ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಠಿಣವಾಗಿರಲಿದೆ : ಸಚಿವ ಪ್ರಭು ಚವ್ಹಾಣ್
Team Udayavani, Dec 6, 2020, 7:09 PM IST
ಬೆಂಗಳೂರು : ರಾಜ್ಯದಲ್ಲಿ ಜಾರಿಗೊಳಿಸಲಿರುವ ಗೋಹತ್ಯೆ ನಿಷೇಧ ಕಾಯ್ದೆ ಕಠಿಣವಾಗಿರಲಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಿರುವ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಕಾಯ್ದೆಯ ಅಧ್ಯಯನ ನಡೆಸಲಾಗಿದೆ ಮತ್ತು ಅಲ್ಲಿನ ಕಾಯ್ದೆಯ ರೂಪುರೇಷೆ, ಕಾಯ್ದೆ ಅನುಷ್ಠಾನದಲ್ಲಿ ಅಲ್ಲಿನ ಸರಕಾರಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ನಮ್ಮ ಸರಕಾರ ಗೋ ಹತ್ಯೆ ನಿಷೇಧ ಕಠಿಣ ಮಸೂದೆಯನ್ನು ಮಂಡಿಸಲಿದೆ ಎಂದರು. ಮಸೂದೆ ಮಂಡನೆಯಾದ ಬಳಿಕ ಉಭಯ ರಾಜ್ಯಗಳಲ್ಲಿ ಕಾಯ್ದೆ ಬಿಗಿಗೊಳಿಸಿರುವ ಅಂಶಗಳನ್ನು ನಮ್ಮ ಮಸೂದೆಯಲ್ಲಿಯೂ ಅಳವಡಿಸಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚು ಸ್ಥಾನ; ಸಚಿವ ಸೋಮಶೇಖರ್
ನಮ್ಮ ಸರಕಾರ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಂಪೂರ್ಣ ಗೋ ಹತ್ಯೆ ನಿಷೇಧಕ್ಕೆ ಬದ್ಧವಾಗಿದೆ. 2010ರ ಮಸೂದೆಯನ್ನು ಇನ್ನಷ್ಟು ಬಿಗಿಗೊಳಿಸಿ ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
2010ರಲ್ಲಿ ಅಂದಿನ ನಮ್ಮ ಮುಖ್ಯ ಮಂತ್ರಿಗಳು ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದ ನಂತರ ಮಸೂದೆಯನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿತ್ತು. ಕೆಲವೊಂದು ತಿದ್ದುಪಡಿಗಳನ್ನು ಸೂಚಿಸಿ ಮಸೂದೆ ವಾಪಸ್ಸಾಯಿತಾದರೂ ಕಾಂಗ್ರೆಸ್ ಸರಕಾರವು ಮಸೂದೆಯನ್ನು ಹಿಂಪಡೆದು ಹಳೆಯ ಕಾಯ್ದೆಯನ್ನೇ ಮುಂದುವರೆಸಿತ್ತು ಆದರೆ ಈ ಬಾರಿ ಹಾಗಾಗದು ಎಂದು ಹೇಳಿದ್ದಾರೆ.