14 ಗಂಟೆಗಳ ಕಾರ್ಯಾಚರಣೆ: ಬಾವಿಗೆ ಬಿದ್ದ ಆನೆಮರಿಯ ರಕ್ಷಣೆ
Team Udayavani, Nov 20, 2020, 4:33 PM IST
ಚೆನ್ನೈ: ಹದಿನಾಲ್ಕು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ 50 ಅಡಿ ಆಳದ ಬಾವಿಯೊಳಗೆ ಬಿದ್ದ ಆನೆಮರಿಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಪಂಚಂ ಪಲ್ಲಿಯ ಯಲುಗುಂಡೂರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 8 ವರ್ಷದ ಆನೆಯ ಮರಿಯೊಂದು ಬಾವಿಗೆ ಬಿದ್ದಿದ್ದು ವಿಷಯ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಹುತೇಕ ನೀರು ಒಣಗಿದ್ದ ಬಾವಿಯೊಳಗೆ ಸಿಲುಕಿಕೊಂಡಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಸೇವೆಗಳ ಇಲಾಖೆ ಅಧಿಕಾರಿಗಳ ಸತತ 14 ಗಂಟೆಗಳ ಪ್ರಯತ್ನದಿಂದ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಆನೆಮರಿಯನ್ನು ಎತ್ತಲು ಭಾರೀ ಗಾತ್ರದ ಹಗ್ಗಗಳನ್ನು ಬಳಸಿಕೊಳ್ಳಲಾಗಿದ್ದು, ಕ್ರೇನ್ ಗೆ ಹಗ್ಗಗಳನ್ನು ಕಟ್ಟಿ ಅದರ ಸಹಾಯದಿಂದ ಮೇಲೆತ್ತಲಾಗಿದೆ. ಆನೆಮರಿಯನ್ನು ಮೇಲೆತ್ತುವ ವೇಳೆಯಲ್ಲಿ ಎಲ್ಲಾ ರೀತಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಮತ್ತು ಅದು ವಿಚಲಿತಗೊಳ್ಳದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಓದಿ:ಸ್ನೇಹಿತನೊಂದಿಗೆ ವಾಟ್ಸಾಪ್ ಚಾಟ್ ಮಾಡಿದ್ದಕ್ಕೆ ತಂಗಿಗೆ ಗುಂಡು ಹಾರಿಸಿದ ಅಣ್ಣ !
ಬಾವಿಗೆ ಆನೆ ಬಿದ್ದು ಜೋರಾಗಿ ಕೂಗುವ ಶಬ್ದ ಕೇಳಿಬಂದ ತಕ್ಷಣ ಸ್ಥಳೀಯ ಜನರು ಸ್ಥಳದ ಸುತ್ತಲೂ ಜಮಾಯಿಸಿದ್ದರು.