ಬೆಳೆ ನಷ್ಟ; ವೈಜ್ಞಾನಿಕ ಪರಿಹಾರ ನೀಡಲು ಆಗ್ರಹ
Team Udayavani, Nov 6, 2020, 7:37 PM IST
ಯಾದಗಿರಿ: ಜಿಲ್ಲೆಯಲ್ಲಿ ರೈತರು ಭೀಮಾ ಮತ್ತು ಕೃಷ್ಣ ನದಿಗಳ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಹಾನಿ ಅನುಭವಿಸಿದ್ದು ಸರ್ಕಾರ ರೈತರಿಗೆ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ನೇತಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ರೈತ ಸಂಘದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ 1 ಗಂಟೆ ಕಾಲ ರಸ್ತೆ ತಡೆ ನಡೆಸಿ, ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ಪ್ರವಾಹ ಹಾನಿ ವೀಕ್ಷಿಸಿದ್ದಾರೆ.ವಾಸ್ತವಿಕ ಹಾನಿ ಹಾಗೂ ಸಮಸ್ಯೆ ತಿಳಿದಿಲ್ಲ, ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರೆ ಸಾಲದು, ಗ್ರಾಮೀಣ ಪ್ರದೇಶಗಳಿಗೆ ಅವರು ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಜಿಲ್ಲೆಯಲ್ಲಿ ಅತಿವೃಷ್ಟಿ- ಪ್ರವಾಹದಿಂದ ನೂರಾರು ಕುಟುಂಬಗಳಮನೆಗಳು ನಾಶವಾಗಿವೆ. ಸರ್ಕಾರ ಮನೆ ನಿರ್ಮಿಸಿಕೊಡಬೇಕೆಂದು ಹೇಳಿದರು.
ಸರ್ಕಾರ ಕೂಡಲೇ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು, ಜಿಲ್ಲೆಗೆ ನೆರೆ ರಾಜ್ಯಗಳಿಂದ ಆಗಮಿಸಿರುವ ಭತ್ತ ಕಟಾವು ಯಂತ್ರಗಳ ಮಾಲೀಕರು ಹೆಚ್ಚಿನ ಬಾಡಿಗೆ ಪಡೆಯುತ್ತಿದ್ದು, ಜಿಲ್ಲಾಡಳಿತ ಅದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಭತ್ತ ಹಾಗೂ ಹತ್ತಿ ಬೆಳೆಗಳ ಮಾರಾಟಕ್ಕೆ ಸರ್ಕಾರ ಎಲ್ಲ ಹೋಬಳಿಗಳಲ್ಲಿ ಖರೀದಿ ಕೇಂದ್ರ ತೆರೆದು ಸೂಕ್ತ ಬೆಂಬಲ ಬೆಲೆ ನೀಡುವ ಜೊತೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿರುವುದರಿಂದ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಹಿಂಗಾರು ಬೆಳೆಗಳಿಗೆ ಏ.10ರ ವರೆಗೆ ನೀರು ಒದಗಿಸಬೇಕೆಂದು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮೂಲಕ ರೈತ ಮುಖಂಡರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.ಈ ವೇಳೆ ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟ್, ಚನ್ನಪ್ಪ ಆನೆಗುಂದಿ, ಎಸ್.ಎಂ. ಸಾಗರ್, ಹಣಮಂತ ಕೊಂಗಂಡಿ, ದಾವಲಸಾಬ್ ನದಾಫ್, ಚಂದ್ರಕಲಾ ವಡಿಗೇರಿ, ಗಣೇಶ ಅನವಾರ, ಶಿವರಾಜ, ಭೀಮರಾಯ ಯಡ್ಡಳ್ಳಿ, ಪಕೀರ್ ಅಹ್ಮದ್, ಚಂದ್ರಶೇಖರ ಚವ್ಹಾಣ ಇತರರು ಇದ್ದರು.