ಗಲ್ಲು ಶಿಕ್ಷೆಯಿಂದ ಕುಲಭೂಷಣ್ ಜಾಧವ್ ಪಾರು?
ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಇದಕ್ಕೆ ಒಪ್ಪಿಗೆ ನೀಡಿದೆ.
Team Udayavani, Oct 23, 2020, 10:25 AM IST
ಇಸ್ಲಾಮಾಬಾದ್: ಪಾಕ್ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಮರಣದಂಡನೆಯಿಂದ ಪಾರಾಗುವ ನಿರೀಕ್ಷೆ ಮೂಡಿದೆ.
ಜಾಧವ್ ಗೆ ಗಲ್ಲುಶಿಕ್ಷೆ ನೀಡಿ ಹೊರಡಿಸಲಾದ ತೀರ್ಪಿನ ಮರುಪರಿಶೀಲನೆ ನಡೆಸುವ ಕುರಿತು ಪಾಕ್ ಸರ್ಕಾರದ ವಿಧೇಯಕಕ್ಕೆ ಅಲ್ಲಿನ ಸಂಸದೀಯ ಸಮಿತಿಯು ಒಪ್ಪಿಗೆ ಸೂಚಿಸಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ (ಮರುಪರಿಶೀಲನೆ) ಸುಗ್ರೀವಾಜ್ಞೆ ಎಂಬ ಕರಡು ವಿಧೇಯಕ ಕುರಿತು ಸುದೀರ್ಘ ಚರ್ಚೆ ನಡೆಸಿ, ಕೊನೆಗೆ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಇದಕ್ಕೆ ಒಪ್ಪಿಗೆ ನೀಡಿದೆ.
ಭಾರತ ಗಡಿ ತೆರೆದರೂ, ನೇಪಾಳ ಮೀನಮೇಷ
ಚೀನಾದ ಕೈಗೊಂಬೆ ನೇಪಾಳ ಮತ್ತೆ ಭಾರತ ವಿರುದ್ಧ ಉದ್ಧಟತನ ಮುಂದುವರಿಸಿದೆ. ಕೊರೊನಾ ಭೀತಿ ಕಾರಣಕ್ಕೆ 7 ತಿಂಗಳಿಂದ ಮುಚ್ಚಿದ್ದ ಗಡಿಯನ್ನು ಭಾರತ ತೆರೆದಿದ್ದರೂ, ನೇಪಾಳ ಮಾತ್ರ ತೆರೆಯದೆ ಸೊಕ್ಕು ತೋರಿದೆ. ಭಾರತವನ್ನು ಮತ್ತೆ ಹಳದಿಗಣ್ಣಿನಿಂದ ನೋಡುತ್ತಿರುವ ನೇಪಾಳ, ಗಡಿಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ನಿಲ್ಲಿಸಿದೆ.
ಭಾರತದಿಂದ ಬರುವ ಪ್ರತಿಯೊಬ್ಬರನ್ನೂ ಗಡಿಯಲ್ಲಿ ತಡೆಯಲು ಪೊಲೀಸರಿಗೆ ಓಲಿ ಸರ್ಕಾರ ಸೂಚಿಸಿದೆ. ಈ ಮೂಲಕ ನೇಪಾಳ, “ಭಾರತದೊಂದಿಗೆ ಸಂಬಂಧ
ಮರು ಕಟ್ಟಲು ಕಠ್ಮಂಡುವಿಗೆ ವಿಶ್ವಾಸವಿಲ್ಲ’ ಎನ್ನುವ ಸಂದೇಶ ರವಾನಿಸಿದೆ. ಭಾರತ- ನೇಪಾಳ ಗಡಿ ಮಾರ್ಚ್ 23ರಂದು ಮುಚ್ಚಲಾಗಿತ್ತು. ಇದರಿಂದಾಗಿ ಗಡಿಹಳ್ಳಿಯ ಜನ ಭಾರೀ ತೊಂದರೆ ಅನುಭವಿಸಿದ್ದರು. ಈಗ ಭಾರತದ ನಿರ್ಧಾರ ಗಡಿಜನರಿಗೆ ಖುಷಿ ತಂದಿದ್ದರೂ, ನೇಪಾಳದ ಸಣ್ಣತನ ಆಕ್ರೋಶ ಹುಟ್ಟಿಸಿದೆ. ನವೆಂಬರ್ 15ರ ಮಧ್ಯರಾತ್ರಿವರೆಗೆ ಭಾರತದ ಗಡಿ ತೆರೆಯದೇ ಇರಲು ನೇಪಾಳ ನಿರ್ಧರಿಸಿದೆ.