ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಬಗ್ಗೆ ನಿರ್ಲಕ್ಷ್ಯ ಆತಂಕಕಾರಿ
Team Udayavani, Jan 12, 2021, 2:40 AM IST
ಮಹಾನಗರ: ಕೋವಿಡ್ ವೈರಸ್ ಸೋಂಕು ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸಹಿತ ಆರೋಗ್ಯ ಸಂಬಂಧಿತ ಎಲ್ಲ ಸಂಸ್ಥೆಗಳು ಬಹಳಷ್ಟು ಪ್ರಾಮುಖ್ಯ ನೀಡಿರುವ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಬಗ್ಗೆ ಮಂಗಳೂರು ನಗರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿ ಸುತ್ತಿರುವುದು ಕಂಡು ಬಂದಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ಇಳಿಮುಖ ಆಗುತ್ತಿದ್ದಂತೆ ಜನರು ಮೈಮರೆತು ಮಾಸ್ಕ್ ಧಾರಣೆಯ ಬಗ್ಗೆ ತಾತ್ಸಾರ ಮನೋಭಾವ ಹೊಂದಿ ರುವುದು ಎಲ್ಲೆಡೆ ಗಮನಕ್ಕೆ ಬರುತ್ತಿದೆ. ಹೆಚ್ಚು ಜನ ಸೇರುವ ಸಾರ್ವಜನಿಕ ಸಭೆ-ಸಮಾರಂ ಭಗಳಲ್ಲಿ, ಬಸ್ಗಳಲ್ಲಿ ಮಾಸ್ಕ್ ಧರಿಸುವ ಕುರಿತಂತೆ ನಿರ್ಲಕ್ಷ್ಯ ತಳೆದಿರುವುದು ಕಂಡು ಬರುತ್ತಿದೆ. ನಗರದ ಬಹಳಷ್ಟು ಖಾಸಗಿ ಸಿಟಿ/ ಸರ್ವಿಸ್ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಪೈಕಿ ಮಾಸ್ಕ್ ಧರಿಸದವರೇ ಅಧಿಕ. ಇಂತಹ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ದವರೇ ಮುಜುಗರ ಅನುಭವಿಸುವ ಪರಿಸ್ಥಿತಿ ಇದೆ.
ಕೆಲವು ಬಸ್ಗಳಲ್ಲಿ ಮತ್ತು ಅಂಗಡಿಗಳಲ್ಲಿ ಮಾಸ್ಕ್ ಧಾರಣೆ ಮಾಡದವರಿಗೆ ಮಾಸ್ಕ್ ಧರಿಸಿದವರು ತರಾಟೆಗೆ ತೆಗೆದುಕೊಂಡು ಮಾಸ್ಕ್ ಧರಿಸುವಂತೆ ಆಗ್ರಹಿಸುತ್ತಿರುವ ಘಟನೆಗಳು ನಡೆಯುತ್ತಿವೆ. 10 ರೂ.ಗಳ ಮಾಸ್ಕ್ ಧರಿಸಿ 200 ರೂ. ದಂಡದ ಶಿಕ್ಷೆಯಿಂದ ಪಾರಾಗಲು ಜನರೇಕೆ ಹಿಂದೇಟು ಹಾಕುತ್ತಿದ್ದಾರೆ ಎಂದೂ ಕೆಲವರು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ.
ಮಾಸ್ಕ್ ನಿಯಮ ಉಲ್ಲಂಘನೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 200 ರೂ., ಇತರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ 100 ರೂ. ದಂಡ ಮೊತ್ತವನ್ನು ಸರಕಾರ ನಿಗದಿಪಡಿಸಿದೆ.
ಹಾಲ್ಗಳಿಗೆ ದಂಡ : ಸಭಾಂಗಣಕ್ಕೆ ಸಂಬಂಧಿಸಿ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸದಿರುವುದು ಕಂಡು ಬಂದಿದೆ. ಹಾಗಾಗಿ ಹಾಲ್ಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ಆರಂಭಿಸಲಾಗಿದೆ. ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ವತಿಯಿಂದ ಜ. 7ರಂದು 9 ಹಾಲ್ಗಳಿಗೆ 15,500 ರೂ. ಹಾಗೂ ಜ. 8ರಂದು 5 ಹಾಲ್ಗಳಿಗೆ 9,500 ರೂ. ದಂಡ ವಿಧಿಸಲಾಗಿದೆ.
ಅಂಗಡಿ, ಮಾಲ್ಗಳಲ್ಲಿ ಕೂಡ ಸಾಮಾಜಿಕ ಅಂತರ ಮತ್ತು ಮಾಸ್ಕ್ ನಿಯಮ ಉಲ್ಲಂಘಿಸುವ ಪ್ರಕರಣಗಳನ್ನು ಹೆಚ್ಚುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪದೇ ಪದೇ ನಿಯಮ ಉಲ್ಲಂಘನೆಯಾದರೆ ಅಂಗಡಿ ಪರವಾನಿಗೆ ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದು. –ಡಾ| ಮಂಜಯ್ಯ ಶೆಟ್ಟಿ, ಮನಪಾ ಆರೋಗ್ಯ ಅಧಿಕಾರಿ
ಜನರು ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸಬೇಕು. ಬಸ್ ಪ್ರಯಾಣಕ್ಕೆ ಸಂಬಂಧಿಸಿ ಬಸ್ ಹತ್ತುವಾಗ ಪ್ರಯಾಣಿಕರು ಮಾಸ್ಕ್ ಧರಿಸುತ್ತಿರುತ್ತಾರೆ. ಬಳಿಕ ಪ್ರಯಾಣದ ಸಂದರ್ಭ ಮಾಸ್ಕ್ ತೆಗೆದಿರಿಸುತ್ತಾರೆ ಅಥವಾ ಮುಖದ ಭಾಗದಿಂದ ಕೆಳಗಿಳಿಸುತ್ತಾರೆ. ಬಸ್ ಚಾಲಕ, ನಿರ್ವಾಹಕರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಪ್ರಯಾಣಿಕರೂ ಮಾಸ್ಕ್ ಧರಿಸುವಂತೆ ಮನವಿ ಮಾಡುವಂತೆ ನಿರ್ವಾಹಕರಿಗೆ ಸೂಚಿಸಲಾಗಿದೆ. –ದಿಲ್ರಾಜ್ ಆಳ್ವ, ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