ಅಯೋಧ್ಯೆ ರಥಕ್ಕೆ ಕೋಟೇಶ್ವರದ ಶಿಲ್ಪಿಗಳು?
Team Udayavani, Dec 30, 2020, 6:00 AM IST
ಕೋಟೇಶ್ವರ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರಕ್ಕೆ ರಥ ನಿರ್ಮಿಸಲು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿಗಳಾದ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ ಅವಕಾಶ ಕಲ್ಪಿಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಅಧಿಕೃತ ಪ್ರಕಟನೆ ಇನ್ನಷ್ಟೇ ಹೊರಬೀಳಬೇಕಿದೆ.
ಸ್ವರಾಜ್ಯ ಅಂಕಣಕಾರ್ತಿ ಶಿಫಾಲಿ ವೈದ್ಯ ಅವರು ಪುರಾತನ ದೇವಸ್ಥಾನಗಳ ರಥಶಿಲ್ಪ ವಿಧಾನ ವೀಕ್ಷಿಸಲು ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿರುವುದು ಈ ವಿಚಾರಕ್ಕೆ ಪುಷ್ಟಿ ನೀಡುತ್ತದೆ.
ಲಕ್ಷ್ಮೀನಾರಾಯಣ ಆಚಾರ್ಯ, ಸಹೋದರ ಶಂಕರ ಆಚಾರ್ಯ ಮತ್ತು ಪುತ್ರ ರಾಜಗೋಪಾಲ ಆಚಾರ್ಯ ಅವರ ನೇತೃತ್ವದ ತಂಡ ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಹಿತ ವಿವಿಧ ದೇವಾಲಯಗಳಿಗೆ ಚಿನ್ನ, ಬೆಳ್ಳಿ ಮತ್ತು ಮರದಿಂದ 127 ರಥಗಳನ್ನು ನಿರ್ಮಿಸಿಕೊಟ್ಟ ಅನುಭವ ಹೊಂದಿದೆ.
ಅಯೋಧ್ಯೆ ರಾಮಮಂದಿರಕ್ಕೆ ರಥ ನಿರ್ಮಿಸುವ ಬಗ್ಗೆ ಕಳೆದ ಮಾರ್ಚ್ನಲ್ಲೇ ಮಾತುಕತೆ ನಡೆದಿದ್ದು, ಮಠಾಧೀಶರೊಬ್ಬರು ಈ ತಂಡವನ್ನು ಸೂಚಿಸಿದ್ದರು. ಅವರ ಇಚ್ಛೆಯಂತೆ ಕೋಟೇಶ್ವರದ ರಥ ಶಿಲ್ಪಿ ಗಳಿಗೆ ಉಡುಪಿಯ ರಥದ ಮಾದರಿಯಲ್ಲೇ ನೂತನ ರಥ ನಿರ್ಮಾಣ ಕಾರ್ಯ ವಹಿಸಲಾಗಿದೆ. ನಿರ್ಮಾಣ ಕೋಟೇಶ್ವರದಲ್ಲಾಗುವುದೋ ಅಯೋಧ್ಯೆ ಯಲ್ಲೇ ನಡೆಸುವುದೋ ಎಂಬ ಬಗ್ಗೆ ತೀರ್ಮಾನವಾಗಿಲ್ಲ.