆ ಪೆನ್ಸಿಲ್ಗೆ ಕೆಲವು ಹಿತವಾಕ್ಯಗಳನ್ನು ಹೇಳಿದರು.
‘ನೀನು ಐದು ಪರಮ ಸತ್ಯಗಳನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು’ ವೃದ್ಧ ಪೆನ್ಸಿಲ್ ತಯಾರಕ ಹೇಳಿದರು.
“ಇದು ಹೊರಜಗತ್ತಿಗೆ ಕಳುಹಿಸಿಕೊಡುವುದಕ್ಕೆ ಮುನ್ನ ನಿನ್ನನ್ನು ಸೃಷ್ಟಿಸಿದ ನಾನು ಹೇಳುವ ಬುದ್ಧಿವಾದ. ಇವನ್ನು ಯಾವಾಗಲೂ ನೆನಪಿನಲ್ಲಿ ಇರಿಸಿಕೊಂಡರೆ ನೀನು ಸದಾ ಸರ್ವಶ್ರೇಷ್ಠ ಪೆನ್ಸಿಲ್ ಆಗಿರುತ್ತೀ’.
“ಮೊತ್ತಮೊದಲನೆಯದಾಗಿ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ್ದು ಎಂದರೆ ಉತ್ಕೃಷ್ಟ ಬರಹಗಾರನ ಕೈಗಳಿಗೆ ಶರಣಾದಾಗ ಮಾತ್ರ ನಿನಗೆ ಹಲವು ಶ್ರೇಷ್ಠ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಆಗಾಗ ನಿನ್ನನ್ನು ಮೊನಚುಗೊಳಿಸುತ್ತಾರೆ. ಆಗ ನಿನಗೆ ನೋವಾಗಬಹುದು; ಆದರೆ ಅದಕ್ಕೆ ಒಳಪಟ್ಟರಷ್ಟೇ ನೀನು ಚೆನ್ನಾಗಿ ಬರೆಯಲು ಸಾಧ್ಯ. ಮೂರನೆಯದಾಗಿ, ನೀನು ಒಂದು ಪೆನ್ಸಿಲ್ ಎಂಬುದನ್ನು ನೆನಪಿಟ್ಟುಕೋ. ಹಾಗಾಗಿ ನೀನು ಆಗಾಗ ನಿನ್ನ ಬದುಕಿನಲ್ಲಿ ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ನಾಲ್ಕನೆಯದಾಗಿ, ನೀನು ಏನಾಗಿದ್ದೀಯೋ ಅದು ಸಾಧ್ಯವಾಗಿರುವುದು ನಿನ್ನೊಳಗಿರುವ ಇನ್ನೊಂದರಿಂದ. ಐದನೆಯದಾಗಿ, ಯಾವುದೇ ಹಾಳೆಯ ಮೇಲೆ ನಿನ್ನನ್ನು ಉಪಯೋಗಿಸಿದರೂ ಅಲ್ಲಿ ಶಾಶ್ವತ ಗುರುತನ್ನು ಉಳಿಸು. ಏನೇ ಅಡ್ಡಿಗಳು ಎದುರಾಗಲಿ; ನೀನು ಸೃಷ್ಟಿಯಾಗಿರುವ ಮೂಲ ಉದ್ದೇಶವಾದ ಬರವಣಿಗೆಯನ್ನು ನಿಲ್ಲಿಸದಿರು.’
ಇಷ್ಟು ಹೇಳಿ ಆ ವಯೋವೃದ್ಧ ಪೆನ್ಸಿಲ್ ತಯಾರಕ ಆ ಪೆನ್ಸಿಲನ್ನು ಅಕ್ಕರೆಯಿಂದ ಪೊಟ್ಟಣಗಟ್ಟಿ ಮಾರಾಟಕ್ಕೆ ಕಳುಹಿಸಿಕೊಟ್ಟರು. ಪೆನ್ಸಿಲ್ ತನ್ನ ಸೃಷ್ಟಿಕರ್ತನ ಮಾತುಗಳನ್ನು ಕಿವಿಗೊಟ್ಟು ಕೇಳಿಸಿಕೊಂಡಿತು ಮತ್ತು ಹಾಗೆಯೇ ನಡೆಯುವೆ ಎಂದು ವಚನ ನೀಡಿತು. ತನ್ನ ಬದುಕಿನುದ್ದಕ್ಕೂ ಅದು ಸರ್ವಶ್ರೇಷ್ಠ ಪೆನ್ಸಿಲ್ ಆಗಿತ್ತು.
