“ರೈತರ ಬೆಳೆ ಸಾಗಾಟ ವೆಚ್ಚ ತಗ್ಗಿಸಲು ನಿರಂತರ ಸೇವೆ’
ಕೊಂಕಣ ರೈಲ್ವೇ ಮೂಲಕ ರಬ್ಬರ್ ಸಾಗಾಟ
Team Udayavani, Sep 29, 2020, 11:31 PM IST
ಲಾೖಲದಲ್ಲಿ ಕೊಂಕಣ ರೈಲ್ವೇ ಕಿಸಾನ್ ಪಾರ್ಸೆಲ್ ಮೂಲಕ ರಬ್ಬರ್ ಬೆಳೆ ಸಾಗಾಟಕ್ಕೆ ಚಾಲನೆ ನೀಡಲಾಯಿತು.
ಬೆಳ್ತಂಗಡಿ: ಕೃಷಿ ಉತ್ಪನ್ನಗಳು ರೈತರ ಮನೆಬಾಗಿಲಿಂದ ನೇರವಾಗಿ ಹೊರರಾಜ್ಯದ ಮಾರುಕಟ್ಟೆಗೆ ಅತ್ಯಲ್ಪ ಸಮಯದಲ್ಲಿ ಸಂಪರ್ಕ ಸಾಧಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಚನೆ ಯಂತೆ ಕೊಂಕಣ ರೈಲ್ವೆ ಕಿಸಾನ್ ಪಾರ್ಸೆಲ್ ಮೂಲಕ ಆರಂಭಿಸಲಾಗಿದೆ ಎಂದು ಕೊಂಕಣ ರೈಲ್ವೇಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದರು. ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಲಾೖಲದಲ್ಲಿರುವ ಗೋದಾಮಿನಿಂದ ಕೊಂಕಣ ರೈಲ್ವೇ ಮೂಲಕ ಗುಜರಾತ್ಗೆ ಸಾಗಾಟ ನಡೆಸುವ ಸಲುವಾಗಿ 16 ಟನ್ ರಬ್ಬರ್ ಸಾಗಾಟಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ರೈಲ್ವೇ ಸೇವೆಯಿಂದ ರಬ್ಬರ್, ಅಡಿಕೆ, ತೆಂಗು, ಕಾಳುಮೆಣಸು ಸೇರಿದಂತೆ ಕೃಷಿ ಉತ್ಪನ್ನಗಳ ಸಾಗಾಟ ವೆಚ್ಚ ತಗ್ಗಿಸಲು ಸಾಧ್ಯವಾಗಲಿದೆ. ಈಗಾಗಲೇ ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಕೃಷಿ ಉತ್ಪನ್ನ ಸಾಗಾಟ ಪ್ರಾರಂಭಿಸಲಾಗಿದೆ. ರೈಲ್ವೇ ಸೇವೆ ನಿರಂತರವಾಗಿ ನಡೆಯಬೇಕಾದರೆ ರೈತರ ಸಹಭಾಗಿತ್ವ ಅತ್ಯಮೂಲ್ಯ ಎಂದು ಹೇಳಿದರು.
ಉಜಿರೆ ರಬ್ಬರ್ ಸೊಸೈಟಿ ನಂ. 1 ಸ್ಥಾನದಲ್ಲಿ: ಭಿಡೆ
ಉಜಿರೆ ರಬ್ಬರ್ ಸೊಸೈಟಿ ನಿಕಟಪೂರ್ವ ಅಧ್ಯಕ್ಷ ಶ್ರೀಧರ್ ಭಿಡೆ ಮಾತನಾಡಿ, 1985ರಲ್ಲಿ ನಮ್ಮ ಸೊಸೈಟಿ ಪ್ರಾರಂಭವಾಗಿದ್ದು ಪ್ರಥಮ ಬಾರಿಗೆ ಸಹಕಾರಿ ಕ್ಷೇತ್ರದಲ್ಲಿ ರಬ್ಬರ್ ಖರೀದಿ ಮಾಡಲು ನಾವು ಪ್ರಾರಂಭಿಸಿದ್ದು ರಬ್ಬರ್ ಖರೀದಿಯಲ್ಲಿ ಏಷ್ಯಾದಲ್ಲೇ ನಂ. 1 ಸ್ಥಾನದಲ್ಲಿದೆ. ಇದೀಗ ನಮ್ಮ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗೆ ಸಾಗಿಸಲು ಕೊಂಕನ್ ರೈಲ್ವೇ ನಮ್ಮೊಂದಿಗೆ ಒಪ್ಪಂದ ಮಾಡಿದ್ದು ಇದರಿಂದ ಸಾಗಾಟ ವೆಚ್ಚ ಕಡಿಮೆಯಾಗಲಿದೆ. ಈ ಕಡಿಮೆಯಾದ ವೆಚ್ಚವನ್ನು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕರಿಸಲು ಚಿಂತನೆ ನಡೆಸಲಾಗಿದೆ ಎಂದರು.
ನಿರ್ದೇಶಕರಾದ ಜಯಶ್ರೀ ಡಿ.ಎಂ., ಕೇರಿಮಾರು ಬಾಲಕೃಷ್ಣ ಗೌಡ, ಗ್ರೇಸಿಯನ್ ವೇಗಸ್, ಇ. ಸುಂದರ ಗೌಡ, ಎಚ್. ಪದ್ಮ ಗೌಡ, ಕೆ.ಜೆ.ಅಗಸ್ಟೀನ್, ಅನಂತ ಭಟ್ ಎಂ., ಪಿ.ವಿ.ಅಬ್ರಹಾಂ, ಶಶಿಧರ ಡೋಂಗ್ರೆ, ಕೊಂಕಣ ರೈಲ್ವೇಯ ರೀಜನಲ್ ಟ್ರಾಫಿಕ್ ಮ್ಯಾನೇಜರ್ ವಿನಯ್ ಕುಮಾರ್, ನ್ಯಾಷನಲ್ ಟ್ರಾನ್ಸ್ಪೊàರ್ಟ್ ಕಂಪೆನಿಯ ಸಿನಾನ್ ಮತ್ತು ಹಾರಿಸ್ ಉಪಸ್ಥಿತರಿದ್ದರು. ಸಿಇಒ ರಾಜು ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು.
ಕೃಷಿ ಉತ್ಪನ್ನಗಳನ್ನು ರೈಲಿನಲ್ಲಿ ಸಾಗಿಸುವ ಯೋಜನೆಯ ಅಧಿಕೃತ ಅನುಷ್ಠಾನಕ್ಕೆ ಪೂರ್ವದಲ್ಲಿ ಪ್ರಾಯೋಗಿಕವಾಗಿ ಎರಡನೇ ಬಾರಿಗೆ ಇಂದು 16 ಟನ್ ರಬ್ಬರನ್ನು ಬೆಳ್ತಂಗಡಿಯಿಂದ ಸಾಗಿಸಲಾಗುತ್ತಿದೆ. ಅ. 3ರಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಪುತ್ತೂರು ಎಪಿಎಂಸಿ ಆವರಣದಲ್ಲಿ ಕೊಂಕಣ ರೈಲ್ವೇ ಕಿಸಾನ್ ಪಾರ್ಸೆಲ್ ರೈಲಿಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು.
– ಸುಧಾ ಕೃಷ್ಣಮೂರ್ತಿ, ಪಿಆರ್ಒ, ಕೊಂಕಣ ರೈಲ್ವೇ