ಪ್ರತಿಭಟನಾ ನಿರತ ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡಿರುವುದು ಕ್ರೂರತನ : ಶಿವಸೇನೆ ಆಕ್ರೋಶ
Team Udayavani, Nov 30, 2020, 7:00 PM IST
ಮುಂಬೈ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜಲಫಿರಂಗಿ ಪ್ರಯೋಗ ನಡೆಸಿದ ಪೊಲೀಸರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಉತ್ತರ ಭಾರತದ ಹಲವೆಡೆ ಸದ್ಯ ಶೀತ ಹವೆ ಬೀಸುತ್ತಿದೆ. ಇದರ ನಡುವೆಯೇ ಜಲಫಿರಂಗಿ ಪ್ರಯೋಗ ಮಾಡಿರುವುದು ಕ್ರೂರತನ ಎಂದು ಪಕ್ಷದ ಮುಖವಾಣಿ “ಸಾಮ್ನಾ’ದಲ್ಲಿ ಬರೆಯಲಾಗಿರುವ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.
“ರೈತರನ್ನು ಭಯೋತ್ಪಾದಕರಂತೆ ಚಿತ್ರಿಸಲಾಗಿದೆ ಮತ್ತು ಅವರ ಮೇಲೆ ದೆಹಲಿ ಗಡಿಯಲ್ಲಿ ಎರಗಲಾಗಿದೆ. ಅದಕ್ಕೆ ಸಮಾನವಾಗಿ ಕಾಶ್ಮೀರದಲ್ಲಿ ಭಯೋತ್ಪಾದಕರು ವೀರ ಯೋಧರನ್ನು ಕೊಲ್ಲುತ್ತಿದ್ದಾರೆ’ ಎಂದು ಬರೆಯಲಾಗಿದೆ.
ಹೋರಾಟಗಾರರಿಗೆ ಖಲಿಸ್ತಾನ ನಂಟು ಇದೆ ಎಂಬ ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹೇಳಿಕೆಗೆ ಕೂಡ ಆಕ್ಷೇಪ ಮಾಡಲಾಗಿದೆ. “ಅರಾಜಕತೆ ಸೃಷ್ಟಿಸುವುದೇ ಬಿಜೆಪಿಯ ಉದ್ದೇಶ. ಖಲಿಸ್ತಾನ ವಿಚಾರ ಈಗ ಮುಗಿದ ಅಧ್ಯಾಯ. ಅದಕ್ಕಾಗಿಯೇ ಇಂದಿರಾ ಗಾಂಧಿ ಮತ್ತು ಜ.ಅರುಣ್ ಕುಮಾರ್ ವೈದ್ಯ ಬಲಿದಾನ ನೀಡಿದ್ದಾರೆ. ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳನ್ನು ಮುಗಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಆದರೆ ಇಂಥ ಪ್ರಯತ್ನ ದೇಶದ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಕಾಣುತ್ತಿಲ್ಲ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.