12 ಕಾರಿಡಾರ್ ಕೆಆರ್ಡಿಸಿಎಲ್ಗೆ
191 ಕಿ.ಮೀಗೆ 477.29 ಕೋಟಿ ರೂ. ಹಸ್ತಾಂತರಕ್ಕೆ ತಜ್ಞರ ಆಕ್ಷೇಪ
Team Udayavani, Nov 30, 2020, 11:04 AM IST
ಬೆಂಗಳೂರು: ಸಾಕಷ್ಟು ಪರ-ವಿರೋಧಗಳ ನಂತರ ಅಂತಿಮವಾಗಿ ನಗರದ 12 ಅಧಿಕ ದಟ್ಟಣೆ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ಡಿಸಿಎಲ್) ಹಸ್ತಾಂತರಿಸಿ ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ.
ಇದರೊಂದಿಗೆ ಅಭಿವೃದ್ಧಿ ಅನುಷ್ಠಾನಕ್ಕೆ ನೀಡಲಾದ “ಬೆಂಗಳೂರು ವಿಶೇಷ ಮೂಲಸೌಕರ್ಯ ಯೋಜನೆ’ಗೆ ಅಡಿ ನೀಡಲಾದ 477.29 ಕೋಟಿ ಕೂಡ ಕೆಆರ್ಡಿಸಿಎಲ್ಗೆ ವರ್ಗಾವಣೆ ಆಗಲಿದೆ. ಜತೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ನಿಗಮ ನೇಮಿಸಿದ್ದ ಖಾಸಗಿ ಯೋಜನಾ ಸಲಹೆಗಾರರ ಸೇವೆ ಮುಂದುವರಿಸಲು ಅನುಮೋದನೆ ನೀಡಲಾಗಿದ್ದು, ಅದರಂತೆ ಪ್ರತಿ ಕಾರಿಡಾರ್ ವ್ಯಾಪ್ತಿಗೆ ಒಂದು ಪ್ಯಾಕೇಜ್ ಮಾಡಿ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಅನುಮೋದನೆ ನೀಡಿದ ಮೊತ್ತದಲ್ಲಿ ಸುಮಾರು 300 ಕೋಟಿ ರೂ. ಅಭಿವೃದ್ಧಿಗೆ ಹಾಗೂ ಉಳಿದ ಮೊತ್ತ ನಿರ್ವಹಣೆಗೆ ಮೀಸಲಿಡಬೇಕು. ಮುಂದಿನ 4 ವರ್ಷ ಅಂದರೆ 2021-22ರಿಂದ 2024-25ರವರೆಗೆ ಪ್ರತಿ ವರ್ಷ ನಿರ್ವಹಣೆಗಾಗಿ ನೂರು ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಲಿದೆ.
ಯೋಜನೆ ವೆಚ್ಚ ಒಂದು ವೇಳೆ ನಿಗದಿಪಡಿಸಿದ ಮೊತ್ತ ಮೀರಿದರೆ, ಆ “ಹೆಚ್ಚುವರಿ ಹಣ’ವನ್ನು ಬಿಬಿಎಂಪಿ ಭರಿಸಲಿದೆ ಎಂಬ ಷರತ್ತುಕೂಡ ವಿಧಿಸಲಾಗಿದೆ. ಆದರೆ, “ನಗರದ ರಸ್ತೆಗಳ ಅಭಿವೃದ್ಧಿ ಹೊಣೆ ಬೃಹತ್ ಬೆಂಗಳೂರುಮಹಾನಗರ ಪಾಲಿಕೆ (ಬಿಬಿಎಂಪಿ)ಯದ್ದು’ ಎಂದು ಹಿಂದೆ ಸಚಿವ ಸಂಪುಟದಲ್ಲೇ ತೀರ್ಮಾನ ಆಗಿದೆ. ಅಲ್ಲದೆ, ಹೀಗೆ ರಸ್ತೆ ಅಭಿವೃದ್ಧಿ ಆಯಾ ಸ್ಥಳೀಯ ಆಡಳಿತದ ಜವಾಬ್ದಾರಿ ಕೂಡ ಆಗಿರುತ್ತದೆ. ಹೀಗಿರುವಾಗ, ಸಂಪುಟದ ನಿರ್ಣಯ ಬದಿಗೊತ್ತಿ ಸುಮಾರು 200 ಕಿ.ಮೀ. ಉದ್ದದ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಜವಾಬ್ದಾರಿಯನ್ನು ಕೆಆರ್ಡಿಸಿಎಲ್ಗೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ : ಅಂತಿಮ ಏಕದಿನ, ಟಿ 20 ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು13 ಸಾವಿರಕಿ.ಮೀ. ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ 191 ಕಿ.ಮೀ.ನಷ್ಟು 12 ಅಧಿಕ ದಟ್ಟಣೆ ಇರುವ ಕಾರಿಡಾರ್ ಮತ್ತು 474 ಕಿ.ಮೀ. ಉದ್ದದ ಪ್ರಮುಖ ಮತ್ತು ಉಪ ಪ್ರಮುಖ ರಸ್ತೆಗಳಿವೆ. ಈ ಕಾರಿಡಾರ್ಗಳ ನಿರ್ವಹಣೆ ಕಷ್ಟವಾಗಬಹುದು.ಹಾಗೂ ಬಿಬಿಎಂಪಿಯಲ್ಲಿ ರಸ್ತೆ ನಿರ್ವಹಣೆ ಮತ್ತು ಉನ್ನತೀಕರಣಕ್ಕೆ ಪ್ರತ್ಯೇಕ ಅನುದಾನದಡಿ ಕಾರ್ಯನಿರ್ವಹಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ ಎಂಬ ಅಭಿಪ್ರಾಯ ಈ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಗಿತ್ತು. ಅದನ್ನು ಆಧರಿಸಿ ಈ ಹಸ್ತಾಂತರ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಅಶಕ್ತಗೊಳಿಸುವ ಪ್ರಯತ್ನ : ಉದ್ದೇಶಿತ 12 ಕಾರಿಡಾರ್ಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಬಿಬಿಎಂಪಿ ಮೂಲಕವೇ ಕೈಗೆತ್ತಿಕೊಳ್ಳಲು ಈಚೆಗೆ ನಡೆದೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಇತ್ತೀಚೆಗೆ ಅಂತಿಮವಾಗಿ ಕೆಆರ್ಡಿಸಿಎಲ್ಗೆ ವ ಹಿಸಲು ನಿರ್ಣಯ ಕೈಗೊಂಡು ಆದೇಶ ಹೊರಡಿಸಲಾಗಿದೆ.ಸುಮಾರು 3 ವರ್ಷಗಳ
ಹಿಂದೆ ಇದೇ ರೀತಿ ನಗರದ ಕೆಲವು ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಇದಕ್ಕಾಗಿ ಸುಮಾರು 800 ಕೋಟಿ ರೂ. ಖರ್ಚು ಮಾಡಲಾಗಿತ್ತು. ಆದರೆ, ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ಅನುಕೂಲ ಆಗಲಿಲ್ಲ ಎಂದು ತಜ್ಞರು ಹೇಳುತ್ತಾರೆ. “ಬಿಬಿಎಂಪಿ ಒಂದು ಸ್ಥಳೀಯ ಸರ್ಕಾರ ಕೆಆರ್ಡಿಸಿಎಲ್ ರಾಜ್ಯ ಸರ್ಕಾರದ ಅಡಿ ಬರುತ್ತದೆ. ಅಷ್ಟಕ್ಕೂ ಈ 12 ಕಾರಿಡಾರ್ಗಳು ನಗರದ ಮ ಧ್ಯೆ ಹಾದು ಹೋಗುತ್ತವೆ. ಹಾಗಿದ್ದರೆ, ರಸ್ತೆಯ ಫುಟ್ಪಾತ್, ಬಸ್ ಪಥಗಳ ನಿರ್ವಹಣೆ ಯಾರು ಮಾಡುತ್ತಾರೆ? ಒಂದೆಡೆ ಸರ್ಕಾರ ಘನತ್ಯಾಜ್ಯ ನಿರ್ವಹಣೆಗೊಂದು ಪ್ರತ್ಯೇಕ ನಿಗಮ ಸ್ಥಾಪನೆ ಮಾಡಲುಹೊರಟಿದೆ. ಮತ್ತೂಂದಡೆ ರಸ್ತೆಗಳ ನಿರ್ವಹಣೆಯನ್ನು ಬೇರೆ ನಿಗಮಕ್ಕೆ ವಹಿಸುತ್ತಿದೆ. ಇದೆಲ್ಲವೂ ಸ್ಥಳೀಯ ಸಂಸ್ಥೆಯನ್ನು ಅಶಕ್ತಗೊಳಿಸುವ ಪ್ರಯತ್ನ. ಹೆಚ್ಚು ಸಂಸ್ಥೆಗಳಾದಷ್ಟೂ ಹೆಚ್ಚು ಸಮನ್ವಯ ಕೊರತೆ ಉಂಟಾಗುತ್ತದೆ. ಇದೆಲ್ಲದರಿಂದ ಜನ ಕಷ್ಟ ಎದುರಿಸಬೇಕಾಗುತ್ತದೆ ಅಷ್ಟೇ’ ಎಂದು ಜನಾಗ್ರಹ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸ್ ಆಲವಿಲ್ಲಿ ಆರೋಪಿಸುತ್ತಾರೆ.
–ವಿಶೇಷವರದಿ