ಸರಳವಾದ ಕಥೆಯಾಗಿ ತೋರಬಹುದಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತಥ್ಯಗಳು ಇದರಲ್ಲಿವೆ. ಆ ಪೆನ್ಸಿಲ್ ಆಗಿ ನಮ್ಮನ್ನು ನಾವು ಕಲ್ಪಿಸಿಕೊಂಡರೆ ಜೀವನದಲ್ಲಿ ಹೇಗಿರಬೇಕು ಎಂಬ ಪಾಠವಾಗಿ ಈ ಕಥೆ ಕಾಣುತ್ತದೆ. ವಿದ್ಯಾಭ್ಯಾಸ ಸಂದರ್ಭ ಉತ್ತಮ ಗುರುವಿನ ಅಡಿಯಲ್ಲಿ, ಉದ್ಯೋಗದ ಸಂದರ್ಭ ಯಶಸ್ವೀ ಆಡಳಿತಗಾರರ ಮಾರ್ಗದರ್ಶನದಲ್ಲಿ ನಾವು ಬದುಕು ರೂಪಿಸಿಕೊಳ್ಳಬೇಕು.
ಆಗ ಶ್ರೇಷ್ಠತೆ ಸಾಧ್ಯವಾಗುತ್ತದೆ. ಬದುಕಿನಲ್ಲಿ ಎದುರಾಗುವ ಬದಲಾ ವಣೆಗಳಿಗೆ ಒಗ್ಗಿಕೊಳ್ಳಬೇಕು, ಸ್ವೀಕರಿಸಬೇಕು. ಅಲ್ಲದೆ ಜೀವನಪಥದಲ್ಲಿ ನಮ್ಮ ತಪ್ಪುಗಳನ್ನು ಸರಿಪಡಿಸಿ ಕೊಳ್ಳುತ್ತ ಮುಂದೆ ನಡೆಯಬೇಕು. ಪೆನ್ಸಿಲ್ನಲ್ಲಿ ಮರದ ಕೊಳವೆಯೊಳಗಿನ ಕಡ್ಡಿಯಿಂದ ಬರವಣಿಗೆ ನಡೆಯುವುದು. ಆದರೆ ಮರದ ಕೊಳವೆಯ ಆಧಾರವಿಲ್ಲದೆ ಬರೇ ಕಡ್ಡಿಯಿಂದ ಬರೆಯಲಾಗದು. ನಾವೂ ಹೀಗೆಯೇ – ನಮ್ಮ ದೇಹ ಮತ್ತು ಅದರೊಳಗಿರುವ ಆತ್ಮ ಅಥವಾ ಚೈತನ್ಯ ಒಂದಕ್ಕೊಂದು ಪೂರಕ. ಒಂದಿಲ್ಲದೆ ಇನ್ನೊಂದಿಲ್ಲ.
ಹಾಗೆಯೇ ಕಷ್ಟಗಳು, ಸವಾಲುಗಳು, ಅಡ್ಡಿ ಆತಂಕಗಳು ಎದುರಾದಾಗ ಎದೆ ಗುಂದದೆ ನಮಗೆ ವಿಹಿತವಾದ ಕರ್ತವ್ಯಗಳನ್ನು, ಜವಾಬ್ದಾರಿಗಳನ್ನು ನಡೆಸುವುದು ಮತ್ತು ಸಾಧನೆ ಮಾಡಿ ಗುರುತಿಸಿಕೊಳ್ಳುವುದು ನಮ್ಮ ಬದುಕಿಗೊಂದು ಅರ್ಥವನ್ನು ಕೊಡುತ್ತದೆ.
(ಕಥೆಯೊಂದರ ಸಾರ ಸಂಗ್ರಹ)